ಬೆಂಗಳೂರು: ವಿದ್ವಾನ್ ಚಿಂತಲಪಲ್ಲಿ ಶ್ರೀನಿವಾಸ್ ಅವರ ಶ್ರೀ ಕಲಾನಿಕೇತನ್ ಸಂಸ್ಥೆಯ ವಾರ್ಷಿಕ ಕಲಾ ಮಹೋತ್ಸವ ಸಮಾರಂಭ ಮಲೇಶ್ವರದ ಶ್ರೀ ತೆಲುಗು ವಿಜ್ಞಾನ ಸಮಿತಿಯ ಕೃಷ್ಣ ದೇವರಾಯ ಸಭಾಭವನದಲ್ಲಿ ನಡೆಯಿತು.
ಭಾನುವಾರ ಬೆಳ್ಳಗೆಯಿಂದ ಸಂಜೆಯವರೆಗೆ ವಿವಿಧ ಸಂಗೀತ ವಿದ್ವಾಂಸರು, ಸಂಗೀತ ನೃತ್ಯ ಕಲಿಕೆಯ ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು 60 ವರ್ಷ ವಯೋಮಾನದವರೆಗಿನವರು ಸಂಗೀತ ಗಾಯನ ಪ್ರದರ್ಶನ ನೀಡಿ ನೆರದಿದ್ದ ಪ್ರೇಕ್ಷಕರನ್ನು ಮನರಂಜಿಸಿದರು. ವಿದ್ವಾನ್ ಶ್ರೀ ವಿದ್ಯಾ ಮುರಳಿ ಅವರಿಂದ ಭರತ ನಾಟ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಕುರಿತು ಚಿಂತನ ಪಲ್ಲಿ ಶ್ರೀನಿವಾಸ್ ಮಾತನಾಡಿ, ನಮ್ಮ ಸಂಗೀತ ಪೂರ್ವಜರಾದ ವೆಂಕಟರಾಯರ ಅನುಗ್ರಹದಿಂದ ಇಂತಹ ಸಂಗೀತ ಕಾರ್ಯವನ್ನು ಬಳುವಳಿಯಾಗಿ ಪಡೆದು ನಡೆಸಿಕೊಂಡು ಬರುತ್ತಿದ್ದೇವೆ. 1950ರಿಂದ 60ರವರೆಗೆ ಅಮೆರಿಕದಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟ ಹೆಗ್ಗಳಿಕೆ ನಮ್ಮ ತಂದೆ ವೆಂಕಟರಾಮಯ್ಯನವರದ್ದಾಗಿದೆ. ಅವರ ನಿಧನದ ನಂತರ ನಾನು ಶ್ರೀ ಕಲಾನಿಕೇತನ ಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ವಿದ್ಯೆಯನ್ನು ಹೇಳಿ ಕೊಡುತ್ತಿದ್ದೇನೆ ಎಂದರು.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಉಪ ಕುಲಸಚಿವರಾದ ಡಾ ಶ್ರೀ ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಅವರು ಮಾತನಾಡಿ, ಚಿಂತಲಪಲ್ಲಿ ಪರಂಪರೆ ಸುಮಾರು 800 ವರ್ಷದ ಹಳೆಯದ್ದಾಗಿದೆ. ಹಲವು ವಿಶ್ವವಿಖ್ಯಾತ ಸಂಗೀತಗಾರರನ್ನು ಹುಟ್ಟು ಹಾಕಿದ ಹೆಗ್ಗಳಿಕೆ ಇದಕ್ಕಿದೆ. ಜೂನಿಯರ್, ಸೀನಿಯರ್ ಮಕ್ಕಳು ಈ ಪರಂಪರೆಯ ಶ್ರೀ ಕಲಾನಿಕೇತನ್ ಸಂಸ್ಥೆಯಲ್ಲಿ ಅಭ್ಯಾಸ ನಡೆಸುತ್ತಿರುವುದು ಅವರುಗಳ ಸೌಭಾಗ್ಯವಾಗಿದೆ. ವಿದ್ವತ್ ಹಾಗೂ ಸಂಗೀತದ ಉನ್ನತ ಶಿಕ್ಷಣದ ಕೋರ್ಸ್ಗಗಳಲ್ಲಿ ರ್ಯಾಂಕ್ ಪಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾನ್ ಚಿಂತಲಪಲ್ಲಿ ಡಾ ಚಿಂತಲಪಲ್ಲಿ ಕೆ ರಮೇಶ್ ಮಾತನಾಡಿ, ಶ್ರೀ ಕಲಾನಿಕೇತನ್ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ದಾರಿ ಆಂಜನೇಯ ಸ್ವಾಮಿ ದೇವಸ್ಥಾನ ಧರ್ಮದರ್ಶಿ ಡಾ ಅಂಬರೀಶ್ ಜಿ ಮಾತನಾಡಿ, ಸಂಸ್ಥೆಗೆ ಪೂರಕವಾದ ಸಹಾಯವನ್ನು ನನ್ನ ಕೈಲಾದ ಮಟ್ಟಿಗೆ ಮಾಡುವುದಾಗಿ ಆಶ್ವಾಸನೆ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಸಂಗೀತ ಮತ್ತು ನೃತ್ಯಕಲೆಯ ಕಲಾವಿದರ ಸಂಘದ ಅಧ್ಯಕ್ಷ ವಿದ್ವಾನ್ ಸಾಯಿ ನಾರಾಯಣ್, ಅಮೇರಿಕಾ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಕುಲಪತಿ ಡಾ ಗಿರೀಶ್ ಕುಮಾರ್, ಶ್ರೀ ತ್ಯಾಗರಾಜ ಗಾನ ಸಭೆಯ ಅಧ್ಯಕ್ಷ ಅನಂತ ಎಂ ಉಪಸ್ಥಿತರಿದ್ದರು.















