ಬೆಂಗಳೂರು: ನರ್ಸ್ ವೃತ್ತಿ ಅತ್ಯಂತ ಸಂಕೀರ್ಣವಾದ ವೃತ್ತಿ. ಆರೋಗ್ಯ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ನರ್ಸ್ ಗಳ ಪಾತ್ರ ಬಹಳ ಹಿರಿದಾದದ್ದು. ಎಷ್ಟೋ ಬಾರಿ ನರ್ಸ್ ಗಳ ವರ್ತನೆಯೇ ರೋಗಿಗಳಿಗೆ ಧೈರ್ಯ ನೀಡುತ್ತದೆ. ಅವರುಗಳು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವ್ಯಾಖ್ಯಾನಿಸಿದರು
ಸೋಮವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಶುಶ್ರೂಷಕ ಶಿಕ್ಷಕ ಸಂಘದ ಸಹಯೋಗದಲ್ಲಿ ನಡೆದ ದಾದಿಯರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರ್ಸ್ ಗಳ ತರಬೇತಿ ಬಹಳ ಮುಖ್ಯ. ಸಂಖ್ಯೆಗಿಂತ ಗುಣಮುಟ್ಟ ಪ್ರಮುಖವಾದದ್ದು, ಒಳ್ಳೆಯ ನರ್ಸ್ ಬೇಕು ಅಂತಾದರೆ, ಒಳ್ಳೆಯ ಟ್ರೇನಿಂಗ್ ನೀಡಬೇಕು. ಇದರಿಂದ ನರ್ಸ್ ಆಗಿ ಕೆಲಸ ಮಾಡುವಾಗ ನಾಯಕತ್ವ ಗುಣ, ಮಾತೃಹೃದಯ, ಕ್ರಿಟಿಕಲ್ ವಿಶ್ಲೇಷಣೆ, ಅನುಕಂಪ, ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನರ್ಸ್ ಗಳಿಗೆ ಮಾನಸಿಕ ದೃಢತೆಯೂ ಬಹಳ ಮುಖ್ಯವಾಗುತ್ತದೆ. ಹಾಗೆಯೇ ವೃತ್ತಿಯಲ್ಲಿರುವವರಿಗೆ ಸಾಕಷ್ಟು ಸವಾಲುಗಳು ಇದೆ. ಕಡಿಮೆ ಸಂಬಳ, ಅನಿಯಮಿತ ಕೆಲಸದ ಅವಧಿ ಮುಂತಾದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದನ್ನು ಸರಿಪಡಿಸುವ ಹೊಣೆಗಾರಿಕೆ ಇದೆ. ಇದು ನನ್ನ ಗಮನದಲ್ಲೂ ಇದೆ. ಇದೆಲ್ಲದರ ನಡುವೆ ಸಂತೋಷದ ಸಂಗತಿಯೆಂದರೆ ಕರ್ನಾಟಕ, ನರ್ಸ್ ತರಬೇತಿಯಲ್ಲಿ ಬಹಳ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾದ್ಯಕ್ಷ ಯು ಟಿ ಖಾದರ್, ಶಾಸಕ ಡಾ. ರಂಗನಾಥ್, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಭಗವಾನ್ ಹಾಗೂ ಕರ್ನಾಟಕ ಶುಶ್ರುಷಕಿಯರ ಶಿಕ್ಷಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.














