ಬೆಂಗಳೂರು: ಬಸವನಗುಡಿಯ ಬಿ.ಎಂ.ಎಸ್ ಕಾಲೇಜ್ ಆಫ್ ಲಾ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಮಿಲನೋತ್ಸವ- 2026 ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ಉತ್ಸಾಹಭರಿತವಾಗಿ ಹಾಗೂ ಸಂಸ್ಥೆಯ ಗೌರವವನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಯಶಸ್ವಿಯಾಗಿ ನೆರವೇರಿತು.
ವಿವಿಧ ಬ್ಯಾಚ್ಗಳ ಹಳೆ ವಿದ್ಯಾರ್ಥಿಗಳು ಭಾಗವಹಿಸಿ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಂವಾದ ನಡೆಸಿದರು. ವೇದಿಕೆಯಲ್ಲಿ ಪ್ರಾಂಶುಪಾಲೆ ಪ್ರೊ. ಡಾ. ಅನಿತಾ ಎಫ್ ಎನ್ ಡಿಸೋಜಾ, ಪ್ರಾಧ್ಯಾಪಕರುಗಳಾದ ಪ್ರೊ. ಡಾ. ಸುಜಾತಾ, ಡಾ. ನಳಿನಿ, ಪ್ರೊ. ಡಾ. ಸಿ ವೀರಭದ್ರಯ್ಯ ಹಾಗೂ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಸಿ.ವಿ. ಸುಧೀಂದ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಿ.ವಿ. ಸುಧೀಂದ್ರ ಅವರು ಬಿ.ಎಂ.ಎಸ್ ಕಾಲೇಜ್ ಆಫ್ ಲಾ ಸಂಸ್ಥೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿಯಾಗಿದ್ದು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತಮ್ಮ ಭಾಷಣದಲ್ಲಿ ಅವರು, 1978ರಲ್ಲಿ ಕಾಲೇಜಿಗೆ ಸೇರಿದ ದಿನಗಳನ್ನು ಸ್ಮರಿಸಿಕೊಂಡು ವಿದ್ಯಾರ್ಥಿ ಜೀವನದ ಅಮೂಲ್ಯ ಅನುಭವಗಳನ್ನು ಹಂಚಿಕೊಂಡರು. ಶಿಸ್ತು, ಪರಿಶ್ರಮ, ನೈತಿಕತೆ ಹಾಗೂ ನಿರಂತರ ಅಧ್ಯಯನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಪ್ರೇರಣಾದಾಯಕ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಹಳೆ ವಿದ್ಯಾರ್ಥಿಗಳ ನೆನಪುಗಳ ಹಂಚಿಕೆ ಕಾರ್ಯಕ್ರಮದಲ್ಲಿ ಹಲವರು ತಮ್ಮ ವಿದ್ಯಾರ್ಥಿ ದಿನಗಳ ಸ್ಮರಣೆಗಳನ್ನು ಹಂಚಿಕೊಂಡು ಭಾವನಾತ್ಮಕ ಕ್ಷಣಗಳನ್ನು ಸೃಷ್ಟಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ಮತ್ತಷ್ಟು ಕಳೆ ತುಂಬಿದವು.
ಮಿಲನೋತ್ಸವ 2026 ಕಾರ್ಯಕ್ರಮವು ಬಿ.ಎಂ.ಎಸ್ ಕಾಲೇಜ್ ಆಫ್ ಲಾ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ನಡುವಿನ ಶಾಶ್ವತ ಬಾಂಧವ್ಯವನ್ನು ಮತ್ತೊಮ್ಮೆ ಬಲಪಡಿಸಿ, ಸಂಸ್ಥೆಯ ಏಕತೆ, ಮಾರ್ಗದರ್ಶನ ಹಾಗೂ ಪರಂಪರೆಯನ್ನು ಸ್ಮರಣೀಯಗೊಳಿಸಿತು.














