ಬೆಂಗಳೂರು: ಚಂದಲಿಂಗಪ್ಪ ಕಲಾಲ್ ಬಂಡಿ ಅವರ ನೇತೃತ್ವದಲ್ಲಿ ಜೀತ ಮತ್ತು ದೇವದಾಸಿ ವಿಮುಕ್ತಿ ಮಹಾ ಒಕ್ಕೂಟದ ವತಿಯಿಂದ ಮೂರು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇವದಾಸಿ ಕುಟುಂಬಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಬಿ) ರಾಜ್ಯಾಧ್ಯಕ್ಷ ಡಾ ಎನ್ ಮೂರ್ತಿ ತಿಳಿಸಿದರು.
ಪ್ರತಿಭಟನೆಯ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವದಾಸಿಯರ ಪುನರ್ವಸತಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿರುವ ಕಾಯ್ದೆಯು ಪ್ರಸ್ತುತ ಕೇಂದ್ರ ಸರ್ಕಾರದ ಬಳಿಯಿದೆ. ರಾಜ್ಯ ಸರ್ಕಾರವು ತಕ್ಷಣವೇ ಅದನ್ನು ತರಿಸಿಕೊಂಡು ಪೂರ್ಣ ಪ್ರಮಾಣದ ಕಾಯ್ದೆಯನ್ನಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಯೊಂದು ದೇವದಾಸಿ ಕುಟುಂಬಕ್ಕೆ 5 ಎಕರೆ ಜಮೀನು ಹಾಗೂ ಸ್ವಂತ ಸೂರು ಇಲ್ಲದವರಿಗೆ ಸರ್ಕಾರದಿಂದ ಉಚಿತ ಮನೆಗಳನ್ನು ಒದಗಿಸಬೇಕು. ಮಾಸಾಶನವನ್ನು ಮೂರು ತಲೆಮಾರಿಗೆ ವಿಸ್ತರಿಸಬೇಕು ಹಾಗೂ ಹಾಲಿ ನೀಡುತ್ತಿರುವ ಪುನರ್ವಸತಿ ಮತ್ತು ಮಾಸಾಶನ ಮೊತ್ತವನ್ನು 2 ಸಾವಿರ ರೂ. ನಿಂದ 5 ಸಾವಿರ ರೂ. ಗೆ ಹೆಚ್ಚಿಸಬೇಕು. ದೇವದಾಸಿಯರ ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಬೇಕು ಹಾಗೂ ವಿದೇಶಿ ವ್ಯಾಸಂಗಕ್ಕೂ ಅಗತ್ಯ ಆರ್ಥಿಕ ನೆರವು ಕಲ್ಪಿಸಬೇಕು. ಅವರುಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ಸಮಾಜ ಕಲ್ಯಾಣ ಇಲಾಖೆಯು ಈ ಸಮುದಾಯದ ಒಟ್ಟಾರೆ ಏಳ್ಗೆಗೆ ಮೊದಲ ಆದ್ಯತೆ ನೀಡಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ಮಹಾರಾಷ್ಟ್ರದ ಮಾದರಿಯಲ್ಲಿ ರಾಜ್ಯದಲ್ಲೂ ಅಧ್ಯಯನ ನಡೆಸಿ, ದೇವದಾಸಿ ಕುಟುಂಬಗಳ ಪುನರ್ವಸತಿ ಮತ್ತು ಮದುವೆ ಮುಂತಾದ ಶುಭ ಕಾರ್ಯಗಳಿಗೆ 2 ಲಕ್ಷ ದಿಂದ 10 ಲಕ್ಷ ರೂವರೆಗೆ ಆರ್ಥಿಕ ನೆರವು ನೀಡುವ ಯೋಜನೆ ಜಾರಿಗೆ ತರಬೇಕು. ಈ ಕಾಯ್ದೆ ಮತ್ತು ಯೋಜನೆಯ ಸರಿಯಾದ ಅನುಷ್ಠಾನಕ್ಕೆ ಕಮಿಟಿ ರಚಿಸಿ ತನಿಖೆ ನಡೆಸಬೇಕು. ಎಲ್ಲಾ ಬೇಡಿಕೆಗಳ ಕುರಿತು ಸಮಾಜ ಕಲ್ಯಾಣ ಸಚಿವ ಕೆ. ಹೆಚ್. ಮುನಿಯಪ್ಪ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಲು ನಿರ್ಧರಿಸಲಾಗಿದೆ. ಸರ್ಕಾರ ತಕ್ಷಣವೇ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದು ಎಂದು ಡಾ ಎನ್ ಮೂರ್ತಿ ಎಚ್ಚರಿಸಿದರು.














