ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕುಟುಂಬಕ್ಕೆ ನೂತನ 45 ಸಾಮಾನ್ಯ ಬಸ್ಸುಗಳು ಮತ್ತು 70 ಹವಾನಿಯಂತ್ರಣ ರಹಿತ ಪಲ್ಲಕ್ಕಿ ಬಸ್ಸುಗಳು ಸೇರಿದಂತೆ ಒಟ್ಟು 115 ಬಸ್ಸುಗಳು ಹೊಸದಾಗಿ ಸೇರ್ಪಡೆಗೊಂಡಿದ್ದು, ಸಾರ್ವಜನಿಕ ಸೇವೆಗೆ ಸಜ್ಜಾಗಿವೆ.
ಬೆಂಗಳೂರಿನ ಕೆಎಸ್ಆರ್ಟಿಸಿ ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೂತನ ಬಸ್ಸಿಗೆ ಹಸಿರು ನಿಶಾನೆ ತೋರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪಲ್ಲಕ್ಕಿ ಬಸ್ಸುಗಳು ಉಡುಪಿ, ಮಂಗಳೂರು, ಮೈಸೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಂಪಿ, ರಾಯಚೂರು ಮತ್ತು ವಿವಿಧ ಜಿಲ್ಲೆಗಳು ಸೇರಿದಂತೆ ತಂಜಾವೂರು, ಕೊಟ್ಟಾಯಂ, ಹೈದರಾಬಾದ್ ಹಾಗೂ ವಿವಿಧ ರಾಜ್ಯಗಳಿಗೆ ತನ್ನ ಸೇವೆ ನೀಡಲಿವೆ ಎಂದು ಹೇಳಿದರು.
45 ಸಾಮಾನ್ಯ ಬಸ್ಸುಗಳನ್ನು ವಿವಿಧ ವಿಭಾಗಗಳಿಗೆ ಹಂಚಿಕೆ ಮಾಡಲಾಗುವುದು. ಕಳೆದ ಎರಡೂವರೇ ವರ್ಷದಲ್ಲಿ ಕರಾರಸಾ ನಿಗಮದಲ್ಲಿ ಅನುಕಂಪದ ಆಧಾರದ ಮೇಲೆ 44 ಕಿರಿಯ ಸಹಾಯಕಿಯರು, 30 ಕರಾಸಾ ಪೇದೆ ಮತ್ತು ಇಬ್ಬರು ತಾಂತ್ರಿಕ ಸಹಾಯಕರು ಮತ್ತು ಒಬ್ಬರು ನಿರ್ವಾಹಕರು ಸೇರಿದಂತೆ ಒಟ್ಟು 77 ವಿವಿಧ ಹುದ್ದೆಗಳಿಗೆ ಮಹಿಳೆಯರನ್ನು ನೇಮಕಾತಿ ಮಾಡಿಕೊಂಡಿದ್ದೇವೆ ಎಂದರು.
ಇದೇ ವೇಳೆ ನಿಗಮದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ನಿಗಮದ 17 ವಿಭಾಗಗಳಲ್ಲಿ ಉತ್ತಮ ಕಾರ್ಯ ಸಾಧನೆ ತೋರಿದ ಒಟ್ಟು 46 ಮಹಿಳಾ ಸಿಬ್ಬಂದಿಗೆ ಸನ್ಮಾನಿಸಲಾಯಿತು. ಈ ವೇಳೆ ವಿಜ್ಞಾನಿ ಡಾ.ವಿ.ಶುಭಾ, ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷ, ಸಿಬ್ಬಂದಿ ಮತ್ತು ಜಾಗೃತ ನಿರ್ದೇಶಕಿ ಕೆ.ಎಂ.ಗಾಯತ್ರಿ ಸೇರಿದಂತೆ ಮತ್ತಿತರರಿದ್ದರು.














