ಬೆಂಗಳೂರು: ವಿಲ್ಮ್ಸ್ ಟ್ಯೂಮರ್ ಎಂಬ ಮೂತ್ರಪಿಂಡದ ಕ್ಯಾನ್ಸರ್ಗೆ ತುತ್ತಾಗಿ ಒಂದೇ ಮೂತ್ರಪಿಂಡದಿಂದ ಜೀವನ ಸಾಗಿಸುತ್ತಿದ್ದ 9 ವರ್ಷದ ಬಾಲಕನಿಗೆ ಮೂಳೆ ಮಜ್ಜೆಯ ಕಸಿ (ಬಿಎಂಟಿ)ಯನ್ನು ಯಶಸ್ವಿಯಾಗಿ ನಿರ್ವಹಿಸಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮತ್ತೊಂದು ಸಾಧನೆ ಮಾಡಿದೆ.
ಬಾಲಕನಿಗೆ 2022ರ ಡಿಸೆಂಬರ್ನಲ್ಲಿ ವಿಲ್ಸ್ಮ್ ಟ್ಯೂಮರ್ ಇರುವುದು ಪತ್ತೆಯಾಗಿದ್ದು, ಕಿಮೋಥೆರಪಿ ಚಿಕಿತ್ಸೆ ನೀಡಿ ಎಡ ಮೂತ್ರಪಿಂಡಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ರೇಡಿಯೇಷನ್ ಚಿಕಿತ್ಸೆ ನೀಡಲಾಯಿತು. ಆದರೆ, ಕಳೆದ ಏಪ್ರಿಲ್ನಲ್ಲಿ ಮತ್ತೆ ಟ್ಯೂಮರ್ ಮರುಕಳಿಸಿತ್ತು. ಆಗ ಬಾಲಕನು ಬದುಕುಳಿಯುವ ಅತ್ಯುತ್ತಮ ಅವಕಾಶವೆಂದರೆ ಹೆಚ್ಚಿನ ಪ್ರಮಾಣದ ಕಿಮೋಥೆರಪಿ ಮತ್ತು ಸ್ಟೆಮ್ ಸೆಲ್ ಟ್ರಾನ್ಸ್ಪ್ಲಾಂಟೇಶನ್ ಎಂದು ಕಿದ್ವಾಯಿ ವೈದ್ಯರು ತೀರ್ಮಾನಿಸಿದರು.
ಈ ಕುರಿತು ಕಿದ್ವಾಯಿ ಆಸ್ಪತ್ರೆಯ ವೈದ್ಯ ಡಾ. ವಸುಂಧರ ಕೈಲಾಸನಾಥ್ ಮಾತನಾಡಿದ್ದು, ಬಿಎಂಟಿ ಚಿಕಿತ್ಸಕರ ತಂಡ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಿಮೊಥೆರಪಿ ಚಿಕಿತ್ಸೆ ನೀಡಿದ್ದರಿಂದ, ಹೆಚ್ಚಿನ ಪ್ರಮಾಣದ ಬಿಎಂಟಿ ಔಷಧಿಗಳ ಅಗತ್ಯತೆ ಇತ್ತು ಮತ್ತು ತೀವ್ರವಾದ ಕಾಯಿಲೆಯಿಂದ ಜೀವಕ್ಕೆ ಅಪಾಯಕಾರಿಯಾಗಿತ್ತು. ಈ ನಿಟ್ಟಿನಲ್ಲಿ ಈ ಚಿಕಿತ್ಸೆ ಸವಾಲಿನಿಂದ ಕೂಡಿತ್ತು ಎಂದು ಮಾಹಿತಿ ನೀಡಿದ್ದಾರೆ.
ವಿಶೇಷ ಪರವಾನಗಿ ಪಡೆದ ಕಿದ್ವಾಯಿ:
ಬಿಎಂಟಿ ಸೇವೆಗಳಿಗಾಗಿ ಹೋಟಾ (ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ಕಾಯ್ದೆ, 1994) ಪರವಾನಗಿಯನ್ನು ಪಡೆದಿದ್ದು, ಈ ಚಿಕಿತ್ಸೆಯ ಮೂಲಕ ಮತ್ತೊಂದು ಸಾಧನೆಯನ್ನು ಮಾಡಿದೆ. ಈ ಪ್ರಮಾಣ ಪತ್ರವನ್ನು ಪಡೆದ ಕರ್ನಾಟಕದ ಕೆಲ ಆಸ್ಪತ್ರೆಗಳಲ್ಲಿ ಕಿದ್ವಾಯಿ ಕೂಡ ಒಂದಾಗಿದೆ ಎಂದು ಹೇಳಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸಂಸ್ಥೆಯ ನಿರ್ದೇಶಕ ಡಾ. ನವೀನ್ ಟಿ. ಅವರಿಗೆ ವಿದ್ಯುಕ್ತವಾಗಿ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದ್ದಾರೆ ಮತ್ತು ಬಾಲಕನಿಗೆ ಅತ್ಯಂತ ಯಶಸ್ವಿಯಾಗಿ ಚಿಕಿತ್ಸೆ ನೀಡಿರುವ ವೈದ್ಯರ ತಂಡವನ್ನು ಅಭಿನಂದಿಸಿ ಶ್ಲಾಘಿಸಿದ್ದಾರೆ.














