ಬೆಂಗಳೂರು: ಎರಡು ದಿನಗಳ ಕಾಲ ವಿವಿಧ ಭಾಷೆಗಳ ಲೇಖಕರ ಸಂಗಮ ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಾಗಿತ್ತು. ಇನ್ನು ಭಿನ್ನ ಭಿನ್ನ ಸಾಹಿತ್ಯಗಳ ಆವಲೋಕನದ ಮೂಲಕ ಸಂವಾದಗಳ ವೈಖರಿ ಹಲವರನ್ನು ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ವಿಶೇಷವಾಗಿ ಸೆಳೆಯಿತು.
ಮಕ್ಕಳಿಗಾಗಿಯೇ ಮೀಸಲಾಗಿದ್ದ ಸಾಹಿತ್ಯ ಸಂಬಂಧಿ ಕ್ರಿಯಾಶೀಲ ಚಟುವಟಿಕೆಗಳು ಎಂತಹವರನ್ನು ಕೂತುಹಲದಿಂದ ವೀಕ್ಷಿಸುವಂತೆ ಮಾಡಿದ್ದವು. ವಿದ್ಯಾರ್ಥಿಗಳು, ಯುವಕರು, ವಯಸ್ಕರು, ವಯೋವೃದ್ಧರು ಕೂಡ ಆಸಕ್ತಿಯಿಂದ ಭಾಗವಹಿಸಿದ್ದರು. ಹೀಗೆ ಹತ್ತು ಹಲವು ತರಹದ ವೈಶಿಷ್ಟ್ಯತೆಗಳು ಶನಿವಾರ ಮತ್ತು ಭಾನುವಾರ ನಗರದ ಸ್ವಾತಂತ್ರ್ಯಉದ್ಯಾನವನದಲ್ಲಿ ಕಾಣಬಹುದಾಗಿತ್ತು. ಇಲ್ಲಿ ಹಲವು ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಬೆಂಗಳೂರು ಲಿಟರೇಚರ್ ಫೆಸ್ಟಿವಲ್ -2025 ರಲ್ಲಿ ಬೆಂಗಳೂರಿಗರಲ್ಲದೇ, ದೇಶ-ವಿದೇಶಗಳ ಮಂದಿ ಕೂಡ ಪಾಲ್ಗೊಂಡಿರುವು ವಿಶೇಷವಾಗಿತ್ತು.
ಖ್ಯಾತ ಕಾದಂಬರಿಕಾರ ಚೇತನ್ ಭಗತ್, ಲೇಖಕಿ ಗೌರಿ ಶಿಂಧೆ, ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆ, ಬಿ.ಎಂ.ಹನೀಫ್, ಲೇಖಕ ಬಿ.ಎಂ.ಬಶೀರ್, ಲೇಖಕಿಯರಾದ ಅನಿತಾ ನಾಯರ್, ಅರುಂಧತಿ ಸುಬ್ರಹ್ಮಣ್ಯಂ, ಶಿಕ್ಷಣ ತಜ್ಞ ಕೆ.ಇ.ರಾಧಕೃಷ್ಣ, ವಿಮರ್ಶಕ ಎಸ್.ಆರ್.ವಿಜಯಶಂಕರ್ ಹಾಗೂ ಇತರೆ ಲೇಖಕರು ಒಳಗೊಂಡು ಹಲವು ಕ್ಷೇತ್ರಗಳ ಪ್ರಮುಖರು ಗೋಷ್ಠಿಗಳಲ್ಲಿ ಭಾಗವಹಿಸಿ ವಿಷಯ ಕುರಿತಾಗಿ ಮಾತನಾಡಿದ್ದು ಗಮನ ಸೆಳೆಯಿತು.
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡಿದ್ದರು. ಆದರೆ ಹಲವಾರು ಪೋಷಕರು ತಮ್ಮ ಮಕ್ಕಳನ್ನು ಸಾಹಿತ್ಯ ಜಾತ್ರೆಗೆ ಕರೆ ತಂದಿದ್ದು ವಿಭಿನ್ನವಾಗಿತ್ತು. ಸಾಹಿತ್ಯ ಉತ್ಸವಕ್ಕೆ ಬಂದವರನ್ನು ಅಚ್ಚರಿಯಿಂದ ವೀಕ್ಷಿಸುವಂತೆ ಮಾಡಿದ್ದು ಕ್ರಿಯಾಶೀಲ, ಸೃಜನಶೀಲತೆಯುಳ್ಳ ಮಕ್ಕಳ ಸಾಹಿತ್ಯ ಗೋಷ್ಠಿಗಳು. ಮಕ್ಕಳಿಗೆ ವಿಶೇಷ ಭಂಗಿಯ ಮೂಲಕ ಕಥೆಗಳನ್ನು ಹೇಳಿದ ವೈಖರಿ ಸೋಜಿಗವೆನಿಸಿತ್ತು.














