ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಚುನಾವಣಾ ಗುದ್ದಾಟದಲ್ಲಿ ಎಲ್.ಪಿ.ಜಿ ಇಂಧನ ಪೂರೈಕೆ ವ್ಯವಸ್ಥೆಯಲ್ಲಿ ತೀವ್ರ ವ್ಯತ್ಯಯವಾಗಿ, ಆಟೋ ಚಾಲಕರುಗಳ ಬಡ ಕುಟುಂಬಗಳು ಬೀದಿಗೆ ತಳ್ಳಲ್ಪಡುತ್ತಿವೆ. ಕೂಡಲೇ ರಾಜ್ಯ ಸರ್ಕಾರವು ಆಟೋ ಚಾಲಕರ ಕುಟುಂಬಗಳ ರಕ್ಷಣೆಗೆ ಧಾವಿಸಬೇಕು ಹಾಗೂ ಈ ತಕ್ಷಣದಿಂದಲೇ 15 ಸಾವಿರ ರೂ.ಗಳ ಸಹಾಯಧನವನ್ನು ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿತು.
ಬುಧವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಮಾತನಾಡಿ ಕೊಲ್ಲಿ ಯುದ್ಧದ ನೇರ ಪರಿಣಾಮಗಳನ್ನು ಅರಿಯುವಲ್ಲಿ ವಿಫಲಗೊಂಡಿರುವ ಕೇಂದ್ರ ಸರ್ಕಾರ ರಾಷ್ಟ್ರದಾದ್ಯಂತ ಸೂಕ್ತ ಇಂಧನ ವ್ಯವಸ್ಥೆಗಳನ್ನು ಮಾಡಿಕೊಳ್ಳದೆ ಜನಸಾಮಾನ್ಯರನ್ನು ಪರಿತಪಿಸುವಂತೆ ಮಾಡಿದೆ. ಇನ್ನೊಂದು ಕಡೆ ರಾಜ್ಯ ಸರ್ಕಾರವು ಉಪಚುನಾವಣೆಯ ಭರಾಟೆಯಲ್ಲಿ ಪರಿಸ್ಥಿತಿಯ ಲಾಭವನ್ನು ಪಡೆಯುತ್ತಿರುವ ಕಾಲ ಸಂತೆ ಕೋರರನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. ಗ್ಯಾಸ್ ಸಿಲಿಂಡರ್, ಎಲ್.ಪಿ.ಜಿ ಬಂಕ್ ಗಳಲ್ಲಿ ಅವ್ಯಾಹತವಾಗಿ ದುಪ್ಪಟ್ಟು ದರದಲ್ಲಿ ಕಾಳಸಂತೆಯಂತೆ ಮಾರಾಟ ಮಾಡಲು ರಾಜಾರೋಷವಾಗಿ ಅನುವು ಮಾಡಿಕೊಟ್ಟಿರುವುದು ದುರದೃಷ್ಟಕರ ಎಂದು ವಿಷಾಧ ವ್ಯಕ್ತಪಡಿಸಿದರು.
ಸರ್ಕಾರದ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಈ ಕಾಳಸಂತೆಕೋರರನ್ನು ಮಟ್ಟ ಹಾಕದೆ ಕಣ್ಮುಚ್ಚಿ ಕುಳಿತಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಆಟೋ ಚಾಲಕರುಗಳು ಕಳೆದ 15 ದಿನಗಳಿಂದ ಆಟೋಗಳನ್ನು ರಸ್ತೆಗೆ ಇಳಿಸಲಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ದೈನಂದಿನ ಗಳಿಕೆಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿರುವ ಆಟೋ ಚಾಲಕರು ಸೇರಿದಂತೆ ಸಣ್ಣ ಹೋಟೆಲ್ ಮಾಲೀಕರುಗಳು, ಗಿಗ್ ಕಾರ್ಮಿಕರ ರಕ್ಷಣೆಗೆ ಸರ್ಕಾರ ಕೂಡಲೇ ಮುಂದಾಗಬೇಕು. ಈ ತಕ್ಷಣದಿಂದಲೇ 15 ಸಾವಿರ ರೂ.ಗಳ ಸಹಾಯಧನವನ್ನು ಘೋಷಿಸಬೇಕು ಎಂದು ಆಯುಬ್ ಖಾನ್ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಎಎಪಿ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್, ಆಟೋ ಘಟಕದ ಬೆಂಗಳೂರು ನಗರ ಅಧ್ಯಕ್ಷ ಅನಿಲ್ ಕುಮಾರ್, ಸಾಮಾಜಿಕ ಹೋರಾಟಗಾರ ಎ.ಜೆ. ಖಾನ್ ಸೇರಿದಂತೆ ಅನೇಕ ಆಟೋ ಚಾಲಕರು, ಹೋರಾಟಗಾರರು ಭಾಗವಹಿಸಿದ್ದರು.















