ಚಿತ್ರ ವಿಮರ್ಶೆ: ರೇಣುಕಾ ದೇಸಾಯಿ
ಸುಕೇಶ್ ಶೆಟ್ಟಿ ನಿರ್ದೇಶನದ ‘ಪೀಟರ್’ ಸಿನೆಮಾದ ಪ್ರೀಮಿಯರ್ ಶೋ ಇತ್ತೀಚೆಗೆ ನಡೆದಿದ್ದು, ಮಲೆನಾಡಿನ ಸೋನೆ ಮಳೆ, ಶಿಥಿಲಗೊಂಡ ಬಡವನ ವಾಸಕ್ಕೆ ಇರುವ ಚಿಕ್ಕ ಚಿಕ್ಕ ಮನೆ, ಸದಾಸುರಿಯುವ ಮಳೆಯಿಂದ ಮನೆಯ ಮೇಲೆ ಕಟ್ಟಿದ ಪಾಚಿ, ಸೋಗೆಯಿಂದ ಕಟ್ಟಿದ ಬಚ್ಚಲು ಮನೆ, ಭಾಗಮಂಡಲ ಮತ್ತು ಮಡಿಕೆರಿಯ ನಿಸರ್ಗ ಸೌಂದರ್ಯ ಹೇಗಿರುತ್ತೋ ಹಾಗೆ ನೋಡಿದ ದಟ್ಟ ಅನುಭವವಾಗುತ್ತದೆ.
ಸಿನಿಮಾದಲ್ಲಿ ತೋರಿಸುವ ಯಾವುದೇ ದೃಶ್ಯ ಸ್ಟುಡಿಯೋದಲ್ಲಿ ನಿರ್ಮಿಸಿದ್ದಲ್ಲ, ಎಲ್ಲವೂ ದೇಸೀ ದೃಶ್ಯ,ವನಸಿರಿ ಕಣ್ಣು ತುಂಬುತ್ತದೆ. ಮೊದಲಾರ್ಧ ಹಳ್ಳಿಯ ಯುವಕರ ನಳನಳಿಸುವ ಯವ್ವನದ ಲವಲವಿಕೆಯ ಆಟ, ಪಾಠ, ಅವರ ದೇಸೀ ಆಟ, ಸಾಂಸ್ಕೃತಿಕ ಪ್ರತಿಭೆ, ಅಲ್ಲಿಯ ದೇಸೀಯ ದೇವರಾಧನೆಯ ಚಂಡಮದ್ದಳೆ ನುಡಿಸುವ ಗುಂಪು, ಹಳ್ಳಿಯ ಸಾಂಸ್ಕೃತಿಕ ಚಟುವಟಿಕೆ, ಅವುಗಳನ್ನು ಅಳವಡಿಸಿಕೊಳ್ಳಲು ಧರ್ಮದ ಕಟ್ಟಳೆ ಇಲ್ಲ ಅದರ ಬಗೆಗೆ ಇರುವ ಭಕ್ತಿ ಮತ್ತು ನಂಬಿಕೆ ಮುಖ್ಯ ಎನ್ನುವ ಪ್ರಭಲ ಸಂದೇಶ ಈ ಚಿತ್ರದಿಂದ ರವಾನೆಯಾಗಿದೆ.
ಗುಂಪಿನಲ್ಲೇ ಮಾತ್ಸರ್ಯದ ಚಿಂಗಾರಿ, ಸಿನೆಮಾದ ಕಣ್ಮಣಿ ಪೀಟರ್ ಜೇವನದಲ್ಲಿ ಏನೆಲ್ಲಾ ದುಃಖದ ಘಟನೆಗಳನ್ನು ಹುಟ್ಟುಹಾಕುತ್ತದೆ ಎನ್ನುವುದನ್ನು ಚಿತ್ರ ನೋಡಿಯೇ ತಿಳಿಯಬೇಕು.ಮೊದಲಾರ್ಧ ಉತ್ಸಾಹಿ ತರುಣರು, ನಂತರದರ್ಧ ಜೀವನದ ಅನೇಕ ಮಜಲುಗಳ ದರ್ಶನ, ಪ್ರೇಕ್ಷಕನನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ. ಅಬ್ಬರವಿಲ್ಲದ ಅರ್ಥಪೂರ್ಣ ಸಾಹಿತ್ಯ, ಕಿವಿಗೆ ಇಂಪು ಕೊಡುವ ಸಂಗೀತ ನೋಡುಗರನ್ನು ಮಂತ್ರಮುಗ್ದವಾಗಿಸುತ್ತದೆ.
ಕಡಿಮೆ ಹಣದಲ್ಲಿ, ತಯಾರಾದ ಸಿನೆಮಾ ಮನಸ್ಸಿಗೆ, ಜೀವನಕ್ಕೆ ಹತ್ತಿರ ಅನ್ನಿಸುತ್ತದೆ. ಹೆಚ್ಚು,ಹೆಚ್ಚು ಒಳ್ಳೆಯ ಸಂದೇಶ ನೀಡುವದರಿಂದ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡುವ ಸಿನೆಮಾ ಇದಾಗಿದ್ದು, ಇದೇ ಶುಕ್ರವಾರ ತೆರೆಕಾಣಲಿರುವ ಪೀಟರ್ ಕುರಿತು ಪ್ರೇಕ್ಷಕ ದೇವರುಗಳು ತೀರ್ಮಾನ ಏನೆಂದು ಕಾದು ನೋಡಬೇಕಿದೆ.















