ಬೆಂಗಳೂರು: ಜಿಡ್ಡು ಹಿಡಿದಿರುವ ಮನಸ್ಸುಗಳು ಮತ್ತು ದೇಹಗಳನ್ನು ಸುಸ್ತಿಗೆ ಮರಳಿ ತರಲು ಮರಗಳಿಗಾಗಿ ಓಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕ್ಷೀಣಿಸುತ್ತಿರುವ ಹಸಿರು ಹೊದಿಕೆಗೆ ಪರಿಹಾರವಾಗಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಅವಶ್ಯಕತೆ ಬಹಳಷ್ಟಿದೆ ಎಂದು ಮಾಜಿ ಶಾಸಕ ನೆಲ ನರೇಂದ್ರ ಬಾಬು ಹೇಳಿದರು.
ಶುಕ್ರವಾರ ನಗರದ ಗ್ರೀನ್ ಪಾತ್ ಆರ್ಗ್ಯಾನಿಕ್ ಆರ್ಗ್ಯಾನಿಕ್ ರೆಸ್ಟೋರೆಂಟ್ ನಲ್ಲಿ ರನ್ ಫಾರ್ ಟ್ರೀಸ್ ಮ್ಯಾರಥಾನ್ ಓಟದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಲಿಕಾನ್ ಸಿಟಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹಸಿರು ಹೊದಿಕೆ ಎನ್ನುವುದು ಕಡಿಮೆಯಾಗುತ್ತಾ ಹೋಗುತ್ತಿದೆ. ಗಾಂಧಿನಗರದಲ್ಲಿ ಶೇಕಡಾ 8 ರಷ್ಟಿದ್ದ ಹಸಿರು ಹೊದಿಕೆ ಇಂದು 2 ಕ್ಕೆ ಇಳಿದಿದೆ, ಚಿಕ್ಕಪೇಟೆಯಲ್ಲಿ ಶೇಕಡಾ 3 ರಷ್ಟಿದದ್ದು 1 ಕ್ಕಿಂದ ಕಡಿಮೆಯಾಗಿದೆ. ಜಯನಗರದಲ್ಲಿ 32 ರಷ್ಟು ಇರುವುದು 22 ಕ್ಕೆ ಬಂದು ನಿಂತಿದೆ. ರಾಜಾಜಿನಗರದಲ್ಲಿ 30 ರಿಂದ 18 ರಷ್ಟಾಗಿದೆ. ಯಲಹಂಕ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳ ಹೊರವಲಯವನ್ನು ಹೊರತುಪಡಿಸಿದರೆ ಗ್ರೀನ್ ಕ್ಯಾಪ್ ಕಡಿಮೆಯಾಗುತ್ತಾ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಮನುಷ್ಯನಿಗೆ ಮೂರು ಸಮೃದ್ಧಿಯಾದ ಮರಗಳು ಆರೋಗ್ಯಕರ ಉಸಿರಾಟಕ್ಕೆ ಬೇಕಾಗಿದೆ. ಶುದ್ಧ ಗಾಳಿಯನ್ನು ಬಿಟ್ಟು ಕಲುಷಿತವಾದ ಗಾಳಿಯನ್ನು ನಾವು ಮತ್ತು ನಮ್ಮ ಮಕ್ಕಳು ಸೇವನೆಯನ್ನು ಮಾಡುತ್ತಿರುವುದು ಹಲವು ಶ್ವಾಸ ಕೋಶದ ಸಂಬಂಧಿ ಕಾಯಿಲೆಗಳಿಗೆ ಮುನ್ನಡಿಯಾಗಿದೆ. ಜೊತೆ ಜೊತೆಗೆ ಕೆರೆಗಳ ನಾಶ ಅಂತರ್ಜಲ ಕ್ಷೀಣಿಸುವ ಸಮಸ್ಯೆಗೆ ಕಾರಣವಾಗುತ್ತಿದೆ. ನಗರದ ಒಂದೂಕಾಲು ಕೋಟಿಗೂ ಹೆಚ್ಚು ಜನಸಂಖ್ಯೆ ನೀರಿನ ಸಮಸ್ಯೆಗೆ, ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕಣ್ಣು ಮುಂದೆ ಇದ್ದು, ಇದಕ್ಕೆಲ್ಲ ಪರಿಹಾರ ಮರ ನೆಡುವುದು ಒಂದೇ ಆಗಿದೆ ಎಂದು ಅಭಿಪ್ರಾಯಪಟ್ಟರು.
