ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಲಸಿರುವ ಕರಾವಳಿ ಭಾಗದ ವಿವಿಧ ಸಂಘಟನೆಗಳನ್ನು ಒಂದೇ ಸೂರಿನಡಿ ತರಲು ಕರಾವಳಿ ಒಕ್ಕೂಟ ರಚಿಸಲು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉದ್ಯಮಿ, ಮೈಸೂರಿನ ದಕ್ಷಿಣ ಕನ್ನಡ, ಕರಾವಳಿ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರೋಡ್ರಿಗಸ್ ಪ್ರಕಟಿಸಿದರು.
ಭಾನುವಾರ ಸಂಜೆ ನಗರದ ಟೌನ್ ಹಾಲ್ನಲ್ಲಿ ರಾಘು ಮಾಸ್ಟ್ರು ತುಳು ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಈ ವೇಳೆ ದಕ್ಷಿಣ ಕನ್ನಡ, ಕರಾವಳಿ ಬೆಂಗಳೂರು ಜಿಲ್ಲಾ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ಒಗ್ಗಟ್ಟಿನ ಘೋಷಣೆ ಮಾಡಿದರು. ನಿರ್ಧಾರದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಗ್ರೇಶಿಯನ್ ರೋಡ್ರಿಗಸ್, ಬೆಂಗಳೂರಿನಲ್ಲಿ ಕರಾವಳಿ ಮೂಲದ ಸುಮಾರು 40ಕ್ಕೂ ಹೆಚ್ಚು ವಿವಿಧ ಜಾತಿಯ ಹಾಗೂ ಭಾಷಿಕ ಸಂಘಟನೆಗಳು ಸಕ್ರಿಯವಾಗಿವೆ. ಬಂಟ್ಸ್, ಬಿಲ್ಲವ, ನವಾಯತ್ ಮುಸ್ಲಿಂ, ಬ್ಯಾರಿ, ಜಿಎಸ್ಬಿ, ಕೊಂಕಣಿ ಕ್ರಿಶ್ಚಿಯನ್ ಹಾಗೂ ಬ್ರಾಹ್ಮಣ ಸಂಘಟನೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ.ಈ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ ಒಕ್ಕೂಟ ರಚಿಸುತ್ತಿರುವುದು ಐತಿಹಾಸಿಕ ಹೆಜ್ಜೆಯಾಗಿದೆ ಎಂದರು.
ಉದ್ಯೋಗ ಹಾಗೂ ವಿವಿಧ ಕಾರಣಗಳಿಂದ ಬೆಂಗಳೂರಿನಲ್ಲಿ ನೆಲಸಿರುವ ಕರಾವಳಿ ಭಾಗದ ಜನರು ಒಗ್ಗೂಡುವುದರಿಂದ ಸಮುದಾಯದ ಹಕ್ಕುಗಳು ಮತ್ತು ಸರ್ಕಾರದ ಸಿಎ ಸೈಟ್ನಂತಹ ಸೌಲಭ್ಯಗಳನ್ನು ಪಡೆಯಲು ಬಲ ಸಿಗಲಿದೆ. ಮೈಸೂರಿನಲ್ಲಿ ಈಗಾಗಲೇ ಕಳೆದ ನಾಲ್ಕು ವರ್ಷಗಳಿಂದ ಕರಾವಳಿ ಒಕ್ಕೂಟ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಡಿ ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಒಕ್ಕೂಟ ರಚನೆಯಾಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಗ್ರೇಶಿಯನ್ ರೋಡ್ರಿಗಸ್ ತಿಳಿಸಿದರು.
ಕಾರ್ಯಕ್ರಮದ ಸ್ಥಳದಲ್ಲಿ 40ಕ್ಕೂ ಹೆಚ್ಚು ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಒಕ್ಕೂಟ ರಚನೆಗೆ ಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.














