ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ವಿವಿಧ ಪರೀಕ್ಷೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ವತಿಯಿಂದ ಬುಧವಾರ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕಾಂತಕುಮಾರ್, ಕೆಪಿಎಸ್ಸಿಯ ಪ್ರತಿಯೊಂದು ಪರೀಕ್ಷಾ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಖ್ಯವಾಗಿ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಕುರಿತು ಸಾಕ್ಷ್ಯಸಮೇತ ದೂರು ನೀಡಲಾಗಿದೆ. ಎರಡು ಎಫ್.ಐ.ಆರ್ ಗಳು ದಾಖಲಾಗಿದ್ದರೂ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಆದರೆ ನಮಗೆ ಸಿಐಡಿ ತನಿಖೆಯಲ್ಲಿ ನಂಬಿಕೆಯಿಲ್ಲ, ಈ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪದವಿಯಲ್ಲಿ ಎರಡರಿಂದ ಮೂರು ಬಾರಿ ಅನುತ್ತೀರ್ಣರಾದವರು ಟಾಪರ್ಸ್ ಆಗಿದ್ದಾರೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳ ಆಯ್ಕೆಯಲ್ಲೂ ಅಕ್ರಮ ನಡೆದಿದೆ, 466.5 ಅಂಕಗಳನ್ನು ಪಕ್ಕಪಕ್ಕದ ಸಾಲಿನಲ್ಲಿ ಕುಳಿತ ಅಭ್ಯರ್ಥಿಗಳು ಒಂದೇ ಅಂಕವನ್ನು ಗಳಿಸಿದ್ದಾರೆ. ಒಎಂಆರ್ ಶೀಟ್ ತಿದ್ದುಪಡಿ ಸೇರಿದಂತೆ ಹಲೊ ರೀತಿಯ ಅಕ್ರಮಗಳು ನಡೆದಿವೆ. ಕೆಎಎಸ್ ಪರೀಕ್ಷೆಯಲ್ಲೂ 384 ಹುದ್ದೆಗಳ ಪೈಕಿ ಸಂದರ್ಶನವನ್ನು ನೀಡಿರುವ 1,158 ಅಭ್ಯರ್ಥಿಗಳಲ್ಲಿ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಹಣ ನೀಡಿ ಆಯ್ಕೆಯಾಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಸದಸ್ಯರ ರಾಜೀನಾಮೆಗೆ ಆಗ್ರಹ:
ಕೆಪಿಎಸ್ಸಿಯ 16 ಸದಸ್ಯರಲ್ಲಿ ಬಹುತೇಕರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದಸ್ಯರಾದ ಭೋಜ ನಾಯಕ್ ಮತ್ತು ಶಾಂತಾ ಹೊಸಮನಿ ಅವರ ವಿರುದ್ಧ ಗಂಭೀರ ಆರೋಪಗಳಿದ್ದು, ಮಧ್ಯವರ್ತಿಗಳ ಮೂಲಕ ಲಕ್ಷಾಂತರ ರೂಪಾಯಿ ಡೀಲ್ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಕೆ.ಪಿ.ಎಸ್.ಸಿಯ ಎಲ್ಲಾ 16 ಸದಸ್ಯರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಿಬಿಐ ತನಿಖೆಯಾಗದಿದ್ದರೆ ತೀವ್ರ ಹೋರಾಟ :
ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯ್ದೆಯಡಿ ಇದುವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಕೆಪಿಎಸ್ಸಿ ನಡೆಸಿರುವ ಪ್ರತಿಯೊಂದು ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ. ಸರಕಾರ ಈ ಕೂಡಲೇ ಎಲ್ಲಾ ಪರೀಕ್ಷೆಗಳ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಬೇಕು. ಶುಕ್ರವಾರ ನ್ಯಾಯಾಲಯದಲ್ಲಿಯೂ ಈ ಕುರಿತು ವಿಚಾರಣೆ ಇದ್ದು, ನಮಗೆ ನ್ಯಾಯ ಸಿಗುವವರೆಗೂ ಮತ್ತು ಸಿಬಿಐ ತನಿಖೆಗೆ ಆದೇಶಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕಾಂತಕುಮಾರ್ ಹೇಳಿದರು.















