ಬೆಂಗಳೂರು: ಈ ದೇಶದಲ್ಲಿ ಅಸಮಾನತೆ ಇನ್ನೂ ಕಾಣಸಿಗುತ್ತಿದೆ. ಆರ್ಥಿಕ ತಾರತಮ್ಯ ಕೂಡ ಮನೆ ಮಾಡಿದೆ, ಕರ್ನಾಟಕದ ಪರಿಶಿಷ್ಟರಲ್ಲಿ 101ಜಾತಿಗಳಿವೆ, ಇದರಲ್ಲಿ ಸ್ಪಶ್ಯ ಜಾತಿಗಳು ಸಹ ಇದ್ದಾರೆ, ಇಲ್ಲಿಯೂ ಕೂಡ ಅಸಮಾನತೆ ಇದೆ ಎಂದು ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಸೋಮವಾರ ಗಾಯತ್ರಿನಗರದ ಮಾರುತಿ ಬಡಾವಣೆಯಲ್ಲಿರುವ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ ರಾಜಮಂತ್ರ ಪ್ರವೀಣ ಹೆಚ್. ಬಿ ಗುಂಡಪ್ಪ ಗೌಡ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಲೆಯರು ಮಾದಿಗರಿಗಿಂತ ಹೆಚ್ಚಿದ್ದೇವೆ ಎಂದು ಹೇಳುತ್ತಾರೆ, ಮಾದಿಗರು ಹೊಲೆಯರಿಗಿಂತ ಶ್ರೇಷ್ಠರು ಎಂದು ಹೇಳುತ್ತಾರೆ. ದಲಿತರು ಮಾದಿಗರಿಗಿಂತ ಶ್ರೇಷ್ಠರು ಎನ್ನುತ್ತಾರೆ, ಅಸ್ಪೃಶ್ಯರಲ್ಲಿ ಸಾಕಷ್ಟು ಜಾತಿ ತಾರತಮ್ಯ ಇದೆ ಎಂದರು.
ಅನೇಕ ಮಹಾತ್ಮರು ಜಾತಿ ವ್ಯವಸ್ಥೆ ಬಗ್ಗೆ ಧ್ವನಿ ಎತ್ತಿದ್ದರು ಅದರಲ್ಲಿ ಅಂಬೇಡ್ಕರ್ ಕೂಡ ಒಬ್ಬರು, ಭಾರತದ ಸಂವಿಧಾನದಲ್ಲಿ ಸಮಾಜಿಕ ನ್ಯಾಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ, ಕೇಶವಾನಂದ ಪ್ರಕರಣದಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯಲಾಗಿದೆ. ಸಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಬುಡಕಟ್ಟು ಜನಾಂಗದವರು ರಾಷ್ಟ್ರಪತಿಗಳಾಗಿದ್ದಾರೆ, ಹಿಂದುಳಿದ ವರ್ಗದವರು ಪ್ರಧಾನಿಯಾಗಿದ್ದಾರೆ ಎಂದು ಹೇಳಿದರು.
ಈ ದೇಶದಲ್ಲಿ ಅಲೆಮಾರಿಗಳಿಗೆ, ದೇವದಾಸಿಗಳಿಗೆ ಮೀಸಲಾತಿ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಸಂವಿಧಾನದ ಸಮಾಜಿಕ ನ್ಯಾಯ ವಿಚಾರದಲ್ಲಿ ಸವಾಲುಗಳಿವೆ. ಅಂತರ್ಜಾತಿ, ಅಂತರ್ಧರ್ಮೀಯ ವಿವಾಹವಾದವರಿಗೆ ಸರಿಯಾದ ಮೀಸಲಾತಿ ಹಕ್ಕುಗಳು ದೊರೆತಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಒಲಸೆ ಹೋದವರಿಗೆ ಯಾವುದೇ ಸವಲತ್ತುಗಳು ದೊರೆತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಮಹಿಳಾ ಮೀಸಲಾತಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಮತ್ತು ಸಂವಿಧಾನಕ್ಕೆ ಅಪಚಾರ ಮಾಡಿದೆ. ಇದು ಪುರುಷ ಪ್ರಧಾನ ವ್ಯವಸ್ಥೆಯ ಕೈಗನ್ನಡಿಯಾಗಿದೆ. ಈ ಕೂಡಲೇ ಮೊದಲು ಜಾರಿಯಾದ ಕಾಯ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಮಾಡಬೇಕು. ಈ ವಿಚಾರದಲ್ಲಿ ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸಬಾರದು. ಎಲ್ಲರನ್ನು ಒಳಗೊಂಡು, ಚರ್ಚೆ ನಡೆಸಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಬೇಕು ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಅತಿ ಶೀಘ್ರದಲ್ಲಿಯೇ ನಡೆಸಬೇಕು. ಅನಾವಶ್ಯಕ ನೆಪಗಳನ್ನು ಹೇಳಿ ಮುಂದೂಡುವ ಪ್ರಕ್ರಿಯೆ ನಿಲ್ಲಿಸಬೇಕು. ತುಂಬಾ ಜಾಸ್ತಿ ವರ್ಷಗಳು ಕೇವಲ ಅಧಿಕಾರಶಾಯಿ ವ್ಯವಸ್ಥೆ ಇರುವುದು ಸಂವಿಧಾನಾತ್ಮಕತೆಗೆ ಒಳ್ಳೆಯದಲ್ಲ. ರಾಜಕೀಯ ಪ್ರತಿನಿಧಿತ್ವ ಕೂಡ ಬಹುಮುಖ್ಯವಾಗಿದೆ ಎಂದು ಎನ್.ನಾಗಮೋಹನ್ ದಾಸ್ ಅಭಿಪ್ರಾಯಿಸಿದರು.
ಜನತಾ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷ ಡಾ.ಆರ್.ರವೀಂದ್ರ, ಕಾರ್ಯದರ್ಶಿ ಅಪ್ಪಾರೆಡ್ಡಿ ಹರೀಶ್, ಖಚಾಂಚಿ ಹೆಚ್.ಜಿ. ಬಾಲಗೋಪಾಲ, ಗೌರ್ನಿಗ್ ಕೌನ್ಸಿಲ್ ನ ಎನ್.ಸಪ್ನಾ, ಪ್ರಾಂಶುಪಾಲ ಕೆ.ಬಿ.ಕೆಂಪೇಗೌಡ ಮತ್ತಿತರರು ಭಾಗವಹಿಸಿದ್ದರು.















