ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ರೈತರು ಗ್ರಾಮ ಪಂಚಾಯಿತಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ (ಪಿಆರ್ ಇಡಿ) ಬೇಜವಾಬ್ದಾರಿತನದ ವರ್ತನೆಯಿಂದಾಗಿ ಬೆಳೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. 2014 ರಿಂದಲೂ ರೈತರು ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಸುಳೇಭಾವಿ ಗ್ರಾಮದಲ್ಲಿರುವ ಕೆರೆಯು ಕಲುಷಿತಗೊಂಡಿರುವುದರಿಂದ ಈ ಕೆರೆಯ ಸುತ್ತಮುತ್ತಲಿನ ರೈತರು ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರು ಹಾಗೂ ಇತರ ತ್ಯಾಜ್ಯ ನೀರನ್ನು ಈ ಕೆರೆಗೆ ಬಿಡುತ್ತಿರುವುದರಿಂದ ಅವಾಂತರ ಸೃಷ್ಟಿಯಾಗಿದೆ.
ಕಳೆದೊಂದು ದಶಕದಿಂದ ಸುಳೇಭಾವಿ ಗ್ರಾಮ ಪಂಚಾಯಿತಿಯವರು ಗ್ರಾಮದ ತ್ಯಾಜ್ಯ ನೀರನ್ನು ಈ ಕೆರೆಗೆ ಬಿಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಮಳೆಗಾಲದಲ್ಲಿ ಈ ಕೆರೆ ತುಂಬಿ ಇದರಲ್ಲಿನ ತ್ಯಾಜ್ಯ ನೀರು ಹಾಗೂ ಹೊಲಸು ರೈತರ ಹೊಲಗಳಿಗೆ ನುಗ್ಗುತ್ತಿದೆ. ಇಲ್ಲಿನ ಹಲವಾರು ಕಳೆದ ಕೆಲ ವರ್ಷಗಳಿಂದ ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ.
ಈ ಸಮಸ್ಯೆ ಪರಿಹರಿಸುವಂತೆ ರೈತರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗಿಲ್ಲ. ಜಿಪಂ ಸಿಇಒ, ತಾಪಂ ಇಒ, ಪಿಆರ್ ಇಇ, ಡಿಸಿ, ತಹಶೀಲ್ದಾರ ಹೀಗೆ ಎಲ್ಲರಿಗೂ ಮನವಿ ಸಲ್ಲಿಸಿದರೂ ಏನು ಪ್ರಯೋಜನವಾಗಿಲ್ಲ ಎನ್ನುವಂತಾಗಿದೆ.
ಸಂತ್ರಸ್ತ ರೈತನ ಮಾತು:
ನಾನು ಈ ಪೈಪ್ ಲೈನ್ ಸಲುವಾಗಿ ನನ್ನ ಜಮೀನು ಇರುವ ಸರ್ವೆ ನಂಬರ್ 55/1, 55/2 ಇಲ್ಲಿ ಜಾಗವನ್ನು ಕೂಡ ಬಿಟ್ಟು ಕೊಟ್ಟಿದ್ದೇನೆ. ಗ್ರಾಪಂ ಹಾಗೂ ಮೇಲಧಿಕಾರಿಗಳಿಗೆ ಸತತವಾಗಿ ಮನವಿ ನೀಡಿದ್ದೇವೆ. ನಾವು ಕೃಷಿಯ ಮೇಲೆ ಅವಲಂಬಿತರಾಗಿದ್ದೇವೆ. ಹೀಗಾಗಿ ಈ ಸಮಸ್ಯೆಯನ್ನು ಬೇಗನೆ ಹರಿಸಲಿ ಎಂದು ರೈತರಾದ ಸಂಭಾಜಿ ಬಂಗೆನ್ನವರ ಅಳಲು ತೋಡಿಕೊಂಡಿದ್ದಾರೆ.
ಸಭೆಗೆ ಬಾರದ ಪಿಡಿಒ:
ಈ ವಿಷಯ ಕುರಿತಾಗಿ ಸೋಮವಾರ ಜನವರಿ 12 ರಂದು ಮೀಟಿಂಗ್ ಕರೆಯಲಾಗಿತ್ತು. ಆದರೆ ಪಿಡಿಒ ವಸಂತಕುಮಾರಿ ಅವರೇ ಮೀಟಿಂಗ್ ಗೆ ಬಂದಿಲ್ಲ. ಪಿಡಿಒ ಮೇಡಂ ಅವರ ಈ ನಿರ್ಲಕ್ಷತನದ ವರ್ತನೆಗೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ಪಷ್ಟೀಕರಣ ಪಡೆಯಲು ಕರೆ ಮಾಡಿದರೆ ಪಿಡಿಒ ಮೇಡಂ ಕರೆಯನ್ನೇ ಸ್ವೀಕರಿಸಿಲ್ಲ.
ಸಹಾಯಕ ಕಾರ್ಯಕಾರಿ ಅಭಿಯಂತರರ ಸ್ಪಷ್ಟೀಕರಣ:
ನಾನು ಇಲ್ಲಿ ಕರ್ತವ್ಯಕ್ಕೆ ಬಂದು 3 ತಿಂಗಳಾಗಿದೆ. ನಾನು ಅಲ್ಲಿಗೆ ವಿಸಿಟ್ ಮಾಡಿದ್ದೇನೆ. ಕಾರ್ಯಸಾಧ್ಯತಾ ವರದಿ ತಯಾರಿಸಿ ಮುಂದಿನ 15 ದಿನಗಳಲ್ಲಿ ಕೆಲಸ ಆರಂಭಿಸುತ್ತೇವೆ ಎಂದು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಕಾರಿ ಅಭಿಯಂತರರಾದ ಸಾವಂತ ಸ್ಪಷ್ಟಪಡಿಸಿದ್ದಾರೆ.
ಪ್ರಜಾ ನೆರಳು ಪತ್ರಿಕೆಯ ಕಳಕಳಿಯ ಮನವಿ:
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ್ ಅವರು ಸ್ವತಃ ಪರಿಶೀಲನೆ ಮಾಡಿ ಈ ಸಮಸ್ಯೆ ಬಗೆಹರಿಸಲು ಮುಂದಾಗಬೇಕೆಂದು ಪ್ರಜಾ ನೆರಳು ಪತ್ರಿಕೆಯ ಆಗ್ರಹವಾಗಿದೆ. ಅದೇ ರೀತಿ ಇಡೀ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹಲವಾರು ಗ್ರಾಪಂ ಪಿಡಿಒಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಕೂಡ ಯಶವಂತ್ ಅವರು ಸ್ವತಃ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.















