ಬೆಂಗಳೂರು: ನಗರ ಜಿಲ್ಲೆಯ ಪೂರ್ವ ತಾಲೂಕಿನ ವೈಟ್ ಫೀಲ್ಡ್ ಉಪ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ದಿನನಿತ್ಯ ಕಿರುಕುಳ ನೀಡುತ್ತಿರುವ ಆರೋಪಿಗಳನ್ನು ಬಂಧಿಸುವಂತೆ ಮತ್ತು ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ಪುತ್ಥಳಿಯ ನಿರ್ಮಾಣ ಕಾರ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ, ಜೈ ಮಾದಿಗರ ಬೌದ್ಧಿಕ ವೇದಿಕೆ, ಜೈಭೀಮ್ ದಲಿತ ಭೂರಕ್ಷಣಾ ವೇದಿಕೆ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ಜಂಟಿ ಪ್ರತಿಭಟನೆ ಮತ್ತು ತಮಟೆ ಚಳುವಳಿ ನಡೆಯಿತು.
ಒಕ್ಕೂಟದ ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್. ಮುನಿರಾಜ ಮಾತನಾಡಿ, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಪೂರ್ವ ತಾಲೂಕಿನ ವೈಟ್ಫೀಲ್ಡ್ ಉಪ ಪೊಲೀಸ್ ಆಯುಕ್ತರ ವ್ಯಾಪ್ತಿಗೆ ಬರುವ ಕಾಡುಗೋಡಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಚನ್ನಸಂದ್ರ ಎ.ಕೆ ಗೋಪಾಲ್ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರ ದಿನನಿತ್ಯ ಕಿರುಕುಳವನ್ನು ನೀಡಿ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹಿಟ್ಲರ್ ಮಾದರಿಯಲ್ಲಿ ಮಚ್ಚು ಲಾಂಗ್ ಗಳನ್ನು ಹಿಡಿದು ನಾನು ಜೂನಿಯರ್ ಜೋಗಿಯೆಂದು ಎಲ್ಲಾ ಕಡೆ ಬೆದರಿಕೆಗಳನ್ನು ಒಡ್ಡಿ ಪ್ರಾಣಬೇದರಿಕೆಯನ್ನು ಹಾಕಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜೋಗಿ ಶ್ರೀನಿವಾಸ್ ಮತ್ತು ಅವರ ಮಗನಾದ ಪ್ರಶಾಂತ್ ಅಲಿಯಾಸ್ ಜೋಗಿಬಾಸ್, ಸಂತೋಷ್ ಅಲಿಯಾಸ್ ಜೋಗಿ ಸಂತು, ರಾಧ, ಲಕ್ಷ್ಮಮ್ಮ, ನಯನ, ದೀಪಿಕ ಅಲಿಯಾಸ್ ಶಾಲಿನಿ ಮತ್ತು ಇತರರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಬಂಡಿಕೊಡಿಗೇಹಳ್ಳಿ ಗ್ರಾಮಪಂಚಾಯಿ ವ್ಯಾಪ್ತಿಯ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಅವರ 135 ನೇ ಜಯಂತಿಯ ಪ್ರಯುಕ್ತ ಪುತ್ಥಳಿಯನ್ನು ಅನಾವರಣ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ಕಿಡಿಗೇಡಿಗಳು, ಕೊಲೆಗಡುಕರು ಮತ್ತು ದಲಿತ ವಿರೋಧಿಗಳಾದ ಬಿ.ಕೆ ಮಂಜು, ವಿನೋದ, ಕಿರಣ್, ಕಾರ್ತಿಕ್, ರವಿ, ಬಂಡೆ ಮುನಿರಾಜು ಇನ್ನೂ ಹಲವು ಸವರ್ಣೀಯರು ನಿರ್ಮಾಣಕ್ಕೆ ಕಟ್ಟಿದ್ದ ಕಟ್ಟೆಯನ್ನು ಜೆಸಿಬಿ ಗಳ ಮೂಲಕ ಅನ್ಯಧಿಕೃತವಾಗಿ ತೆರವು ಮಾಡಿದ್ದಾರೆ. ಇವರಿಗೆ ಗ್ರಾಮ ಪಂಚಾಯಿತಿ ಪಿಡಿಒ ಪೂಣಚ್ಚ, ಲೆಕ್ಕಾಧಿಕಾರಿ ಉಮೇಶ್, ಬಿಲ್ ಕಲೆಕ್ಟರ್ ನಾಗರಾಜ್ ಮತ್ತು ಕಂಪ್ಯೂಟರ್ ಆಪರೇಟರ್ ಸೋಮತ್ತಹಳ್ಳಿ ಮಂಜುನಾಥ್ ಕುಮ್ಮಕ್ಕು ನೀಡಿದ್ದಾರೆ. ಹೀಗಾಗಿ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಸರ್ಕಾರಿ ಅಧಿಕಾರಿಗಳನ್ನು ಅಮಾನತ್ತಿಗೆ ಒತ್ತಾಯಿಸಿ ತಮಟೆ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿ.ಆರ್. ಮುನಿರಾಜ ಹೇಳಿದರು.













