ಬೆಂಗಳೂರು: ದಕ್ಷಿಣ ನಗರ ಪಾಲಿಕೆಯ ಬೊಮ್ಮನಹಳ್ಳಿ ವಲಯದ ಅರಕೆರೆಯ ವ್ಯಾಪ್ತಿಯಲ್ಲಿ ನಿರ್ಮಿತವಾಗಿರುವ ಶಾಂತಿ ನಿಕೇತನ ಬಡಾವಣೆಯಲ್ಲಿ ನಾಗರೀಕರ ಸೌಲಭ್ಯಕ್ಕಾಗಿ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಎಂದು ಕಾಯ್ದಿರಿಸಿದ್ದ 10 ಕೋಟಿ ಮೌಲ್ಯದ ಸಿ.ಎ ಜಾಗಗಳನ್ನು ಪಾಲಿಕೆ ವಶಕ್ಕೆ ಪಡೆದಿದೆ.
ಸರ್ವೇ ನಂಬರ್ 76 ರಲ್ಲಿನ ಸಂಖ್ಯೆ 15 ಮತ್ತು 16 ರ ನಿವೇಶನ ಹಾಗೂ ಶಾಂತಿನಿಕೇತನ ಬಡಾವಣೆಯ ಇತರೆ ಸಿ.ಎ ನಿವೇಶನಗಳ ಬಗ್ಗೆ ಹೈಕೋರ್ಟ್ ಪಾಲಿಕೆಯ ಸುಪರ್ದಿಗೆ ನೀಡಿ ಆದೇಶ ಹೊರಡಿಸಿತ್ತು. ಆದೇಶದ ಮೇರೆಗೆ ಹಾಗೂ ಹಾಲಿ ಶಾಂತಿನಿಕೇತನ ಬಡಾವಣೆಯ ನಿವೇಶನಗಳನ್ನು ಇತರರು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪಾಲಿಕೆಯ ಆಯುಕ್ತ ಕೆ ಎನ್ ರಮೇಶ್ ನೇತೃತ್ವದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪೊಲೀಸರ ರಕ್ಷಣೆಯೊಂದಿಗೆ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಕಟ್ಟಡ ಕಟ್ಟಲು ಇರಿಸಿದ್ದ ಸಾಮಗ್ರಿಗಳನ್ನು ಸಹ ತೆರವುಗೊಳಿಸಲಾಗಿದೆ.
ಒಟ್ಟಾರೆ 20000 ಚದರ ಅಡಿ ಇರುವ ಈ ಸಿ.ಎ. ನಿವೇಶನಗಳ ಅಂದಾಜು ಮೌಲ್ಯ ರೂ.10 ಕೋಟಿಗಳಾಗಿದ್ದು, ಇವುಗಳನ್ನು ಪಾಲಿಕೆ ವಶಕ್ಕೆ ಪಡೆದಿದೆ. ಈ ಜಾಗಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ. ಅಲ್ಲದೆ ಇನ್ನು ಮುಂದೆ ಸಿ.ಎ ನಿವೇಶನಗಳ ಒತ್ತುವರಿ ಹಾಗೂ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸ್ವತ್ತು ಎನ್ನುವ ನಾಮಫಲಕವನ್ನು ಅಳವಡಿಸಲಾಗಿದೆ ಎಂದು ಆಯುಕ್ತ ಕೆ ಎನ್ ರಮೇಶ್ ಮಾಹಿತಿ ನೀಡಿದ್ದಾರೆ.
ಈ ವೇಳೆ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ಸತೀಶ್ ಬಾಬು, ಮುಖ್ಯ ಅಭಿಯಂತರ ಕೆ. ವಿ ರವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.















