ಬೆಂಗಳೂರು: ಕರ್ನಾಟಕ ರಾಜ್ಯದ ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಸೆಸ್ಕಾಂ ಹೆಸ್ಕಾಂ, ಜೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ಮುಂಬೈ ಮೂಲದ ಟಾಟಾ ಪವರ್ ಕಂಪನಿ ಲಿಮಿಟೆಡ್ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಸಲಹೆ/ಆಕ್ಷೇಪಣೆ ಆಹ್ವಾನಿಸಿರುವುದನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಒಕ್ಕೂಟ ಖಂಡಿಸಿದೆ.
ಈ ಕುರಿತು ಮಂಗಳವಾರ ಸಂಜೆ ಪ್ರೆಸ್ ಕ್ಲಬ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಒಕ್ಕೂಟದ ರಾಜ್ಯ ಅಧ್ಯಕ್ಷ ಬಲರಾಮ್ ಕೆ, ರಾಜ್ಯದ ಜನತೆಯ ಅಸ್ತಿಯಾಗಿರುವ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವ ಈ ಹಿಂಬಾಗಿಲಿನ ಯತ್ನವು ಕೇವಲ ನೌಕರರ ವಿರೋಧಿಯಷ್ಟೇ ಅಲ್ಲದೆ ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲಾ ವಿದ್ಯುತ್ ಕಂಪನಿಗಳು ನುರಿತ ಸಿಬ್ಬಂದಿ, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವಿತರಣಾ ಜಾಲ, ಉಪಕೇಂದ್ರಗಳು ಯಂತ್ರೋಪಕರಣಗಳ ಬೃಹತ್ ಮೂಲಸೌಕರ್ಯವನ್ನು ಹೊಂದಿವೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾದ ಈ ಬೃಹತ್ ವ್ಯವಸ್ಥೆಯನ್ನು ಲಾಭದ ಆಸೆಗೆ ಖಾಸಗಿ ಸಂಸ್ಥೆಗೆ ಪರಭಾರೆ ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿಕಾರಿದರು.
ಒಕ್ಕೂಟದ ಮಹಾ ಪ್ರಧಾನ ಕಾರ್ಯದರ್ಶಿ ಬಸವಣ್ಣ ಸಿ ಮಾತನಾಡಿ, ಖಾಸಗಿ ಕಂಪನಿಗಳ ಏಕೈಕ ಧೈಯ ಲಾಭಾಂಶವಾಗಿದ್ದು, ಅವರು ಕೇವಲ ಕೈಗಾರಿಕೆ ಮತ್ತು ವಾಣಿಜ್ಯ ವಲಯದಂತಹ ಹೆಚ್ಚು ಲಾಭ ತರುವ ನಗರ ಪ್ರದೇಶಗಳ ಮೇಲೆ ಕಣ್ಣಿಡುತ್ತಾರೆಯೇ ಹೊರತು ಗ್ರಾಮೀಣ ಭಾಗಕ್ಕಲ್ಲ. ಇದರಿಂದಾಗಿ ಸಾರ್ವಜನಿಕ ವಲಯದ ಎಸ್ಕಾಂಗಳು ತೀವ್ರ ನಷ್ಟ ಅನುಭವಿಸಿ. ಭವಿಷ್ಯದಲ್ಲಿ ಗ್ರಾಮೀಣ ವಿದ್ಯುತ್ ಜಾಲ ಸಂಪೂರ್ಣ ಕುಸಿಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಸಿರು ಕ್ರಾಂತಿಗೆ ಕಾರಣವಾವಾಗಿರುವ ರೈತರ ಉಚಿತ ಪಂಪ್ಸೆಟ್ ವಿದ್ಯುತ್, ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರಜ್ಯೋತಿಯಂತಹ ಜನಸಾಮಾನ್ಯರ ಹಾಗೂ ಬಡವರ ಯೋಜನೆಗಳ ಯಶಸ್ಸಿನ ಹಿಂದೆ ನಮ್ಮ ನೌಕರರ ಹಗಲಿರುಳಿನ ಶ್ರಮವಿದೆ. ಖಾಸಗಿ ಕಂಪನಿಗಳು ಇಂತಹ ಯಾವುದೇ ಸಾಮಾಜಿಕ ಬದ್ಧತೆಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದಿಲ್ಲ ಆದ್ದರಿಂದ ಟಾಟಾ ಪವರ್ ಕಂಪನಿ ಲಿಮಿಟೆಡ್ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಕೆ.ಇ.ಆರ್.ಸಿ ಗೆ ಮನವಿ ಮಾಡಿದರು.
ಈ ವೇಳೆ ಒಕ್ಕೂಟದ ಹಲವು ಪದಾಧಿಕಾರಿಗಳು, ಕೆಪಿಟಿಸಿಎಲ್ ನೌಕರರು ಉಪಸ್ಥಿತರಿದ್ದರು.














