ಬೆಂಗಳೂರು: ಧಾರ್ಮಿಕ ಕಾರ್ಯಗಳಿಗೆ, ಅರ್ಚಕರಿಗೆ ಮತ್ತು ದೇವಾಲಯಗಳಿಗೆ ಸಾಕಷ್ಟು ಅನುಕೂಲಗಳನ್ನು ಸಚಿವ ರಾಮಲಿಂಗರೆಡ್ಡಿ ಮುಜರಾಯಿ ಸಚಿವರಾಗಿದ್ದ ಕಾಲದಲ್ಲಿ ಮಾಡಿಕೊಟ್ಟಿದ್ದು, ಆದ್ದರಿಂದ ಅವರನ್ನು ಅದೇ ಖಾತೆಯಲ್ಲಿ ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಆಗಮ ವಿದ್ವಾನ್ ಶ್ರೀವತ್ಸ ಆಗ್ರಹಿಸಿದರು.
ಬುಧವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 8 ಬಾರಿ ಶಾಸಕರಾಗಿ ಹಲವು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಸಚಿವ ರಾಮಲಿಂಗರೆಡ್ಡಿ ಅವರಿಗೆ ಸಾಕಷ್ಟು ಆಡಳಿತಾತ್ಮಕ ಅನುಭವವಿದೆ. ಅವರು ಮುಜರಾಯಿ ದೇವಸ್ಥಾನಗಳ ಒತ್ತುವರಿಯನ್ನು ತೆರವು ಮಾಡಲು ಸಾಕಷ್ಟು ಶ್ರಮವನ್ನು ವಹಿಸಿದ್ದಾರೆ. ದೇವರ ಕುರಿತು ಅವರಿಗೆ ಅಸ್ಥೆಯಿದೆ ಈ ಹಿನ್ನಲೆಯಲ್ಲಿ ಅವರನ್ನೇ ಸಚಿವರನ್ನಾಗಿ ಮುಂದುವರೆಸಲು ಸಿ.ಎಂ ಅವರಿಗೂ ಮನವಿ ಮಾಡಲಿದ್ದೇವೆ ಎಂದು ಹೇಳಿದರು.
ಹಿಂದಿನ ಯಾವುದೇ ಮುಜರಾಯಿ ಸಚಿವರುಗಳು ಅರ್ಚಕರ ಕುರಿತು ಕಾಳಜಿ ವಹಿಸಿಲ್ಲ. ಅರ್ಚಕರಿಗೆ ತಸ್ತಿಕ್ ಹಣ ಬಿಟ್ಟರೆ ಯಾವುದೇ ಆದಾಯವಿರಲಿಲ್ಲ. ಉಳುವವನಿಗೆ ಒಡೆಯ ಕಾಯ್ದೆ ಪೂರ್ತಿಯಾಗಿ ಜಾರಿಯಾದ ನಂತರವಂತೂ ಸಾವಿರಾರು ಎಕರೆ ಭೂಮಿಯನ್ನು ಕಳೆದುಕೊಂಡು ಅಕ್ಷರಶಹ ಬೀದಿಗೆ ಬಂದರು. ಅಂದಿನಿಂದ ಇಂದಿನಿಂದವರೆಗೂ ಯಾವುದೇ ಸರ್ಕಾರಗಳು ಮಂತ್ರಿಗಳು ನಮ್ಮ ಕುರಿತು ಕಾಳಜಿ ವಹಿಸಲಿಲ್ಲ ಆದರೆ ಸಚಿವ ರಾಮಲಿಂಗರೆಡ್ಡಿ ಅವರು ಇದಕ್ಕೆ ತದ್ವಿರುದ್ಧವಾಗಿ ನಮ್ಮ ಮನವಿಗೆ ಸ್ಪಂದಿಸಿ ಸಾಕಷ್ಟು ಸವಲತ್ತುಗಳನ್ನು ಮಾಡಿ ಕೊಟ್ಟಿದ್ದಾರೆ ಎಂದು ಶ್ರೀವತ್ಸ ಶ್ಲಾಘಿಸಿದರು.
