ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ 12 ಕಚೇರಿಗಳ ಮೇಲೆ ನಡೆಸಿರುವ ಲೋಕಾಯುಕ್ತ ದಾಳಿ ವೇಳೆ ಅಕ್ರಮ, ಭ್ರಷ್ಟಾಚಾರ, ನಿಯಮ ಉಲ್ಲಂಘನೆ ಸೇರಿದಂತೆ ಸಿಬ್ಬಂದಿಯ ಖಾತೆಗೆ ಡಿಜಿಟಲ್ ಲಂಚದ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.
ಬೆಂಗಳೂರು ದಕ್ಷಿಣ-4 ರ ಉಪ ವಿಭಾಗದ ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಪಾಲಕರು ತಮ್ಮ ಮಕ್ಕಳ ಹೆಸರು ಮತ್ತು ಪೋಷಕರ ಹೆಸರನ್ನು ಆಧಾರ್ ಕಾರ್ಡ್ನಲ್ಲಿ ಇರುವಂತೆ ಶಾಲಾ ದಾಖಲಾತಿಗಳಲ್ಲಿ ತಿದ್ದುಪಡಿ ಮಾಡಿಸುವಂತೆ ಅರ್ಜಿ ಸಲ್ಲಿಸಲು ಬಂದಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಎಸ್ಡಿಎ ಸೌಭಾಗ್ಯ ಅವರ ಖಾತೆಗೆ ಫೋನ್ ಪೇ ಮೂಲಕ ಕಳೆದ ತಿಂಗಳಿನಲ್ಲಿ 50 ರಿಂದ 60 ಸಾವಿರ ರೂ. ಜಮೆಯಾಗಿರುವುದು ಕಂಡು ಬಂದಿದೆ. ಕಚೇರಿ ಅಧೀಕ್ಷಕ ಶಿವಾನಂದ ಕುಮಾರ್ ಅವರ ಖಾತೆಗೆ ಒಂದೇ ತಿಂಗಳಲ್ಲಿ 1.40 ಲಕ್ಷ ರೂ. ಗಿಂತ ಅಧಿಕ ಹಣ ಜಮೆಯಾಗಿದೆ. ಜತೆಗೆ, ಬಿಇಒ ಗೋವಿಂದಪ್ಪ ಅವರ ಖಾತೆಗೂ 5 ರಿಂದ 10 ಸಾವಿರ ರೂ. ಹಣ ಜಮೆಯಾಗಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಬಿಇಒ ಕಚೇರಿಯ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ನರ್ಸರಿ ಶಾಲೆಗಳಿವೆ. ಆದರೆ, ಕೇವಲ 50 ಮೀಟರ್ ಅಂತರದಲ್ಲಿ ಕಿರಣ್ ಬಾರ್ ಮತ್ತು ರೆಸ್ಟೋರೆಂಟ್ ರಾಜಾರೋಷವಾಗಿ ನಡೆಯುತ್ತಿದೆ. ಶಿಕ್ಷಣ ಇಲಾಖೆಯ ಆವರಣದಲ್ಲೇ ಮದ್ಯದಂಗಡಿ ಇದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಕಂಡು ಬಂದಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ರಜೆ, ವೇತನ ಮಂಜೂರಾತಿ, ವಾರ್ಷಿಕ ಬಡ್ತಿ, ವರ್ಗಾವಣೆ ಹಾಗೂ ನಿವೃತ್ತಿ ವೇತನ ಪ್ರಕರಣಗಳ ಬಗ್ಗೆ ರಿಜಿಸ್ಟ್ರಾರ್ ಪರಿಶೀಲಿಸಿದಾಗ ಮೇಲ್ನೋಟಕ್ಕೆ ದಾಖಲೆ ನಿರ್ವಹಣೆ ಮಾಡದಿರುವುದು ಕಂಡುಬಂದಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ವಿಭಾಗದ ಉಪನಿರ್ದೇಶಕರ ಕಚೇರಿ ಪರಿಶೀಲನೆ ವೇಳೆ ಡಿಡಿಪಿಐ ಎಂ. ವಿವೇಕಾನಂದ ಕಚೇರಿಯಲ್ಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಕೆ.ಆರ್.ಪುರಕ್ಕೆ ಹೋಗಿರುವುದಾಗಿ ಮೇಲ್ವಿಚಾರಕರು ಮಾಹಿತಿ ನೀಡಿದ್ದಾರೆ. ಹಾಗೂ ಕಚೇರಿಯಲ್ಲಿ ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸದ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಉತ್ತರ ಉಪವಿಭಾಗದ-೪ ಕಚೇರಿಯಲ್ಲಿನ ಹಾಜರಾತಿ ಪುಸ್ತಕಗಳನ್ನು ಪರಿಶೀಲಿಸಿದ್ದು, ಒಟ್ಟು 22 ಜನ ಅಧಿಕಾರಿ/ಸಿಬ್ಬಂದಿ ಹಾಜರಿರುವುದು ಕಂಡುಬಂದಿದೆ. ಈ ಪೈಕಿ ಕೆಲ ಸಿಬ್ಬಂದಿ ಸಹಿ ಮಾಡದಿರುವುದು ಪತ್ತೆಯಾಗಿದೆ. ಪ್ರಥಮ ದರ್ಜೆ ಸಹಾಯಕಿ ಯಶೋದಮ್ಮ ರಜೆ ಮಂಜೂರಾತಿ ಇಲ್ಲದೆ ಮಧ್ಯಾಹ್ನ ಕಚೇರಿಯಲ್ಲಿರದೆ ಗೈರುಹಾಜರಾಗಿರುವುದು ಗೊತ್ತಾಗಿದೆ.