ಗ್ರೀನ್ ಪಾತ್ ಸಂಸ್ಥಾಪಕ ಹೆಚ್. ಆರ್ ಜಯರಾಂ ಮಾತನಾಡಿ, ಟ್ರೀ ಕಲ್ಟರ್ ಎನ್ನುವುದು ನಿರಂತರ ಆಹಾರ ಮತ್ತು ಆದಾಯ ನೀಡುವ ಕೃಷಿ ಪದ್ಧತಿ ಆಗಿದ್ದು, ನಮ್ಮ ಭಾರತ ದೇಶವನ್ನು ಒಳಗೊಂಡಂತೆ ಈಗಾಗಲೇ ಹತ್ತಾರು ದೇಶಗಳಲ್ಲಿ ಪುಚಲಿತದಲ್ಲಿದೆ. ಆಹಾರ ಅರಣ್ಯ ಕೃಷಿ ಮಾದರಿಗಳು ಶೂನ್ಯ ಖರ್ಚು ಮತ್ತು ಕಡಿಮೆ ನೀರಿನ ಬಳಕೆ ಹಾಗೂ ಮಣ್ಣಿನ ಫಲವತ್ತತೆಯನ್ನು ಹೊಂದಿರುತ್ತದೆ. ನಮ್ಮ ದೇಶದ ಸದ್ಯದ ಎಲ್ಲಾ ಕೃಷಿ ಸಮಸ್ಯೆಗಳಿಗೂ ಮರ ಕೃಷಿಯೆ ಬಹು ದೊಡ್ಡ ಪರಿಹಾರವಾಗಬಲ್ಲದು. ಕೆಲ ವರ್ಷಗಳಲ್ಲಿ ಮರ ಕೃಷಿ ಆಹಾರ ಅರಣ್ಯ ದೊಡ್ಡ ಆಹಾರ ಕ್ರಾಂತಿಯನ್ನು ಮಾಡಬಲ್ಲದು ಎಂದು ತಿಳಿಸಿದರು.
ನಮ್ಮ ಸಂಸ್ಥೆಯು ಕಳೆದ 27 ವರ್ಷಗಳ ಹಿಂದೆಯೇ ಈ ಕೃಷಿ ಮಾದರಿಯನ್ನು ನೆಲಮಂಗಲದ ಬಳಿಯ ಸುಕೃಷಿ ಸಾವಯವ ತೋಟದಲ್ಲಿ ಅಳವಡಿಸಿ ಒಂದು ಸ್ಪಷ್ಟ ಮಾದರಿಯನ್ನು ಸೃಷ್ಟಿಸಿದೆ. ದೇಶ ವಿದೇಶಗಳಿಂದ ಕೃಷಿಕರು ಹಾಗು ಆಸಕ್ಷರು ಇದನ್ನು ನೋಡಿ ಅನುಕರಿಸುತ್ತಿದ್ದಾರೆ. ಈ ಪದ್ಧತಿಯನ್ನು ಚಳುವಳಿಯನ್ನಾಗಿ ರೂಪಸಲು ರನ್ ಫಾರ್ ಟ್ರೀಸ್ ಯೋಜನೆ ರೂಪುಗೊಂಡಿದೆ ಎಂದರು.
ಕಾರ್ಯಕ್ರಮದ ವ್ಯವಸ್ಥಾಪಕಿ ಭಾಗ್ಯಲಕ್ಷ್ಮಿ ಜಿ.ಆರ್ ಮಾತನಾಡಿ, ಎಲ್ಲಾ ಸಮುದಾಯಗಳನ್ನು ಈ ಚಳುವಳಿಯ ಸಂಪೂರ್ಣ ಭಾಗವನ್ನಾಗಿ ಮಾಡಲು ವಿಭಿನ್ನವಾದ ಮ್ಯಾರಥಾನ್ ಮತ್ತು ವಾಲ್ಕೆಥಾನ್ ಅನ್ನು ಜೂನ್ 28 ರಂದು ಬೆಳಗ್ಗೆ 5.30 ಕ್ಕೆ ಆಯೋಜಿಸಲಾಗಿದೆ. ಸುಮಾರು 5000 ಓಟಗಾರರು ಭಾಗವಹಿಸುವ ನಿರೀಕ್ಷೆ ಇದೆ. ನಮ್ಮದು ಒಬ್ಬ ಓಟಗಾರ /ಗಾರ್ತಿಗೆ ಒಂದು ಮರ ಎಂಬ ಪರಿಕಲ್ಪನೆ ಆಗಿದೆ. ಆದ್ದರಿಂದ ಅಂಡಿನ ದಿನ ಸ್ಯಾಂಕಿ ಟ್ಯಾಂಕಿನ ಬದುಗಳಲ್ಲಿ ಗಿಡ ನೆಡುವ ಅಭಿಯಾನವನ್ನು ಸಾಂಕೇತಿಕವಾಗಿ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯ ವ್ಯಕ್ತಿಗಳು ಮತ್ತು ಪರಿಸರ ಪ್ರೇಮಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರೇಸ್ ಡೈರೆಕ್ಟರ್ ಸುನಿಲ್ ಕೆ.ಜಿ ಭಾನುವಾರದ ಕಾರ್ಯಕ್ರಮದ ವಿವರಣೆ ನೀಡಿದರು. ಹಲವು ಗಣ್ಯ ವ್ಯಕ್ತಿಗಳು ಪರಿಸರ ಪ್ರೇಮಿಗಳು ಸುದ್ದಿಗೋಷ್ಠಿಯ ವೇಳೆ ಹಾಜರಿದ್ದರು.