ಸಂಘಟನಾ ಕಾರ್ಯದರ್ಶಿ ಡಾ ಎನ್ ಮಂಜುನಾಥ್ ದೀಕ್ಷಿತ್ ಮಾತನಾಡಿ, ಎಂ.ಎಸ್.ಬಿಲ್ಡಿಂಗ್ ಎದುರುಗಡೆ ಇರುವ ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಧಾರ್ಮಿಕ ಸೌಧ ನಿರ್ಮಾಣ ಮಾಡಲು ಶಂಕು ಸ್ಥಾಪನೆ ಮಾಡಿದ ಕೀರ್ತಿ ಸಚಿವ ರಾಮಲಿಂಗರೆಡ್ಡಿ ಅವರದ್ದಾಗಿದೆ. ಬಸವನಗುಡಿಯ ಬಸವಣ್ಣ ದೇವರ ಕಡಲೇಕಾಯಿ ಪರಿಷೆ ಹೆಚ್ಚು ದಿನ ನಡೆಸಲು ಆದೇಶ ಮಾಡಿ ಲಕ್ಷಾಂತರ ಜನರು ವಿಕ್ಷಣೆ ಮಾಡಲ ಅನುಕೂಲ ಮಾಡಿಸಿದ ಕೀರ್ತಿ ಸಚಿವರದ್ದಾಗಿದೆ. ಅವರು ಶಿಥಿಲವಾಗಿರುವ ಹಲವಾರು ದೇವಾಲಯಗಳ ಜಿರ್ಣೋದ್ಧಾರ ಮಾಡಲು ಅನುದಾನ ನೀಡಿ ತ್ರಿಕಾಲ ಪೂಜೆ ನಡೆಯಲು ಕಾರಣಿಭೂತರಾಗಿದ್ದಾರೆ ಎಂದು ಹೇಳಿದರು.
ರಾಮಲಿಂಗರೆಡ್ಡಿಯವರ ಆಡಳಿತದ ಅವಧಿಯಲ್ಲಿ ಹಲವು ಪೂರಕ ಆದೇಶಗಳನ್ನು ಮಾಡಿ, ಇತಿಹಾಸ ನಿರ್ಮಿಸಿ, ಇಲಾಖೆಗೂ ಸರ್ಕಾರಕ್ಕೂ ಒಳ್ಳೆಯ ಹೆಸರು ತಂದಿದ್ದಾರೆ. ಅರ್ಚಕರ ಮತ್ತು ದೇವಾಲಯಗಳ ಇನ್ನೂ ಆನೆಕ ಸಮಸ್ಯೆಗಳು ಇರುವುದರಿಂದ, ಸಾವಿರಾರು ಎಕರೆ ಜಮೀನನ್ನು ದೇವಸ್ಥಾನದ ವಶಕ್ಕೆ ಪಡೆದು, ದೇವರ ಹೆಸರಿಗೆ ಖಾತೆ ಪಹಣಿ ಮಾಡಿಸಿದ್ದಾರೆ. ಆದ್ದರಿಂದ ಮುಂದೆಯೂ ಅವರಿಗೆ ಉನ್ನತ ಖಾತೆಯನ್ನು ಹಾಗೂ ಮುಜರಾಯಿ ಖಾತೆಯನ್ನು ಸಹ ನೀಡಬೇಕು ಎಂದು ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ವರಿಷ್ಠರಲ್ಲಿ ಆಗ್ರಹಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಂಟಿ ಕಾರ್ಯದರ್ಶಿ ಕೆ.ವಿ ಸುರೇಶ್ ಮೂರ್ತಿ, ರಾಜ್ಯ ಸಂಚಾಲಕ ಹೆಚ್.ಎಸ್.ಗುರು ದೀಕ್ಷಿತ್, ಖಜಾಂಚಿ ಡಾ.ಬಿ.ಕೆ ರಾಮಚಂದ್ರ, ನಿರ್ದೇಶಕರುಗಳಾದ ಕೆ.ಎನ್ ವಿಜಯೇಂದ್ರ ಕುಮಾರ್, ಎನ್ ಮಹದೇವಸ್ವಾಮಿ, ಬಸವರಾಜು, ಕೆ. ಎಸ್ ಸುಧಾಕರ್ ದೀಕ್ಷಿತ್, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.














