ಬೆಳಗಾವಿ: ಗಡಿಜಿಲ್ಲೆ ಬೆಳಗಾವಿ ನಗರದ ಹೊರವಲಯದಲ್ಲಿರುವ ಕೋಳಿಕೊಪ್ಪ ಗ್ರಾಮದ ಬೆಟ್ಟದ ಮೇಲೆ ಬರೋಬ್ಬರಿ 𝟭𝟬𝟬 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ತಿರುಪತಿ ವೆಂಕಟೇಶ್ವರ ದೇವಸ್ಥಾನ ತಲೆ ಎತ್ತಲಿದೆ. ಈ ಬೃಹತ್ ಯೋಜನೆಗಾಗಿ ಬೆಳಗಾವಿ ರೆಡ್ಡಿ ಸಂಘದ ವತಿಯಿಂದ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಗೆ 𝟳 ಎಕರೆ ಭೂಮಿಯನ್ನು ಅಧಿಕೃತವಾಗಿ ಮಂಗಳವಾರ ಹಸ್ತಾಂತರಿಸಲಾಗಿದೆ.
ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ರೆಡ್ಡಿ ಹಾಗೂ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ ಅವರುಗಳು ಜಮೀನಿನ ದಾಖಲೆಗಳನ್ನು ಹಸ್ತಾಂತರಿಸಿದರು. ಇಂದರೊಂದಿಗೆ ಮುಂದಿನ 𝟮 ವರ್ಷಗಳಲ್ಲಿ ತಿರುಮಲ ತಿರುಪತಿ ಮಾದರಿಯಲ್ಲೇ ಈ ಭವ್ಯ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ದೇವಸ್ಥಾನದ ಜೊತೆಗೆ ತಿರುಪತಿಯಂತೆಯೇ ಭಕ್ತರಿಗೆ ವಸತಿ ಸೌಲಭ್ಯ ಹಾಗೂ ನಿರಂತರ ಅನ್ನಪ್ರಸಾದ ವಿತರಣೆಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಈ ಕುರಿತು ಮಾತನಾಡಿರುವ ಕರ್ನಾಟಕ ರಾಜ್ಯ ರಡ್ಡಿ ಜನಸಂಘದ ಅಧ್ಯಕ್ಷ ಲಕ್ಷ್ಮಣ ರೆಡ್ಡಿ, ನಮ್ಮ ಬೆಳಗಾವಿ ಭಾಗದ ಭಕ್ತರಿಗೆ ವೆಂಕಟೇಶ್ವರನ ದರ್ಶನ ಭಾಗ್ಯವನ್ನು ಸ್ಥಳೀಯವಾಗಿಯೇ ಕಲ್ಪಿಸುವ ಉದ್ದೇಶದಿಂದ 𝟳 ಎಕರೆ ಭೂಮಿಯನ್ನು ನೀಡಿದ್ದೇವೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದಿದ್ದಾರೆ.
ಯೋಜನೆಯ ವೆಚ್ಚ ಮತ್ತು ಅನುದಾನದ ವಿವರ:
ದೇವಸ್ಥಾನ ನಿರ್ಮಾಣ, ಜೀರ್ಣೋದ್ಧಾರ ಹಾಗೂ ಪುನರುಜ್ಜೀವನಕ್ಕಾಗಿ ಟಿಟಿಡಿ ಹಣ ಮೀಸಲಿಟ್ಟಿದೆ. ಬೆಳಗಾವಿಯ ಈ ನೂತನ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಯಿಂದ ಶೇ. 𝟴𝟬 ರಷ್ಟು ಅನುದಾನ ನೀಡಲಾಗಲಿದೆ. ಉಳಿದಂತೆ ಬೆಳಗಾವಿ ರೆಡ್ಡಿ ಸಂಘದಿಂದ ಮತ್ತು ದಾನಿಗಳಿಂದ ಶೇ. 𝟭𝟬 ರಷ್ಟು ದೇಣಿಗೆ ಸಂಗ್ರಹಿಸಿ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪೂರ್ಣಗೊಳಿಸಲಾಗಲಿದೆ.















