ಬೆಂಗಳೂರು: ಅಧಿಕಾರಿಗಳು ಕೇವಲ ಸೂಟ್ ಬೂಟ್ ಧರಿಸಿದ ಜನರಿಗೆ ಆದ್ಯತೆ ನೀಡಬಾರದು. ಬೆವರು ಹರಿಸಿ, ಭೂಮಿಯನ್ನ ಉತ್ತು, ಬಿತ್ತು ಹಳ್ಳಿಗಳಲ್ಲಿ ಕೆಲಸ ಮಾಡುವ ಜನಸಾಮಾನ್ಯರ, ಕಾರ್ಮಿಕರ ಪರವಾಗಿರಬೇಕು. ಅವರ ಬದುಕಿನಲ್ಲಿ ಬದಲಾವಣೆ ತರಬೇಕು. ಕೇವಲ ಗೋಡೆ ಕಟ್ಟಬೇಡಿ. ಗುರಿ ತಲುಪಲು ಸೇತುವೆ ನಿರ್ಮಾಣ ಮಾಡಿದಾಗ ನಿಮ್ಮ ಸೇವೆಗೆ ಅರ್ಥ ಬರುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸೋಮವಾರ ಸಂಜೆ ಕೆಎಎಸ್ ಅಧಿಕಾರಿಗಳ ಸಂಘದ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜಕಾರಣಿಗಳ ಕಾಲಾವಧಿ ಕೇವಲ ಐದು ವರ್ಷ. ನಾವು ಈ ಸ್ಥಾನಕ್ಕೆ ಬರಬೇಕು ಎಂದರೆ ಎಷ್ಟು ನೀರು ಕುಡಿದಿರುತ್ತೇವೆ, ಏನೇನು ಮಾಡಿರುತ್ತೇವೆ ಎನ್ನುವುದು ನಿಮಗೂ ಗೊತ್ತಿರುತ್ತದೆ. ನೀವು 25 ರಿಂದ 30 ವರ್ಷಕ್ಕೆ ಅಧಿಕಾರಿಗಳಾಗುತ್ತೀರಿ. ಅವರು, ಇವರು ಯಾರೇ ಬಂದರೂ ಜಾತಿ, ಪ್ರಭಾವ ಬಳಸಿಕೊಂಡು ಮುಂದುವರೆಯುವವರು ನೀವು. ರಾಜಕಾರಣ ನಮಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಯಾವ ಅಧಿಕಾರಿಗಳೂ ಕಡಿಮೆಯಿಲ್ಲ. ಕೆಲವೊಬ್ಬರು ದಡ್ಡರು ಇರಬಹುದು. ಹೇಗೆ ಪ್ರಭಾವ ಬಳಸಿಕೊಳ್ಳುವುದು ಎಂದು ಗೊತ್ತಾಗದೆ ಸುಮ್ಮನಿರಬಹುದು. ಆದರೂ ಅಧಿಕಾರಿಗಳು ಚಾಣಕ್ಯರಿದ್ದೀರಿ ಎಂದು ನಗೆ ಚಟಾಕಿ ಹಾರಿಸಿದರು.
ಅಧಿಕಾರಿಗಳನ್ನು ಜನರು ದೇವರ ರೂಪದಲ್ಲಿ ನೋಡುತ್ತಾರೆ. ತಮ್ಮ ಕಷ್ಟಗಳನ್ನ ಪರಿಹರಿಸುತ್ತಾರೆ ಎನ್ನುವ ನಂಬಿಕೆ ಇಟ್ಟಿರುತ್ತಾರೆ. ದೇವರು ನೀಡಿದ ಅವಕಾಶವನ್ನು ಜನಪರವಾಗಿ ನೀವು ಉಪಯೋಗಿಸಬೇಕು. ನಾವೆಲ್ಲರೂ ಸಾವಿರಾರು ಹೇಳಬಹುದು ಆದರೆ ಕೊನೆಯದಾಗಿ ಕೆಲಸ ಮಾಡುವುದು ನಿಮ್ಮ ಮನಃಸಾಕ್ಷಿ. ಕಲ್ಲು, ಮಣ್ಣುಗಳಿಂದ ಗೋಡೆಯನ್ನೂ ಕಟ್ಟಬಹುದು ಜೊತೆಗೆ ಸೇತುವೆಯನ್ನೂ ನಿರ್ಮಿಸಬಹುದು ಎಂದರು.
