ಬೆಂಗಳೂರು: ಇನ್ನೆರಡು ದಿನಗಳಲ್ಲಿ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ಕಚೇರಿಯಲ್ಲಿ ಸಂಪುಟ ವಿಸ್ತರಣೆಯ ಎರಡನೇಯ ಪಟ್ಟಿ ತಯಾರಾಗಲಿದೆ. ಅದರಲ್ಲಿ ಅದರಲ್ಲಿ ಶಾಸಕರುಗಳಾದ ರಿಜ್ವಾನ್ ಅರ್ಷದ್, ಎನ್. ಎ ಹ್ಯಾರಿಸ್, ಕನೀಜ್ ಫಾತಿಮಾ ಹಾಗೂ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್, ಅವರುಗಳನ್ನು ಸಚಿವ ಸ್ಥಾನಗಳಿಗೆ ಪರಿಗಣಿಸಬೇಕು ಎಂದು ರಾಜ್ಯ ಐಕ್ಯತಾ ಒಕ್ಕೂಟದ ಅಧ್ಯಕ್ಷ ಮುಜಾಹಿದ್ ಅಲಿಬಾಬ ಒತ್ತಿಸಿದ್ದಾರೆ.
ಬುಧವಾರ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಲೀಂ ಅಹಮದ್ ಅವರು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಹಲವು ಉತ್ತರ ಕರ್ನಾಟಕದ ಮತ್ತು ಮುಂಬೈ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ. ಕನೀಜ್ ಫಾತಿಮಾ ಹೈದರಾಬಾದ್ ಕರ್ನಾಟಕದ ಪ್ರಭಾವಿ ರಾಜಕಾರಣಿಯಾಗಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ರಿಜ್ವಾನ್ ಅರ್ಷದ್ ಅವರು ಯುವ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಎನ್. ಎ ಹ್ಯಾರಿಸ್ ಕೂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಚುಕ್ಕಾಣಿ ಹಿಡಿದು ಒಳ್ಳೆಯ ಆಡಳಿತ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಜಮೀರ್ ಅಹಮದ್ ಖಾನ್ ಅವರು ಮಂತ್ರಿ ಮಾಡಿಲ್ಲದಿದ್ದರೆ ಕಾಂಗ್ರೆಸ್ ಪಕ್ಷವನ್ನೇ ಬುಡಮೇಲು ಮಾಡುವುದಾಗಿ ಪರೋಕ್ಷವಾಗಿ ಹೇಳಿಕೆ ನೀಡುತ್ತಾ, ಬೆಂಬಲಿಗರಿಂದ ಸುಖಾ ಸುಮ್ಮನೆ ಪ್ರತಿಭಟನೆ ಮಾಡಿಸಿ ಸಾರ್ವಜನಿಕರಿಗೆ ತೊಂದರೆ ನೀಡುವ ಕೆಲಸ ಮಾಡುತ್ತಿದ್ದಾರೆ. ನನ್ನಿಂದ ಬಹುತೇಕ ಮುಸಲ್ಮಾನ ಸಮಾಜದ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ದೊರಕಿದೆ ಎನ್ನುವ ಮಾತುಗಳನ್ನು ಮಾಧ್ಯಮಗಳ ಮೂಲಕ ಸಾರ್ವಜನಿಕ ವಲಯದಲ್ಲಿ ಸುಳ್ಳನ್ನು ಹರಡುವ ಕೆಲಸ ಮಾಡುತ್ತಿದ್ದಾರೆ. ಈ ತರಹದ ತಪ್ಪು ಮಾಹಿತಿಯನ್ನು ಹರಡುವ ಕೆಲಸವನ್ನು ಅವರು ಮೊದಲು ನಿಲ್ಲಿಸಬೇಕು. ಮುಸಲ್ಮಾನ ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ.
ಶಾಸಕ ಜಮೀರ್ ಅಹಮದ್ ಕೇವಲ ಚಾಮರಾಜಪೇಟೆಗೆ ಸೀಮಿತವಾದ ಮುಸಲ್ಮಾನ ರಾಜಕಾರಣಿಯಾಗಿದ್ದಾರೆ. ಹೆಚ್ಚು ಮುಸ್ಲಿಮರು ಮುಂಬೈ ಕರ್ನಾಟಕ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ದಲ್ಲಿ ವಾಸವಿದ್ದಾರೆ. ಮುಖ್ಯವಾಗಿ ಬಾಗಲಕೋಟೆ, ಬಿಜಾಪುರ, ರಾಯಚೂರು ಜಿಲ್ಲೆಗಳಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಇವನ್ನೆಲ್ಲ ಪರಿಗಣಿಸಿ ನಾಲ್ಕು ಜನರಿಗೆ ಸಚಿವ ಸ್ಥಾನವನ್ನು ಸಿ.ಎಂ ಡಿ.ಕೆ.ಶಿವಕುಮಾರ್ ನೀಡಿದರೆ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗುತ್ತದೆ ಎಂದು ಮುಜಾಹಿದ್ ಅಲಿಬಾಬ ಅಭಿಪ್ರಾಯಪಟ್ಟಿದ್ದಾರೆ.














