ಬಾಗಲಕೋಟೆ: ಇಲ್ಲಿನ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿದರು.
ಮಾಧ್ಯಮಗಳೊಂದಿಗೆ ಭಾನುವಾರ ಮಾತನಾಡಿದ ಅವರು, ನಿನ್ನೆ ಕಾಲೇಜು ಕ್ಯಾಂಪಸ್ ಗೆ ಹೋಗಿ ನೀವು ಬಿಜೆಪಿಗೆ ಮತ ಕೊಟ್ಟರೆ ಜೈಲಿಗೆ ಹಾಕುತ್ತೇವೆ ಎಂಬ ಮಾಹಿತಿಯುಳ್ಳ ಕರಪತ್ರವನ್ನು ಹಂಚಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಧಮ್ಕಿ ಹಾಕಿದ್ದಾರೆ. ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಪೊಲೀಸ್ ಠಾಣೆಯಲ್ಲೇ ಆರೋಪಿಗಳು ಲೈವ್ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಇನ್ಸ್ಪೆಕ್ಟರ್ ಬಾಯಿ ಮುಚ್ಚಿ ಆರಾಮವಾಗಿ ಕುಳಿತಿದ್ದರು. ಬಂಧಿತರು ಲಾಕಪ್ ಒಳಗಡೆ ಇರಬೇಕಿತ್ತು. ಆದರೆ, ರಾಜಾರೋಷವಾಗಿ ಲೈವ್ ಬಂದಿದ್ದಾರೆ. ಕರ್ನಾಟಕದಲ್ಲಿ ಗೂಂಡಾ ರಾಜ್ಯ ಇರುವಂತೆ ತೋರುತ್ತಿದೆ. ಕಾಂಗ್ರೆಸ್ ನವರು ಡಿ.ಕೆ.ಶಿವಕುಮಾರ್ ಹೇಳಿದ ಮಾದರಿಯಲ್ಲಿ ಬಂದು ಗೂಂಡಾಗಿರಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ ಈ ಘಟನೆಗೆ ನೇರ ಕಾರಣ. ನಾಳೆ ಹಳ್ಳಿಗಳಲ್ಲೂ ಈ ಥರ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ನೂರಾರು ಕೋಟಿ ಹಣ ಹಂಚಲು ಸಿದ್ಧತೆ
ನೂರಾರು ಕೋಟಿ ಹಣ ಹಂಚಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ಸಿನವರು ಅಭಿವೃದ್ಧಿ- ಜನಪರ ಕೆಲಸ ಮಾಡಿಲ್ಲ. ಆದ್ದರಿಂದ ಹಣ ಹಂಚಿ ಗೆಲ್ಲಲು ಹೊರಟಿದ್ದಾರೆ. ಈ ಪರಿಸ್ಥಿತಿಯಲ್ಲಿ ನ್ಯಾಯಯುತ ಚುನಾವಣೆ ಕಷ್ಟಸಾಧ್ಯ ಎಂದರು.















