ಬೆಂಗಳೂರು: ಈ ಚಾತುರ್ಮಾಸದಲ್ಲಿ ನಡೆಯುತ್ತಿರುವ ಪಾವನವರ್ಷಾಯೋಗ ಅಭಿಯಾನ ಭಗವಂತನನ್ನು ಭಕ್ತರೊಂದಿಗೆ ಬೆಸೆಯುವ ಪ್ರಕ್ರಿಯೆಯಾಗಿದೆ. ಇದನ್ನು ಪೂರೈಸಿಕೊಳ್ಳಲು ಎಲ್ಲಾ ಆಸ್ತಿಕ ಬಂಧುಗಳು ಗುರುಗಳ ಮಾರ್ಗದರ್ಶನ ಪಡೆದು ಜೀವನದ ಸಾರ್ಥಕ್ಯ ಪಡೆಯಲು ಮುಂದಾಗಬೇಕು ಎಂದು ಆಚಾರ್ಯಶ್ರೀ ಅನೇಕಾಂತ ಸಾಗರ್ ಮಹಾರಾಜ್ ಸಲಹೆ ನೀಡಿದರು.
28ನೇ ಪಾವನ ವರ್ಷಾಯೋಗ ಆಚರಣೆ ಕರ್ನಾಟಕ ಜೈನ ಭವನದಲ್ಲಿ ಶನಿವಾರ ಸಂಜೆ ನಡೆಯಿತು. ಚಾತುರ್ಮಾಸದ ಪ್ರಯುಕ್ತ ವಿವಿಧ ಕಳಸಗಳ ಪೂಜಾ ಕಾರ್ಯ ನೆರವೇರಿತು. ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನವನ್ನು ಅನೇಕಾಂತ ಸಾಗರ್ ಮಹಾರಾಜ್ ನೀಡಿದರು. ಪರಮಾತ್ಮನನ್ನು ನೆನೆದು, ಅವನ ಆರಾಧನೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಆದ್ದರಿಂದ ಮನಸ್ಸನ್ನು ಚಾತುರ್ಮಾಸದ ಕಾಲದಲ್ಲಿ ಭಗವಂತನೆಡೆಗೆ ಹರಿಸಿ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದು ಹೇಳಿದರು.
ಚಕ್ರೇಶ್ವರಿ ಮಹಿಳಾ ಸಮಾಜ ಹಾಗೂ ಕರ್ನಾಟಕ ಜೈನ ಸಂಘ ಚಾತುರ್ಮಾಸದ ಈ ಸುಸಂದರ್ಭದಲ್ಲಿ ಚಾತುರ್ಮಾಸದ ಪ್ರಯುಕ್ತ ಇಂತಹ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸ ತಂದಿದೆ. ಎಲ್ಲರೂ ಇಲ್ಲಿ ಸಂಕಲ್ಪ ಮಾಡಿ ಗುರು ಹಿರಿಯರ ಸೇವೆಯನ್ನು ಮಾಡಬೇಕು. ಜೊತೆಗೆ ಜಪ, ತಪ ಅನುಷ್ಠಾನಗಳನ್ನು ಮುಂದಿನ ಕೆಲ ತಿಂಗಳುಗಳ ಕಾಲ ನೆರವೇರಿಸಿದರೆ ಇಡೀ ಸಮಾಜದ ಸಕಲ ಜೀವರಾಶಿಗಳ ಕಲ್ಯಾಣವೂ ಆಗುತ್ತದೆ ಎಂದರು.
ಕಾರ್ಯಕ್ರಮದ ನಂತರ ಹೊಂಬುಜ ಜೈನ ಮಠದ ಪೀಠಾಧ್ಯಕ್ಷ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಮಾದ್ಯಮಗಳ ಜೊತೆ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಪರೆಯಲ್ಲಿ ಮಳೆಗಾಲದ ನಾಲ್ಕು ತಿಂಗಳುಗಳನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಈ ತಿಂಗಳುಗಳಲ್ಲಿ ಕೃಷಿ ಚಟುವಟಿಕೆ ಚುರುಕಾಗಿ ಮನುಷ್ಯನಿಗೆ ಬೇಕಾದ ಅನ್ನ ಆಹಾರವನ್ನು ಬೆಳೆಸಲಾಗುತ್ತದೆ. ದವಸ ಧಾನ್ಯಗಳು ಮೊಳಕೆ ಒಡೆದು ಫಸಲಾಗಿ ಬೆಳೆದು ನಿಲ್ಲುತ್ತವೆ. ಇದೇ ಸಮಯದಲ್ಲಿ ಸಂಸ್ಕಾರದಿಂದ ಪೂಜೆ ಪುನಸ್ಕಾರಗಳನ್ನು ನೆರವೇರಿಸಿರೆ ಶುದ್ಧ ಮನಸನ್ನು ಇಟ್ಟುಕೊಂಡರೆ ಆತ್ಮೋನ್ನತಿಯ ಜೊತೆ ಜೊತೆಗೆ ಲೋಕಕಲ್ಯಾಣವೂ ಆಗುತ್ತದೆ ಎಂದರು.
ಚಕ್ರೇಶ್ವರಿ ಮಹಿಳಾ ಸಮಾಜದ ಮುಖ್ಯಸ್ಥೆ, ವಕೀಲೆ ನಾಗಶ್ರೀ ಪಿ ಅವರು ಮಾತನಾಡಿ, ಜೈನ ಧರ್ಮದ ಭವ್ಯ ಪರಂಪರೆಯಲ್ಲಿ ಚತುರ್ಮಾಸಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಈ ಹಿನ್ನಲೆಯಲ್ಲಿ ದಿಗಂಬರ ತತ್ವದ ಅನುಸಾರವಾಗಿ ಇಂದು ಪಾವನ ವರ್ಷಾಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೆಲಸ ಸ್ಥಾಪನೆಯನ್ನು ಸುಮಾರು 1500 ಕಿಮೀ ದೂರದ ರಾಜಸ್ಥಾನದಿಂದ ಕಾಲ್ನಡಿಗೆಯಲ್ಲಿ ಬಂದಂತಹ ಆಚಾರ್ಯಶ್ರೀ ಅನೇಕಾಂತ ಸಾಗರ್ ಮಹಾರಾಜ್ ಅವರು ನೆರವೇರಿಸುವುದು ಆಚರಣೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನುಡಿದರು.
ಧರ್ಮಸ್ಥಳ ಮಂಜುನಾಥ ದೇವಾಲಯದ ಮತ್ತು ಸಮೂಹ ಸಂಸ್ಥೆಗಳ ಟ್ರಸ್ಟೀ ಡಿ ಸುರೇಂದ್ರ ಕುಮಾರ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಪಿ.ಎನ್ ದೇಸಾಯಿ, ಕರ್ನಾಟಕ ರಾಜ್ಯ ಬಿತ್ತನೆ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.















