ಬೆಂಗಳೂರು: ಪರಿಶಿಷ್ಟ ಜಾತಿ, ವರ್ಗಕ್ಕೆ ಬಳಸಬೇಕಾದ ಎಸ್ಇಪಿ, ಟಿಎಸ್ಪಿ ಹಣದ ವಿಚಾರದಲ್ಲಿ 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂಪಾಯಿಯನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದನ್ನು ಎಲ್ಲ ದಲಿತ ಸಂಘಟನೆಗಳು ಸೇರಿ ಖಂಡಿಸುತ್ತೇವೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಮಂಗಳವಾರ ಎಸ್ಸಿಎಸ್ಪಿ-ಟಿಎಸ್ಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಶಾಸಕರ ಭವನದ ಸಭಾಂಗಣದಲ್ಲಿ ಬಜೆಟ್ ಪೂರ್ವ ದುಂಡು ಮೇಜಿನ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸರ್ಕಾರ ದಲಿತರಿಗೆ ದೋಖಾ, ವಂಚನೆ ಮಾಡುತ್ತಿದೆ. ಆದ್ದರಿಂದ ಈ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ರೂಪಿಸಬೇಕೆಂಬ ಮಾತನ್ನು ಒಕ್ಕೊರಲಿನಿಂದ ಹೇಳಿದ್ದಾರೆ ಎಂದರು.
ಗ್ಯಾರಂಟಿಗಳಿಗೆ ಒಂದು ವರ್ಷಕ್ಕೆ 52 ಸಾವಿರ ಕೋಟಿ ಬೇಕು. 52 ಸಾವಿರ ಕೋಟಿ ನೀವು ಬಜೆಟ್ನಲ್ಲಿ ತೆಗೆದಿಟ್ಟ ಮೇಲೆ ಎಸ್ಇಪಿ, ಟಿಎಸ್ಪಿ ಹಣ ಅದಕ್ಕೆ ಯಾಕೆ ಬೇಕು? ನೀವು ಒಕ್ಕಲಿಗ ಸಮುದಾಯದ ಹೆಣ್ಮಕ್ಕಳಿಗೆ 2 ಸಾವಿರ ರೂ. ಕೊಡುತ್ತೀರಿ. ಅದನ್ನು ಒಕ್ಕಲಿಗ ಅಭಿವೃದ್ಧಿ ನಿಗಮದಿಂದ ತೆಗೆದು ಕೊಡುತ್ತಿದ್ದೀರಾ? ಲಿಂಗಾಯತರಿಗೆ ಕೊಡುವುದನ್ನು ಅವರ ಅಭಿವೃದ್ಧಿ ನಿಗಮದಿಂದ ತೆಗೆದು ಕೊಡುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಮುಸ್ಲಿಮರಿಗೆ ಕೊಡುವ ಗ್ಯಾರಂಟಿ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ತೆಗೆದು ಕೊಡುತ್ತೀರಾ? ಪರಿಶಿಷ್ಟ ಜಾತಿ, ವರ್ಗಗಳಿಗೆ ಕೊಡುವಾಗ ಅವರ ಹಣ ತೆಗೆದು ಯಾಕೆ ಕೊಡುತ್ತೀರಿ?ಎಂಬ ವಿಷಯವನ್ನು ಎಲ್ಲ ಮುಖಂಡರು ಮಾತನಾಡಿದರು ಎಂದರು.
ಎಸ್ಇಪಿ, ಟಿಎಸ್ಪಿ ಹಣ 42 ಸಾವಿರ ಕೋಟಿ ಎಂದು ಜನರಿಗೆ ತೋರಿಸುತ್ತೀರಿ? ಇದರಲ್ಲಿ 34 ಇಲಾಖೆಗಳಿವೆ. 21 ಸಾವಿರ ಕೋಟಿ ಅವುಗಳಿಗೆ ಕೊಡುತ್ತೀರಿ, ಉಳಿದ 21 ಸಾವಿರ ಕೋಟಿಯಲ್ಲಿ 14 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ಬಳಸಿದರೆ ಉಳಿಯುವುದು 7 ಸಾವಿರ ಕೋಟಿ. ಅಂದರೆ ಪರಿಶಿಷ್ಟ ಜಾತಿ, ಪಂಗಡಕ್ಕೆ ಸಿಗುವ ಎಸ್ಇಪಿ, ಟಿಎಸ್ಪಿ ಹಣ ಕೇವಲ 7 ಸಾವಿರ ಕೋಟಿ. 42 ಸಾವಿರ ಕೋಟಿ ಎಂದು ಯಾಕೆ ಸುಳ್ಳು ಹೇಳುತ್ತೀರಿ? ಎನ್ನುವ ಪ್ರಶ್ನೆಗಳನ್ನು ಮುಂದಿಟ್ಟರು.
ಈ ಸಂದರ್ಭದಲ್ಲಿ ಕೇಂದ್ರ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಸಚಿವ ಎನ್. ಮಹೇಶ್, ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.















