ಬೆಂಗಳೂರು/ಬಾಗಲಕೋಟೆ: ಗುರುವಾರ ರಾಜ್ಯದ ಜನಪ್ರಿಯ ರಾಜಕೀಯ ಧುರೀಣ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಸದಾಶಿವನಗರದ ಗೃಹ ಕಚೇರಿಯಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಶುಭಾಶಯ ಕೋರಿದರು. ಸದ್ಯ ಡಾ. ಜಿ. ಪರಮೇಶ್ವರ್ ವಿದೇಶ ಪ್ರವಾಸದಲ್ಲಿದ್ದು, ಅವರ ಅನುಪಸ್ಥಿತಿಯಲ್ಲಿಯೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಉಪಾಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ ಸದಸ್ಯ ನಜೀರ ಕಂಗನೊಳ್ಳಿ ಮಾಧ್ಯಮಗಳೊಂದಿಗೆ ಮಾತನಾಡಿ, ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ಪ್ರಮುಖ ಚಿಂತನಾಶೀಲ ನಾಯಕರಾಗಿದ್ದಾರೆ. ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಎರಡು ಅವಧಿಗೆ ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಉನ್ನತ ಶಿಕ್ಷಣ ಸಚಿವರಾಗಿ ಮತ್ತು ಗೃಹ ಸಚಿವರಾಗಿ ರಾಜ್ಯದಲ್ಲಿ ಅನೇಕ ಸುಧಾರಣೆಗಳನ್ನು ತಂದಿದ್ದಾರೆ ಎಂದರು.
ಅವರು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವುದು ರಾಜ್ಯದ ಎಲ್ಲಾ ವರ್ಗದ ಜನರ ಹಾಗೂ ಪಕ್ಷದ ಕಾರ್ಯಕರ್ತರ ಬಯಕೆಯಾಗಿದೆ. ಆದ್ದರಿಂದ ಭಗವಂತ ಅವರಿಗೆ ಆಯುಷ್ಯ, ಆರೋಗ್ಯ ನೀಡಲಿ ಹಾಗೂ ಎಲ್ಲರ ಆಶಯದಂತೆ ಇನ್ನಷ್ಟು ಉನ್ನತ ಸ್ಥಾನ ಸಿಗುವಂತಾಗಲಿ ಎಂದು ಹಾರೈಸಿದರು.
ಎಸ್.ಎಂ ಕೃಷ್ಣ ಅವರ ಸಂಪುಟದಲ್ಲಿ ಪರಮೇಶ್ವರ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲದಿಂದಲೂ ನನ್ನ ಮತ್ತು ಅವರ ಒಡನಾಟವಿದೆ. ಅವರು ಅತ್ಯಂತ ಪ್ರಾಮಾಣಿಕ ರಾಜಕಾರಣಿಯಾಗಿದ್ದಾರೆ. ಇನ್ನು ಅವರ ಜೊತೆ ಕೆಲಸ ಮಾಡಿರುವ ಅನೇಕ ನಾಯಕರು ಬೆಳೆದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನಜೀರ ಕಂಗನೊಳ್ಳಿ ಹೇಳಿದರು.
ಈ ವೇಳೆ ಧ್ಯಾನ ಯೋಗಾಶ್ರಮದ ಪೀಠಾಧ್ಯಕ್ಷ ಮಹೇಶ್ವರಾನಂದ ಸ್ವಾಮೀಜಿ ಮಾತನಾಡಿ, ಡಾ. ಜಿ. ಪರಮೇಶ್ವರ್ ಅವರು ಅತ್ಯಂತ ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ, ಹೈಕಮಾಂಡ್ ಮಟ್ಟದಿಂದ ಹಿಡಿದು ರಾಜ್ಯದಾದ್ಯಂತ ತಮ್ಮದೇ ಆದ ಪ್ರಭಾವ ಮೂಡಿಸಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರು ಸೇರಿದಂತೆ ಶೋಷಿತ ವರ್ಗಗಳ ಧ್ವನಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಬರುವ 2028ರ ಚುನಾವಣೆಯ ವೇಳೆಗೆ ಅವರಿಗೆ ಇನ್ನಷ್ಟು ಉನ್ನತ ಹಾಗೂ ಉತ್ತಮ ಭವಿಷ್ಯ ಲಭಿಸಲಿ ಎಂದು ಆಶೀರ್ವದಿಸಿದರು.
ಡಾ. ಜಿ ಪರಮೇಶ್ವರ್ ಅವರ ಹುಟ್ಟುಹಬ್ಬದ ಅಂಗವಾಗಿ ತವಕ್ಕಲ್ ಮಸ್ತಾನ್ ಷಾ ದರ್ಗಾಗೆ ಕೂಡ ಭೇಟಿ ನೀಡಿ ಪ್ರಾರ್ಥಿಸಲಾಯಿತು. ಕಾರ್ಯಕರ್ತರು ಮುಖಂಡರು ಹಲವು ಸೇವಾ ಕಾರ್ಯಗಳನ್ನು ಸಹ ಕೈಗೊಂಡರು.















