ಬಾಗಲಕೋಟೆ: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಎನ್.ಎಸ್.ಯು.ಐ ಕಾರ್ಯಕರ್ತರು ಹಾಗೂ ಹಿಂದೂ ಅಲ್ಲದ ಯುವಕರನ್ನು ಕೇಸರಿ ಶಾಲು ಹಾಕಿಸಿ ಶಿಕ್ಷಣ ಸಂಸ್ಥೆಗೆ ಕಳುಹಿಸಿ ವಿದ್ಯಾರ್ಥಿಗಳಿಗೆ ಧಮಕಿ ಹಾಕಿಸುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಆರೋಪ ಮಾಡಿದರು.
ಉಪಚುನಾವಣೆ ರಣಕಣವಾಗಿ ಬದಲಾಗುತ್ತಿದ್ದು ಬಿಜೆಪಿಯು ವಿದ್ಯಾಗಿರಿ, ಜ್ಯೋತಿ ಕಾಲೋನಿ, ಬಿಟಿಡಿಎ ಭಾಗದಲ್ಲಿ ಮನೆ ಮನೆಗೆ ತೆರಳಿ, ಮನೆ ಸದಸ್ಯರಿಗೆ ಬಿಜೆಪಿಗೆ ಮತ ನೀಡುವಂತೆ ವೀರಣ್ಣ ಚರಂತಿಮಠ ಮನವಿ ಮಾಡಿದರು. ಕೆಲ ಮನೆಗಳಲ್ಲಿ ಶಾಲು ಹೊದಿಸಿ, ಹಾರ ಹಾಕಿ ಬಿಜೆಪಿ ಅಭ್ಯರ್ಥಿಗೆ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಳೆದ ತಿಂಗಳು 23ರಿಂದ ಪ್ರಚಾರ ನಡೆಯುತ್ತಿದೆ, ಜನರು ಬಹಳ ಉತ್ಸಾಹದಿಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಶಿಕ್ಷಣ ಸಂಸ್ಥೆಗೆ ತೆರಳಿ ಅಲ್ಲಿರುವ ವಿದ್ಯಾರ್ಥಿಗಳಿಗೆ ಧಮಕಿ ಹಾಕಿಸುವ ಕೆಲಸ ಮಾಡಿದ್ದಾರೆ. ಅವರನ್ನು ನವನಗರ ಪೊಲೀಸ್ ಠಾಣೆಗೆ ಕರೆದೊಯ್ದರೆ, ಅವರ ಮೇಲೆ ಕೇಸ್ ದಾಖಲು ಮಾಡಲು ಮೀನಾಮೇಶ ಎಣಿಸುತ್ತಿದ್ದಾರೆ. ಎಲ್ಲ ರಾಜಕೀಯ ಪಕ್ಷದ ನಾಯಕರುಗಳ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿ ಯಾಕೆ ಆಗುವುದಿಲ್ಲ, ಇಲ್ಲಿ ಕಾಂಗ್ರೆಸ್ ನಲ್ಲೇ ಕೆಲವು ನಾಯಕರ ಶಿಕ್ಷಣ ಸಂಸ್ಥೆಗಳು ಇವೆ ಎಂದರು.
ನಮ್ಮ ಕಾರ್ಯಕರ್ತರು ಹೋಗಿ ಪ್ರತಿಭಟನೆ ಮಾಡಿದಾಗ ಕೇಸ್ ದಾಖಲಿಸಿದ್ದಾರೆ. 6 ಜನರ ವಿರುದ್ಧ ಕೇಸ್ ದಾಖಲಾಗಿದೆ. ಸಿಎಂ ಅವರು ತಮ್ಮ ಅಭ್ಯರ್ಥಿ ಸೋಲುವ ಭಯಕ್ಕೆ ಇಲ್ಲಿ ಬಂದು, ಇಡೀ ಮಂತ್ರಿಮಂಡಲವನ್ನೇ ಇಲ್ಲಿಗೆ ಕರೆಯಿಸಿ, ಹಣ ಹಂಚುವ ಕಲಸ ಮಾಡುತ್ತದ್ದಾರೆ. ಇಂದು ನಮ್ಮ ನಾಯಕರಾದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮತ ಪ್ರಚಾರಕ್ಕಾಗಿ ಬಾಗಲಕೋಟೆಗೆ ಆಗಮಿಸಲಿದ್ದಾರೆ. ನಮ್ಮ ಗೆಲುವು ನಿಶ್ವಿತ ಎಂದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.















