ಬೆಂಗಳೂರು: ಕೆ.ಪಿ.ಎಸ್.ಸಿ ಉದ್ಯೋಗಾಕಾಂಕ್ಷಿಗಳ ಹೋರಾಟದಲ್ಲಿ ಬಿಜೆಪಿ ಸದಾ ಪಾಲ್ಗೊಂಡಿದೆ. ಲಂಚಾವತಾರದ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವವರೆಗೆ ಹೋರಾಟಕ್ಕೆ ಬೆಂಬಲ ನೀಡಲಿದ್ದೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಕೆ.ಪಿ.ಎಸ್.ಸಿ ವಿದ್ಯಾರ್ಥಿಗಳು ತಮ್ಮ ವಿವಿಧ ಬೇಡಿಕೆ ಮುಂದಿಟ್ಟು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಬೆಂಬಲ ನೀಡುವ ದೃಷ್ಟಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಹಿಂದೆ ತರ್ಜುಮೆ ಮಾಡಿದ ಅರ್ಥಹೀನ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೂ ಪರೀಕ್ಷೆ ಮಾಡಿ ಆಯ್ಕೆ ಮಾಡಿದ್ದಾರೆ. ಇಂತಹ ಲಜ್ಜೆಗೇಡಿ ಸರ್ಕಾರವನ್ನು ನೋಡಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಆರ್.ಅಶೋಕ್ ಮತ್ತು ನಾನು ಕೆ.ಪಿ.ಎಸ್.ಸಿ ಲಂಚಾವತಾರದ ಸಂಬಂಧ ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ತಕ್ಷಣ ಈ ಕೇಸನ್ನು ಸಿಬಿಐಗೆ ಕೊಡಬೇಕೆಂದು ಹೇಳಿದ್ದೇವೆ. ಇದು ಲಂಚಪ್ರಿಯ ಮತ್ತು ಭೂಮಿಪ್ರಿಯ ಸರ್ಕಾರ. ಮೊದಲು ವಿದ್ಯೆಯ ಮಾರಾಟ ಆಗುತ್ತಿತ್ತು. ಈಗ ಅದರ ಜೊತೆ ಹುದ್ದೆಗಳ ಮಾರಾಟ ಆಗುತ್ತಿದೆ ಎಂದು ಆಕ್ಷೇಪಿಸಿದರು.
ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತು ಹಾಕಬೇಕಿದೆ:
ಸದಾ ವಿದ್ಯಾರ್ಥಿಗಳ ಜೊತೆ ನಾವಿದ್ದೇವೆ. ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತು ಹಾಕಬೇಕಿದೆ. ಲೋಕಸೇವಾ ಆಯೋಗದಲ್ಲಿ ಸೇವೆ ಎಂಬುದೇ ಇಲ್ಲವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.