ನನ್ನ ಗನ್ ಮ್ಯಾನ್ ಗಳು ಸೂಟುಬೂಟು ಹಾಕಿ ಬಂದಿರುವವರು ಐನೂರು, ಸಾವಿರ ರೂಪಾಯಿ ನೀಡಿದರೆ ಕರೆದುಕೊಂಡು ಬಂದು ಕೂರಿಸಿರುತ್ತಾರೆ. ನನ್ನನ್ನು ಗೆಲ್ಲಿಸಿದ ಜನರನ್ನೇ ಅವರು ಮರೆಯುತ್ತಾರೆ. ನೀವು ಸಹ ಈ ರೀತಿ ಮಾಡಬಾರದು. ಜನಸಾಮಾನ್ಯರ ಪರ ಇರಬೇಕು. ಕಷ್ಟ ಸುಖಗಳನ್ನು ಹೇಳಲು, ನೆಮ್ಮದಿ ಹುಡುಕಿಕೊಂಡು ದೇವಸ್ಥಾನಗಳಿಗೆ ಮನುಷ್ಯ ಹೋಗುತ್ತಾನೆ. ಭಕ್ತ ದೇವರಿಗೆ ಹೇಳಲು ಆಗದ ವಿಚಾರಗಳನ್ನು ಪೂಜಾರಿ ಮೂಲಕ ತಲುಪಿಸಲು ಪ್ರಯತ್ನಿಸುತ್ತಾನೆ ಎಂದರು.
ಜನರು ನಿಮ್ಮ ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ ಸ್ವಭಾವ ನೋಡಿ ಹತ್ತಿರಬರಬೇಕು. ಧನಾತ್ಮಕವಾದ ನಡೆ ನಿಮ್ಮದಾಗಬೇಕು. ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡಿ. ಸ್ವಜಾತಿ ಪ್ರೇಮದಿಂದ, ಪ್ರಭಾವಿ ವ್ಯಕ್ತಿ, ದುಡ್ಡು ನೀಡುವವನು, ಬೇಕಾದ ವ್ಯಕ್ತಿ ಎಂದು ನೀವು ಟಿಪ್ಪಣಿ ಬರೆಯುವಾಗ ಜನಸಾಮಾನ್ಯನಿಗೆ ಒಂದು ರೀತಿ, ಉಳಿದವರಿಗೆ ಬೇರೆ ರೀತಿ ಬರೆದು ಅಲೆಸುವ ಕೆಲಸ ಮಾಡಿದರೆ ಕೇವಲ ದಿನ ಹಾಗೂ ಸಮಯ ವ್ಯರ್ಥವಾಗುತ್ತದೆ ಎಂದು ತಿಳಿಸಿದರು.
ಒಬ್ಬ ತಹಶಿಲ್ದಾರ್ ಬರೆದ ಟಿಪ್ಪಣಿಯಿಂದ ಜನಸಾಮಾನ್ಯ ನ್ಯಾಯಾಲಯಗಳಿಗೆ ಅಲೆದು ಚಪ್ಪಲಿ ಸವೆಸಬೇಕಾಗುತ್ತದೆ. ಇದು ಆಗಬಾರದು. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು 1.11 ಕೋಟಿ ಜನರಿಗೆ ಭೂ ದಾಖಲೆಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ಕ್ರಾಂತಿಕಾರಕ ಕೆಲಸ. ಸಿಕ್ಕಂತಹ ಅವಕಾಶವನ್ನು ಜನಪರವಾಗಿ ಬಳಸಿಕೊಳ್ಳುತ್ತಿದ್ದಾರೆ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಭೂಮಿ ಯೋಜನೆ ತರಲಾಯಿತು. ಆದಾಯ ಪ್ರಮಾಣಪತ್ರ, ಜನನ, ಮರಣ ಪತ್ರ ಹೀಗೆ ಪ್ರತಿಯೊಂದನ್ನು ಬರೆಯುವವರು ನೀವಾಗಿದ್ದೀರಿ. ಗ್ರಾಮಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳ ನೋಟ್ ಗಳನ್ನು ಸುಪ್ರೀಂ ಕೋರ್ಟ್, ಹೈಕೋರ್ಟ್ ಕೂಡ ಮಾನ್ಯ ಮಾಡುತ್ತದೆ ಎಂದು ಹೇಳಿದರು.
ಸರ್ಕಾರಕ್ಕೆ ಹೆಸರು ಬರುವುದು ಅಧಿಕಾರಿಗಳಿಂದ:
ನಮ್ಮ ಹಾಗೂ ಯಾವುದೇ ಸರ್ಕಾರ ಇರಬಹುದು ಅದಕ್ಕೆ ಒಳ್ಳೆ ಹೆಸರು ಬರುವುದು ಅಧಿಕಾರಿಗಳಿಂದ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾಂಗ ಇವು ಪ್ರಜಾಪ್ರಭುತ್ವದ ಕಂಬಗಳು. ನಾವು ಮಾಡಿದ ಶಾಸನಗಳನ್ನು ಕಾರ್ಯರೂಪಕ್ಕೆ ತರುವವರು ನೀವು, ಅದು ತಪ್ಪು ಸರಿಯೋ ಎಂದು ವಿಶ್ಲೇಷಣೆ ಮಾಡುವುದು ನ್ಯಾಯಾಂಗ. ಎಲ್ಲರನ್ನ ಎಚ್ಚರಿಸುವುದು ಪತ್ರಿಕಾಂಗ. ಈಗ ಮಾಧ್ಯಮಗಳೇ ಎಲ್ಲಾ ತೀರ್ಪು ನೀಡುತ್ತಿವೆ. ಅವರಿಗೆ ಯಾವ ನ್ಯಾಯಾಧೀಶರೂ ಬೇಡ ಎಂದು ಕುಟುಕಿದರು.
