ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿದ್ದಾಗ, ಕರ್ನಾಟಕದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಮಾಡುತ್ತೇವೆ ಎಂದು ಭರಬವಸೆ ನೀಡಿದ್ದರು, ಆದರೆ ಅವರು ಅಧಿಕಾರಕ್ಕೆ ಬಂದು ಮೂರು ವರ್ಷ ಆದರೂ ಅದರ ಕಡೆ ಗಮನಹರಿಸಿಲ್ಲ ಇದು ಕ್ರೈಸ್ತ ಸಮುದಾಯಕ್ಕೆ ಮಾಡಿದ ಮಹಾಮೋಸ ಎಂದು ಅಖಿಲ ಭರತ ಕ್ರೈಸ್ತ ಮಹಾಸಭಾ ಸಂಸ್ಥಾಪಕ ರಾಷ್ತ್ರೀಯ ಅಧ್ಯಕ್ಷ ಪ್ರಜ್ವಲ್ ಸ್ವಾಮಿ ಎಸ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರದ ಪ್ರೆಸ್ ಕ್ಲಬ್ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಇಡೀ ಕ್ರೈಸ್ತ ಸಮುದಾಯ ಮತ ನೀಡಿ ಅಧಿಕಾರಕ್ಕೆ ತಂದಿದೆ, ಚುನಾವಣೆಯ ಸಂದರ್ಭದಲ್ಲಿ ಪಕ್ಷ ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ನಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ವಾಗ್ದಾನ ನೀಡಲಾಗಿತ್ತು, ಆದರೆ ಅದು ಈಡೇರಿಲ್ಲ. ಅಷ್ಟೇ ಅಲ್ಲದೆ ಕ್ರೈಸ್ತ ಸಮುದಾಯದ ಭವನಗಳು, ಚರ್ಚುಗಳ ಜೀರ್ಣೋದ್ಧಾರ ಮತ್ತು ನಿರ್ಮಾಣಕ್ಕೆಂದು ಕೇಳಿದ ಹಣವನ್ನು ಬಿಡುಗಡೆ ಮಾಡಲಿಲ್ಲ ಎಂದು ದೂರಿದರು.
ಕೆಲವೆಡೆ ಮನೆ, ಪ್ರಾರ್ಥನೆ, ಚರ್ಚ್ ಆರಾಧನೆ, ಪ್ರೇಯರ್ ಮೀಟಿಂಗ್ ನಡೆಯುವಾಗ ಬಲವಂತ ಮತಾಂತರ ಎಂಬ ಆರೋಪ ಮಾಡಿ ಗುಂಪುಗಳು ದಾಳಿ ನಡೆಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ವರದಿಗಳ ಪ್ರಕಾರ ವೈಯಕ್ತಿಕ ವೈಷಮ್ಯ, ಜಾತಿ ಭೇದಭಾವ ಅಥವಾ ಕುಟುಂಬದ ವಿರೋಧದ ಹಿನ್ನೆಲೆಯಲ್ಲಿ ಕೂಡ ಮತಾಂತರ ಆರೋಪಗಳನ್ನು ಬಳಸಲಾಗಿದೆ ಎಂದರು.
ಗ್ರಾಮ ಮಟ್ಟದಲ್ಲಿ ಪ್ರಾರ್ಥನೆ ನಡೆಸುವ ಪಾಸ್ಮರ್ಗಳ ವಿರುದ್ಧ ಪ್ರಕರಣ ದಾಖಲಿಸುವುದು, ಠಾಣೆಗೆ ಕರೆದು ವಿಚಾರಣೆ ಮಾಡುವುದು, ಸಭೆ ನಿಲ್ಲಿಸುವ ಒತ್ತಡ ಇತ್ಯಾದಿ ಘಟನೆಗಳು ನಡೆದಿವೆ. ಕೆಲವು ವರದಿಗಳ ಪ್ರಕಾರ ದಲಿತ ಹಾಗೂ ಆದಿವಾಸಿ ಕ್ರೈಸ್ತರು ಹೆಚ್ಚು ಈ ಕಾಯ್ದೆಯ ದುರ್ಬಳಕೆಗೆ ಗುರಿಯಾಗುತ್ತಿದ್ದಾರೆ. ಕೂಡಲೆ ಸರ್ಕಾರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಹಾಗೂ ಸಮುದಾಯದ ಅಭಿವೃದ್ಧಿಗೆ 500 ಕೋಟಿಯನ್ನು ತಕ್ಷಣ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು
ಸುದ್ದಿಗೋಷ್ಠಿಯಲ್ಲಿ ಸುಂದರ್ ರಾಜ್ ,ಡೇವಿಡ್, ಪ್ರದೀಪ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.














