ಬೆಂಗಳೂರು: ಜಗತ್ತಿನಲ್ಲಿರುವ ಎಲ್ಲ ಸಮಸ್ಯೆಗಳೂ ಕಾನೂನಿನ ಆಡಳಿತದ ಜೊತೆಗೆ ಸಂಬಂಧಿಸಿದ್ದು, ಅದರ ಸೃಷ್ಟಿಯೇ ಆಗಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಇರುವ ಏಕೈಕ ಶಾಶ್ವತ ಮಾರ್ಗವೆಂದರೆ, ನ್ಯಾಯಸಮ್ಮತ ಆಡಳಿತ ವ್ಯವಸ್ಥೆ ಒಂದೇ ಎಂದು ಅಖಂಡ ಜೈನ್ ಗುರು ಪರಂಪರೆಯ ಜೈನಾಚಾರ್ಯ ಶ್ರೀ ಯುಗಭೂಷಣ ಸೂರೀಜಿ ಮಹಾರಾಜ್ ತಿಳಿಸಿದರು.
ಜೈನ್ ವಿಶ್ವವಿದ್ಯಾಲಯ, ಜ್ಯೋತ್, ಗೀತಾರ್ಥಗಂಗಾ ಸಂಸ್ಥೆಗಳು ಹಾಗೂ ಬೆಂಗಳೂರು ವಕೀಲರ ಸಂಘದ ಸಹಯೋಗದಲ್ಲಿ ವಿವಿ ಪುರದ ಜೈನ್ ಪಿ.ಯು. ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಸುಧೈವ ಕುಟುಂಬಕಂ ವಿಶ್ವಬಂಧುತ್ವದ ಪರಿಕಲ್ಪನೆಯ 5ನೇ ಚಿಂತನಾ ಸಮಾವೇಶದಲ್ಲಿ ಮಾತನಾಡಿದ ಅವರು, ನ್ಯಾಯಸಮ್ಮತ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದರೆ ಸಮಸ್ಯೆಗಳು ಬಗೆಹರಿಯುತ್ತವೆ. ಇತಿಹಾಸ ಮತ್ತು ವ್ಯಾಪಕ ಶಾಸ್ತ್ರ ಜ್ಞಾನವನ್ನು ಅಧ್ಯಯನ ಮಾಡಿದರೆ ಇದು ಅರ್ಥವಾಗುತ್ತದೆ. ನಮ್ಮ ಎಲ್ಲ ಕಾನೂನು ಸಂಸ್ಥೆಗಳಲ್ಲಿ ಮೊದಲು ಬರೆದಿರುವುದು ಯತೋ ಧರ್ಮಸ್ತತೋ ಜಯಃ ಎಂದಾಗಿದೆ. ಆದರೆ ನ್ಯಾಯಾಲಯಗಳು ಕಾನೂನಾಲಯಗಳಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾವೇಶದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯನಿರ್ವಹಣೆಗೆ ಮೂಲಭೂತ ಹಕ್ಕುಗಳು ಅತ್ಯಗತ್ಯವಾಗಿವೆ. ಇವು ಸಮಾನತೆ, ನ್ಯಾಯ ಹಾಗೂ ಸ್ವಾತಂತ್ರ್ಯದ ತತ್ವಗಳನ್ನು ಬಲಪಡಿಸುತ್ತವೆ. ಮೂಲಭೂತ ಹಕ್ಕುಗಳು ಸರ್ಕಾರದ ಅನ್ಯಾಯ ಹಾಗೂ ಅಧಿಕಾರ ದುರುಪಯೋಗದಿಂದ ನಾಗರಿಕರನ್ನು ರಕ್ಷಿಸುತ್ತವೆ. ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯ ಮತ್ತು ಗೌರವ ಕಾಪಾಡುತ್ತವೆ ಎಂದು ತಿಳಿಸಿದರು.
ನೇಪಾಳದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮೇಘರಾಜ್ ಪೋಖ್ರೆಲ್ ಮಾತನಾಡಿ, ಜಾಗತಿಕವಾಗಿ ದಕ್ಷಿಣದ ರಾಷ್ಟ್ರಗಳು ಎರವಲು ಪಡೆದ ಮಾದರಿಗಳ ಬದಲಿಗೆ ತಮ್ಮದೇ ಆದ ಸಾಂವಿಧಾನಿಕ ಮೌಲ್ಯಗಳು ಹಾಗೂ ಸಾಮಾಜಿಕ ವಾಸ್ತವಿಕತೆಗಳನ್ನು ಪ್ರತಿಬಿಂಬಿಸುವ ನ್ಯಾಯಶಾಸ್ತ್ರ ರೂಪಿಸುವ ಅನಿವಾರ್ಯತೆಗಳಿವೆ. ಸುಮಾರು 3 ಶತಮಾನಗಳಿಂದ, ಕಾನೂನು ಚರ್ಚೆಯ ಬಹುಪಾಲು ಪಾಶ್ಚಿಮಾತ್ಯ ನ್ಯಾಯಶಾಸ್ತ್ರದಿಂದ ರೂಪುಗೊಂಡಿವೆ. ಆದರೆ ಈಗ ಅದನ್ನು ಪರಿಶೀಲಿಸುವ ವಿಸ್ತರಿಸುವ ಸಮಯ ಬಂದಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ನೇಪಾಳ ವಕೀಲರ ಸಂಘದ ಕಾರ್ಯದರ್ಶಿ ಬಾಬು ರಾಮ್ ಆರ್ಯಾಲ್, ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾ.ಎ.ವಿ. ಚಂದ್ರಶೇಖರ್, ಕರ್ನಾಟಕದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಹಿರಿಯ ವಕೀಲ ಕೆ.ಜಿ.ರಾಘವನ್, ಕರ್ನಾಟಕದ ನಿವೃತ್ತ ಅಡ್ವೊಕೇಟ್ ಜನರಲ್ ಉದಯ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.