ಕೆಲಸವನ್ನು ಪ್ರೀತಿಸಬೇಕು:
ಮಗು ತನ್ನ ತಂದೆ ತಾಯಿ ಮೇಲೆ ನಂಬಿಕೆ ಇಟ್ಟಿರುತ್ತದೆ. ಮರಕ್ಕೆ ಬೇರಿನ ಮೇಲೆ ನಂಬಿಕೆ, ಭಕ್ತನಿಗೆ ದೇವರ ಮೇಲೆ ನಂಬಿಕೆ, ರಾಜಕಾರಣಿಗಳು ಅಧಿಕಾರಿಗಳ ಮೇಲೆ ನಂಬಿಕೆ ಇಟ್ಟಿರುತ್ತಾರೆ. ಸಾವಿರಾರು ಜನರು ಏನೇ ಹೇಳಿದರು ಅಧಿಕಾರಿಗಳು ಹೇಳಿದ ಮಾತುಗಳನ್ನೇ ನಾವು ಹೇಳುತ್ತೇವೆ. ಕೆಲಸದಲ್ಲಿ ಯಶಸ್ಸು ಸಾಧಿಸಬೇಕು ಎಂದರೆ ಅದನ್ನು ಪ್ರೀತಿಸಬೇಕು ಎನ್ನುವ ಮಾತಿದೆ. ನೀವು ಅನುಷ್ಠಾ ಎನ್ನುವ ಪುಸ್ತಕವನ್ನು ನನಗೆ ನೀಡಿದ್ದೀರಿ. ಅದರಲ್ಲಿ ಅನೇಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಅದರಂತೆ ನೀವು ನಡೆದರೆ ಸಾಕು. ಜನರು ಕಚೇರಿಗಳಿಗೆ ಬಂದಾಗ ಎಷ್ಟು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತೀರೋ ಅದೇ ನಿಮ್ಮ ಸೇವಾವಧಿಯಲ್ಲಿ ಮುಖ್ಯವಾದುದು ಎಂದು ತಿಳಿಸಿದರು.
ನಿಮ್ಮನ್ನು ದೇವರ ತರ ಜನರು ಕಾಣುತ್ತಾರೆ:
ನಾನು ದೊಡ್ಡ ಆಲಹಳ್ಳಿಯಲ್ಲಿ ಟೂರಿಂಗ್ ಟಾಕೀಸ್ ನಡೆಸಲು ಅನುಮತಿ ಬೇಕಾಗಿತ್ತು. ಅದೇ ಹೊತ್ತಿಗೆ ಇಂದಿರಾಗಾಂಧಿ ಅವರ ಹತ್ಯೆಯಾಗಿ ಗಲಾಟೆಗಳು ನಡೆಯುತ್ತಿದ್ದವು. ಯುವ ಕಾಂಗ್ರೆಸ್ಸಿಗರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಆಗ ಪುಟ್ಟರಂಗಪ್ಪ ಎಂಬುವರು ಜಿಲ್ಲಾಧಿಕಾರಿಯಾಗಿದ್ದರು. ಅವರ ಬಳಿ ನನ್ನ ಅರ್ಜಿಯ ಬಗ್ಗೆ ಹೇಳಿದೆ. ಅವರು ಇಂದಿರಾಗಾಂಧಿ ಅವರ ಹೆಸರನ್ನು ಇಡು ಎಂದು ಸ್ಥಳದಲ್ಲೇ ಅನುಮತಿ ನೀಡಿದರು. ಅವರನ್ನು ಇಂದಿಗೂ ನಾನು ನೆನಪಿಸಿಕೊಳ್ಳುತ್ತೇನೆ. ನೀವು ಸಹಾಯ ಮಾಡಿದರೆ ಜನ ನಿಮ್ಮನ್ನು ದೇವರ ತರ ಕಾಣುತ್ತಾರೆ. ಎಲ್ಲರ ಭವಿಷ್ಯ ಬರೆಯುವ ಅವಕಾಶ ದೇವರು ನಿಮಗೆ ನೀಡಿದ್ದಾನೆ. ಹೀಗೆ ಮಾಡಿದರೆ ಕೊನೆಯ ದಿನಗಳಲ್ಲಿ ಸಾರ್ಥಕ ಬದುಕು ನಡೆಸಿದ್ದೇನೆ ಎನ್ನುವ ತೃಪ್ತಿ ಇರುತ್ತದೆ ಎಂದರು.













