ಬೆಂಗಳೂರು: ರಾಜ್ಯದಲ್ಲಿ ನಡೆದ 2030 ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ 39 ಶಾಸಕರನ್ನು ವೀರಶೈವ ಲಿಂಗಾಯತ ಸಮಾಜ ಆಯ್ಕೆ ಮಾಡಿ ಕಳಿಸಿದ್ದು, ನೊಳಂಬ ಲಿಂಗಾಯತ ಸಮುದಾಯಕ್ಕೆ ಸೇರಿದ ಕೆ.ಷಡಕ್ಷರಿಯವರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕು ಎಂದು ನೊಳಂಬ ಲಿಂಗಾಯತ ಸಂಘ ಒತ್ತಾಯಿಸಿದೆ.
ಶನಿವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿಳಿಗೆರೆ ಕೆ.ಚಂದ್ರಶೇಖರ್, ಕಲ್ಪತರು ನಾಡು ತಿಪಟೂರು ಕ್ಷೇತ್ರದಿಂದ 4 ಬಾರಿ ಷಡಕ್ಷರಿಯವರು ಜಯಬೇರಿ ಬಾರಿಸಿದ್ದು, ದಕ್ಷ ಹಾಗೂ ಪ್ರಮಾಣಿಕವಾಗಿ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಉತ್ತಮ ಸಹಕಾರಿಗಳಾಗಿದ್ದಾರೆ ಎಂದರು.
ರಾಜ್ಯದ ಭೂ ಅಭಿವೃದ್ಧಿ ಬ್ಯಾಂಕಿಗೆ 2 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜದ ಪ್ರಮುಖ ನಾಯಕರಾಗಿದ್ದಾರೆ. ಆದ್ದರಿಂದ ಅವರಿಗೆ ಕ್ಯಾಬಿನೆಟ್ ದರ್ಜೆ ಮಂತ್ರಿ ಸ್ಥಾನ ನೀಡುವುದರ ಮೂಲಕ ಅವರ ಸೇವೆಯನ್ನು ರಾಜ್ಯದ ಉದ್ದಗಲಕ್ಕೂ ಬಳಸಿಕೊಳ್ಳಬೇಕು, ಕ್ಯಾಬಿನೆಟ್ ದರ್ಜೆಯ ಮಂತ್ರಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಗೌರವ ಕಾರ್ಯದರ್ಶಿ ಕೆ.ಬಿ.ಶಶಿಧರ್ ಕಾಮನಕೆರೆ ಮಾತನಾಡಿ, ಈ ಹಿಂದೆ ಈ ಕ್ಷೇತ್ರದ ಶಾಸಕರಾಗಿದ್ದ ನೊಳಂಬ ಸಮಾಜದ ಟಿ. ಹೆಚ್. ಮಂಜುನಾಥ್ ಅವರಿಗೆ ಕಾಂಗ್ರೆಸ್ ಪಕ್ಷ ಮಂತ್ರಿ ಪದವಿಯನ್ನು ನೀಡಿತ್ತು, ನೊಳಂಬ ಲಿಂಗಾಯತ ಸಮಾಜ ತುಮಕೂರು ಜಿಲ್ಲೆ ಒಳಗೊಂಡು ಮಧ್ಯ ಕರ್ನಾಟಕದ 12 ಜಿಲ್ಲೆಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಬಹುತೇಕ ಕ್ಷೇತ್ರಗಳಲ್ಲಿ ರಾಜಕೀಯ ತೀರ್ಮಾನಗಳನ್ನು ನಿರ್ಣಾಯಕವಾಗಿ ತೆಗೆದುಕೊಳ್ಳುವ ಶಕ್ತಿಯನ್ನು ಸಮಾಜ ಹೊಂದಿದೆ. ಕ್ಯಾಬಿನೆಟ್ನಲ್ಲಿ ಷಡಕ್ಷರಿಯವರಿಗೆ ಅವಕಾಶ ಕಲ್ಪಿಸಿ ಸೇವೆ ಮಾಡಲು ಅನುವು ಮಾಡಿಕೊಡುವ ಮೂಲಕ ಈ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.














