ಬೆಂಗಳೂರು: ದಲಿತರು ತಮ್ಮ ವಿಮೋಚನೆಗಾಗಿ, ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಸ್ವತಂತ್ರ ರಾಜಕೀಯ ಪಕ್ಷವನ್ನು ಸ್ಥಾಪಿಸಿಕೊಳ್ಳುವುದು ಅಗತ್ಯ ಎಂದು ಸಾಹಿತಿ, ಲೇಖಕ ಕೋಟಗನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ಬುಧವಾರ ರಾಜ್ಯ ದಲಿತ ಸಂಘರ್ಷ ಸಮಿತಿವತಿಯಿಂದ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬುದ್ಧ, ಬಸವ ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಜಾ ಪ್ರಭುತ್ವದಲ್ಲಿ ದಲಿತರ ಸ್ಥಾನಮಾನ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು, ದಲಿತ ವಿಮೋಚನೆಗಾಗಿ ಸ್ವಂತ ನಾನೇ ವಿಮೋಚನಾ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದೇನೆ. ಯಾವುದೇ ಅನುದಾನ ಪಡೆಯದೇ ಸ್ವಂತವಾಗಿ ಬೆಟ್ಟ ಒಂದರಲ್ಲಿ ಸ್ಥಾಪನೆ ಮಾಡಲಾಗಿದೆ. ಅಂಬೇಡ್ಕರ್ ಚಿಂತನೆಯಂತೆ ರಾಜಕೀಯವನ್ನು ಆಧ್ಯಾತ್ಮಿಕರಣಗೊಳಿಸುವ ಅಗತ್ಯವಾಗಿದ್ದು, ಈ ಪ್ರಯತ್ನದಲ್ಲಿದ್ದೇನೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಚಾಲಕ ಶ್ಯಾಮರಾವ್ ಘಾಟ್ಗೆ ಮಾತನಾಡಿ, ದಲಿತರು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಆತ್ಮವಲೋಕನ ಮಾಡಿಕೊಳ್ಳುವ ಅವಶ್ಯವಿದೆ. ಅಂಬೇಡ್ಕರ್ ಚಿಂತನೆಯಂತೆ ದಲಿತರು ರಾಜಕೀಯವಾಗಿ ಸ್ವತಂತ್ರರಾಗುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನ್ಮೋಖರಾಗಬೇಕು ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಮತ್ತು ಅಂಬೇಡ್ಕರ್ ವಾದಿ ಸಿ.ರಾವಣ್ಣ, ಕೋಟಗಾನ ಹಳ್ಳಿ ರಾಮಯ್ಯ ಅವರ ಚಿಂತನೆಯಂತೆ ದಲಿತರು ತಮ್ಮ ಸಮಾಜಿಕ, ಆರ್ಥಿಕ, ರಾಜಕೀಯ ವಿಮೋಚನೆಗಾಗಿ ಸ್ವತಂತ್ರ ರಾಜಕೀಯ ಪಕ್ಷ ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ರಾಜ್ಯ ಸಂಘಟನಾ ಸಂಚಾಲಕ ವೆಂಕಟೇಶ ಮೂರ್ತಿ ಆನೇಕಲ್ ಮಾತನಾಡಿ, ಬುದ್ದ, ಬಸವಣ್ಣ, ಅಂಬೇಡ್ಕರ್ ಅವರ ಚಿಂತನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಅನೇಕ ಪ್ರಗತಿಪರ ಚಿಂತಕರು, ಹೋರಾಟಗಾರರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ ಎಂದರು.
ರಾಜ್ಯ ಸಂಘಟನಾ ಸಂಚಾಲಕ ಕೆಂಪಯ್ಯ ಸಾಗ್ಯ, ದಲಿತ ಹಿರಿಯ ಮುಖಂಡ ಸಿ.ಸಿದ್ಧಲಿಂಗಯ್ಯ, ರಾಜ್ಯ ಸಂಚಾಲಕ ಚಂದ್ರು ಚಕ್ರವರ್ತಿ, ವಿಭಾಗೀಯ ಸಂಚಾಲಕ ದಾಸರಹಳ್ಳಿ ಭುವನೇಶ್ವರ್ ಮತ್ತಿತರರು ಭಾಗವಹಿಸಿದ್ದರು.














