ಬೆಂಗಳೂರು: ಹೈಕಮಾಂಡ್ನ ನಿರ್ಧಾರಕ್ಕೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ವಿಧಾನ ಸಭಾಪತಿ ಸ್ಥಾನ ಅತ್ಯಂತ ಪವಿತ್ರವಾದ ಹುದ್ದೆಯಾಗಿದೆ ಎಂದು ನೂತನ ಸಭಾಪತಿ, ಗದಗ ಜಿಲ್ಲೆಯ ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ವಿಧಾನಸಭಾ ಸಭಾಪತಿಯಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಶಾಸಕರ ಭವನದಲ್ಲಿ ಅಭಿಮಾನಿಗಳು, ಕ್ಷೇತ್ರದ ಕಾರ್ಯಕರ್ತರಿಂದ ಅಭಿನಂದನೆಯನ್ನು ಸ್ವೀಕರಿಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸಚಿವಾಕಾಂಕ್ಷಿಯಾಗಿದ್ದರೂ ಸಹ ಪಕ್ಷದ ನಿರ್ಧಾರಕ್ಕೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಈ ವಿಷ್ಯದಲ್ಲಿ ಹೈಕಮಾಂಡ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಆಗಸ್ಟ್ 13 ಮತ್ತು 14 ರಂದು ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಗ ಅಧಿಕೃತವಾಗಿ ಪವಿತ್ರವಾದ ಸಂವಿಧಾನಾತ್ಮಕ ಸ್ಥಾನವನ್ನು ಅಲಂಕರಿಸಲು ನನಗೆ ಅವಕಾಶ ಸಿಗುತ್ತದೆ. ಚುನಾವಣಾ ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡ ನಂತರ, ನನ್ನ ಮುಂದಿನ ಯೋಜನೆಗಳು ಮತ್ತು ಸ್ಪೀಕರ್ ಪೀಠದಿಂದ ತರಬೇಕಾದ ಬದಲಾವಣೆಗಳ ಕುರಿತು ವಿಸ್ತೃತವಾದ ವಿವರಗಳನ್ನು ಹಂಚಿಕೊಳ್ಳಲಿದ್ದೇನೆ ಎಂದರು.
ಸಚಿವ ಸ್ಥಾನ ಕೈತಪ್ಪಿದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸವನ್ನು ನಿರ್ವಹಿಸಿದ್ದೇನೆ. ಹೈಕಮಾಂಡ್ ನಿರ್ಧಾರಕ್ಕೆ ಯಾವಾಗಲೂ ಬದ್ಧನಾಗಿದ್ದೇನೆ. ರಾಜ್ಯದಲ್ಲಿ 135ಕ್ಕೂ ಹೆಚ್ಚು ಶಾಸಕರು ಗೆದ್ದು ಬಂದಿರುವಾಗ, ಕೇವಲ 33 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿರುತ್ತದೆ. ಹೀಗಾಗಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ ಎಂದು ತಿಳಿಸಿದರು.
ಶಾಸಕರಲ್ಲಿ ಒಂದೆರಡು ದಿನ ಸಣ್ಣಪುಟ್ಟ ಮನಸ್ತಾಪಗಳು ಇರುವುದು ಸಹಜವಾಗಿದೆ. ಆದರೆ ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ್ ಅವರು ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಇದನ್ನು ಬಗೆಹರಿಸಲಿದ್ದಾರೆ. ಇನ್ನು ಸಭಾಪತಿಯಾಗಿ ಅಧಿಕೃತವಾಗಿ ಆಯ್ಕೆಯಾದ ನಂತರ ರೋಣ ಕ್ಷೇತ್ರದ ಜನತೆಗೆ ಮತ್ತು ರಾಜ್ಯಕ್ಕೆ ನೀಡಬೇಕಾದ ಸಂದೇಶ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಕ್ರಿಯನ್ನು ಮಾಧ್ಯಮಗಳ ಮೂಲಕ ವಿವರಿಸಲಿದ್ದೇನೆ ಎಂದು ಜಿ.ಎಸ್. ಪಾಟೀಲ್ ತಿಳಿಸಿದರು.















