ಬೆಂಗಳೂರು: ಹೆಣ್ಣುಮಕ್ಕಳ ಕ್ರೀಡಾ ಚುಟುವಟಿಗಳು ಬೆಳವಣಿಗೆ ಹಂತದಲ್ಲಿದ್ದು, ಅವರಿಗೆ ಇನ್ನಷ್ಟು ಉತ್ತೇಜನ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಇನ್ನರ್ ವೀಲ್ ಸಂಸ್ಥೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಇನ್ನರ್ ವೀಲ್ ಕ್ಲಬ್ ಅಸೋಸಿಯೇಷನ್ ನೂತನ ರಾಷ್ಟ್ರೀಯ ಅಧ್ಯಕ್ಷೆ ವಿನುತಾ ಹರೀಶ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನೆಡೆಸಿ ಮಾತಾಡಿದ ಅವರು, ನಮ್ಮ 1755 ಕ್ಲಬ್ ಗಳಲ್ಲೂ ಹೆಣ್ಣು ಮಕ್ಕಳಿಗೆ ಕ್ರೀಡಾ ಮನೋಭಾವವನ್ನು ಬೆಳೆಸುವುದು ಮತ್ತು ಈ ಕುರಿತು ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ಇಡೀ ವರ್ಷ ಈ ಹಿನ್ನಲೆಯಲ್ಲಿ ಬಹುಮುಖ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕೇವಲ ನಮ್ಮ ರಾಜ್ಯ ಮಾತ್ರವಲ್ಲದೆ ಇಡೀ ದೇಶಾದ್ಯಂತ ಕ್ರೀಡೆಗೆ ಉತ್ತೇಜನ ನೀಡುವುದು ಇನ್ನರ್ ವೀಲ್ ಕ್ಲಬ್ ಅಸೋಸಿಯೇಷನ್ ಗುರಿಯಾಗಿದೆ. 60 ಸಾವಿರ ಸದಸ್ಯರೂ ಕೂಡ ಸರ್ವಾನುಮತದಿಂದ ಇದಕ್ಕೆ ಒಪ್ಪಿಗೆಯನ್ನೂ ಕೂಡ ನೀಡಿದ್ದಾರೆ ಎಂದರು.
ಜಗತ್ತಿನಲ್ಲಿ ನಮ್ಮ ಸದಸ್ಯರ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕವಾಗಿದೆ. ಈಗಾಗಲೇ 18 ಕೋಟಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪರಿಹಾರ ಒದಗಿಸುವ ಕಾರ್ಯ ಈಗಾಗಲೇ ನಡೆದಿದೆ. ಸಿ.ಎಸ್.ಆರ್ ನಿಧಿಗಳು, ಜನರಿಂದ ನೇರವಾಗಿ ಪಡೆದ ದಾನದಿಂದ ಈ ಸೇವಾ ಕಾರ್ಯಗಳನ್ನು ನೆಡೆಸಲು ಸಾಧ್ಯವಾಗಿದೆ. ಎಂ.ಎಸ್.ಎಂ.ಇ ಗಳ ಜೊತೆ ಸೇವಾ ಕಾರ್ಯವನ್ನು ನಡೆಸುವುದು ಮುಂದಿನ ಗುರಿಯಾಗಿದೆ ಎಂದು ವಿನುತಾ ಹರೀಶ್ ನುಡಿದರು.
ಹೊಸ ಮನ್ವಂತರಕ್ಕೆ ಮುನ್ನುಡಿಯೆಂಬಂತೆ ಇದೆ ಜೂನ್ 12 ರಂದು ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಮಾತನಾಡಿ, ನಮ್ಮ ಕ್ಲಬ್ ಪ್ರತಿ ತಾಲೂಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕ್ಲಬ್, ಡಿಸ್ಟ್ರಿಕ್ಟ್ಸ್, ಅಸೋಸಿಯೇಷನ್ ಇವು ನಮ್ಮ ಸಂಸ್ಥೆಯ ಪ್ರಮುಖ ವಿಭಾಗಗಳಾಗಿವೆ. ಅಸೋಸಿಯೇಷನ್ ಕ್ಲಬ್ ಮತ್ತು ಡಿಸ್ಟ್ರಿಕ್ಟ್ಸ್ ಗಳಿಗೆ ಯಾವ ರೀತಿಯ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ತಿಳಿ ಹೇಳುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತದೆ ಎಂದು ಇನ್ನರ್ ವೀಲ್ ಸಂಸ್ಥೆಯ ಕಾರ್ಯವೈಖರಿಯನ್ನು ವಿವರಿಸಿದರು.
ಸಂಸ್ಥೆಯ ಸಹ ಸಂಚಾಲಕಿ ಸುಮಾ ರವಿ, ಖಜಾಂಚಿ ಶೋಭನಾ ರಮೇಶ್, ಜಿಲ್ಲಾಧ್ಯಕ್ಷೆ ಇಶಿತಾ ಸೇಠ್, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಉಪ ಮೇಯರ್ ಎಸ್ ಹರೀಶ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯ ವೇಳೆ ಉಪಸ್ಥಿತರಿದ್ದರು.














