ಬೆಂಗಳೂರು: ಬಿಲ್ ಕಲೆಕ್ಟರ್ ಗಳು ಸರ್ಕಾರದ ಆಧಾರಸ್ತಂಭ, ಆದರೆ ಸರ್ಕಾರದ ಕೆಲ ಆದೇಶಗಳು ಅವರುಗಳಿಗೆ ಮಾರಕವಾಗಿವೆ. ಜೀಷ್ಟತೆ ಮತ್ತು ಪದೋನ್ನತಿಯ ಪರಿಗಣನೆಯಲ್ಲಿ ಸಾಕಷ್ಟು ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ನೌಕರರ ಸಂಘದ ಅಧ್ಯಕ್ಷ ನಾರಾಯಣ್ ಅವರು ಬೇಸರ ವ್ಯಕ್ತಪಡಿಸಿದರು.
ಶುಕ್ರವಾರ ಸಚಿವಾಲಯ ಕ್ಲಬ್ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಗಳ ಸಮಾಲೋಚನ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ವೇತನ ಶ್ರೇಣಿಯ ಸರಿಯಾದ ವ್ಯವಸ್ಥೆ ಈವರೆಗೆ ನಿಗದಿಯಾಗಿಲ್ಲ. ಸರ್ಕಾರದ ಅಂಗ ಸಂಸ್ಥೆಯ ಅಡಿಯಲ್ಲಿ ಪೂರ್ಣಾಾವಧಿ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದರು ಸಹ ಕಾರ್ಮಿಕ ಇಲಾಖೆಯ ವೇತನ ಶ್ರೇಣಿಯ ಅನ್ವಯ ವೇತನವನ್ನು ಪಾವತಿ ಮಾಡಲಾಗುತ್ತಿದೆ. ಈ ತಾರತಮ್ಯವನ್ನು ಒಪ್ಪಲು ಸಾಧ್ಯವಿಲ್ಲ. ನಮ್ಮ ಎಲ್ಲಾ ಸಮಸ್ಯೆಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಹ ಪತ್ರವನ್ನು ಬರೆಯಲು ಸಹ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸದಾಗಿ ಕೆಲಸಕ್ಕೆ ಬಿಲ್ ಕಲೆಕ್ಟರ್ ಆಗಿ ಸೇರಿದ ನೌಕರನಿಗೆ 24 ಸಾವಿರ ವೇತನ ಪಾವತಿಯಾಗುತ್ತಿದ್ದು, 15 ವರ್ಷ ಸೇವೆಯನ್ನು ಪೂರೈಸಿದವರಿಗೂ ಸಹ ಅದೇ ವೇತನವನ್ನು ನೀಡಲಾಗುತ್ತಿದೆ. ಸಂಬಳಕ್ಕೆ ಸೇವಾ ಹಿರಿತನವನ್ನು ಪರಿಗಣಿಸಲಾಗುತ್ತಿಲ್ಲ. ನೂರಾರು ನೌಕರರು ನಿವೃತ್ತಿಯ ಅಂಚಿನಲ್ಲಿದ್ದು ಅವರುಗಳಿಗಂತೂ ಮುಂದಿನ ಜೀವನಕ್ಕೆ ಯಾವುದೇ ಭದ್ರತೆ ಇಲ್ಲ. ಈ ವಿಚಾರಕ್ಕೆ ರಾಜ್ಯ ಸರ್ಕಾರ ಕೂಡಲೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಮಧು ದೇಶಿ ಅವರು ಮಾತನಾಡಿ, ರಾಜ್ಯದ ಎಲ್ಲಾ 31 ಜಿಲ್ಲೆಗಳಿಂದ ಬಿಲ್ ಕಲೆಕ್ಟರ್ ಗಳು ಈ ಸಮಾಲೋಚನಾ ಸಭೆಗೆ ಆಗಮಿಸಿದ್ದರು. ರಾಜ್ಯಾಧ್ಯಕ್ಷ ನಾರಾಯಣ್ ಅವರು ನಮ್ಮೆಲ್ಲರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂಬ ನಿಟ್ಟಿನಲ್ಲಿ ನಿರಂತರ ಹೋರಾಟವನ್ನು ನಡೆಸುತ್ತಿದ್ದು, ಅವರಿಗೆ ಸಭೆಯಲ್ಲಿ ಸಂಪೂರ್ಣ ಬೆಂಬಲ ಸೂಚಿಸಲಾಗಿದೆ. ಸರ್ಕಾರದ ಜೊತೆಗೆ ಪತ್ರ ವ್ಯವಹಾರ ನಡೆಸುವ ಮೂಲಕ ಅವರು ನಮಗೆ ನ್ಯಾಯ ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದ್ದು, ನಾವೆಲ್ಲರೂ ಅವರಿಗೆ ಚಿರಋಣಿಯಾಗಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಶ್ರೇಣಿ ಎನ್ನುವುದೇ ಇಲ್ಲದಾಗಿದ್ದು, ಪದೋನ್ನತಿಯ ವಿಚಾರವೇ ಅಪ್ರಸ್ತುತವಾಗಿದೆ. ಈ ವಿಚಾರವಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಕೂಡ ಸಮಾಲೋಚನಾ ಸಭೆಗೆ ಆಗಮಿಸಿ ವಿಷಾದ ವ್ಯಕ್ತಪಡಿಸಿದ್ದಾರೆ. ಸಂಘದ ವತಿಯಿಂದ ಕೂಡ ಮುಖ್ಯ ಕಾರ್ಯದರ್ಶಿ ಅವರಿಗೆ ಬೇಡಿಕೆಯನ್ನಿಟ್ಟು ನ್ಯಾಯ ದೊರಕಿಸಿಕೊಡುವ ಆಶ್ವಾಸನೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆ ಬಿಲ್ ಕಲೆಕ್ಟರ್ ಗಳ ಸಂಘದ ಗೌರವಾಧ್ಯಕ್ಷ ಗೋವಿಂದಪ್ಪ, ಉಪಾಧ್ಯಕ್ಷರುಗಳಾದ ರವಿಕುಮಾರ್ ಕೆ ಮತ್ತು ರಂಗಸ್ವಾಮಿ, ಖಜಾಂಚಿ ಬಸವರಾಜೇಗೌಡ, ಸಹ ಕಾರ್ಯದರ್ಶಿ ಮಲ್ಲೇಶ್ ಪೂಜಾರ್, ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಿಲೀಪ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.














