ಬೆಂಗಳೂರು: ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಅವರ ಸ್ಥಾನದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಕ್ರೈಸ್ತ ಮಹಾಸಭಾವತಿಯಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಪ್ರಜ್ವಲ್ ಸ್ವಾಮಿ ಮಾತನಾಡಿ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಅಂದಾಜು 1.5 ವರ್ಷ ಗತಿಸಿದರೂ ಸಮುದಾಯದ ಅಭಿವೃದ್ಧಿಗೆ ಮೀಸಲಾಗಿರಿಸಿರುವ 250 ಕೋಟಿ ಅನುದಾನದಲ್ಲಿ ಇಲ್ಲಿಯವರಗೆ ಕೇವಲ 85 ಕೋಟಿ ರೂಪಾಯಿ ಅನುದಾನ ಮಾತ್ರ ಖರ್ಚು ಮಾಡಲಾಗಿದೆ. ಅದೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡದೇ ಹೆಚ್ಚಾಗಿ ಕೇವಲ ಲೋನ್ಗಳಿಗೆ ಮಾತ್ರ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇಂತಹ ಅಧ್ಯಕ್ಷರು,ಉಪಾಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಅಸಮರ್ಪಕ ಬೇಜವಾಬ್ದಾರಿಯುತ ಹಾಗೂ ಇಂತಹ ಪದವಿಗಳಿಗೆ ತರಲವಲ್ಲದ ರೀತಿಯಿ ಕಾರ್ಯನಿರ್ವಹಣೆಯಿಂದಾಗಿ ಸಕಾಲದಲ್ಲಿ ಅನುದಾನ ಬಳಕೆ ಮಾಡದೇ ಇರುವುದರಿಂದ ಕ್ರಿಶ್ಚಿಯನ್ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕ್ರಿಶ್ಚಿಯನ್ ಸಮುದಾಯಕ್ಕೆ ಉತ್ತಮ ಅನುದಾನ ಮಂಜೂರು ಮಾಡಿದರೂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಕಾಲ-ಕಾಲಕ್ಕೆ ಹೊಸ ನೀತಿ -ನಿಯಮಗಳನ್ನು ತರುತ್ತಿರುವುದರಿಂದ ಕ್ರೈಸ್ತ ಸಮುದಾಯದ ಜನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇಲ್ಲಸಲ್ಲದ ದಾಖಲೆಗಳನ್ನು ಪಡೆಯಲು ಪರದಾಡುವ ಪರಿಸ್ಥಿತಿ ನಿರ್ಮಾಣ ಮಾಡಿ ಸರ್ಕಾರಿ ಸೌಲಭ್ಯಗಳು ದೊರೆಯದಂತೆ ದಾರಿ ತಪ್ಪಿಸಿ ನಿಗಮದಿಂದ ಸವಲತ್ತುಗಳು ಸಿಗದಂತಹ ಪರಿಸ್ಥಿತಿ ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರೋಪಗಳಲ್ಲಿ ಆಧಾರವಿಲ್ಲ; ಉಪಾಧ್ಯಕ್ಷ ಸಂಜಯ್ ಜಾಗೀರ್ದಾರ್
ಕ್ರೈಸ್ತ ಸಮುದಾಯ ಮಹಾಸಭೆಯ ಸದಸ್ಯರು ಪ್ರತಿಭಟನೆ ನಡೆಸಿ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದ್ದು, ಇದರಲ್ಲಿ ಯಾವುದೇ ಆಧಾರಗಳಿಲ್ಲ ಎಂದು ಕ್ರೈಸ್ತ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಸಂಜಯ್ ಜಾಗೀರ್ದಾರ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಸ್ಥಾಪನೆಯಾಗಿ ಒಂದು ವರ್ಷಕ್ಕೆ ರಾಜ್ಯ ಸರ್ಕಾರ 250ಕೋಟಿ ರೂಪಾಯಿ ಒದಗಿಸಿದೆ ಇದರಲ್ಲಿ ಸರ್ಕಾರದಿಂದ 85ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದು ಈ ಹಣದಲ್ಲಿ ಪಾರದರ್ಶಕವಾಗಿ ವಿವಿಧ ಯೋಜನೆಗಳಿಗೆ ಹಣ ಒದಗಿಸಲಾಗುತ್ತಿದ್ದು, ಚರ್ಚ್ ಸಮುದಾಯ ನಿರ್ಮಾಣಕ್ಕೆ ರಾಜ್ಯದ ವಿವಿಧೆಡೆಯಿಂದ ಅರ್ಜಿಗಳು ಬಂದಿದ್ದು ಅವೆಲ್ಲವನ್ನೂ ದಾಖಲೆಗಳನ್ನು ಪರಿಶೀಲಿಸಿ ಅನುದಾನ ಒದಗಿಸಲಾಗುತ್ತದೆ ಎಂದರು.
ಪ್ರತಿಭಟನೆ ಮಾಡಿದವರು ಯಾರೂ ಕೂಡ ಅರ್ಜಿ ಹಾಕಿಲ್ಲ ಸಮಸ್ಯೆಗಳಿದ್ದರೆ ಬಂದು ಮಾತನಾಡಲ್ಲಿ. ಇದುವರೆಗೂ 14ಸಾವಿರ ಜನರಿಗೆ ನಿಗಮದ ಸವಲತ್ತುಗಳನ್ನು ಒದಗಿಸಲಾಗಿದೆ. ಎಲ್ಲವನ್ನೂ ಪಾರದರ್ಶಕವಾಗಿ ನಡೆಸಲಾಗುತ್ತದೆ. ವಿನಾ ಕಾರಣ ಈ ರೀತಿ ಗೊಂದಲ ಮೂಡಿಸುವುದು ಸರಿಯಲ್ಲ, ಯಾವುದೇ ತಪ್ಪುಗಳಿದ್ದರೆ ನಿಗಮಕ್ಕೆ ಬಂದು ಬೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಹೇಳಿದರು.















