ಬೆಂಗಳೂರು/ಬೆಳಗಾವಿ: ಮಕ್ಕಳನ್ನು ಕೇವಲ ಶಾಲೆಗೆ ಕಳುಹಿಸುವುದು ಮಾತ್ರವಲ್ಲ, ಶಿಕ್ಷಣದ ಜೊತೆ ಭಾರತದ ಸಾಂಸ್ಕೃತಿಕ ವಿರಾಸತ್ ಮತ್ತು ಸಂಸ್ಕೃತಿಯನ್ನು ಕಲಿಸಬೇಕಿದೆ ಎಂದು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ, ನೂತನ ಮತ್ತು ನವೀಕೃತ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಭಾನುವಾರ ಕರ್ನಾಟಕ ಲಿಂಗಾಯತ ಎಜುಕೇಶನ್ ಸೊಸೈಟಿಯ ಕೆ. ಎಫ್. ಪಾಟೀಲ್ ಶಾಲೆಯ ನೂತನ ನಾಮಕರಣ ಸಮಾರಂಭ ರಾಜಾಜಿನಗರದ ಎಸ್.ನಿಜಲಿಂಗಪ್ಪ ಕ್ಯಾಂಪಸ್ ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ವಿವೇಕತೆಯ ದಾರಿಯನ್ನು ತೋರುತ್ತದೆ. ದೇಶಕ್ಕೆ ವಿವೇಕಾಂತರ ಕೊಡುಗೆ ಅಪಾರವಾಗಿದೆ. ಇದೇ ಮಾದರಿಯಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳು, ಪುಟ್ಟರಾಜ ಗವಾಯಿಗಳು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ಜೀವನ ರೂಪಗೊಂಡಿದ್ದು, ಈ ಕುರಿತು ಪೋಷಕರು, ಶಿಕ್ಷಕರು ಗಮನವಹಿಸಬೇಕು ಎಂದರು.
ಕೆ.ಎಲ್.ಇ ಸಂಸ್ಥೆ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಗುಣಮಟ್ಟದ ಶಿಕ್ಷಣ, ನೈತಿಕ ಮೌಲ್ಯಗಳು ಮತ್ತು ಆಧುನಿಕ ತಂತ್ರಜ್ಞಾನಾಧಾರಿತ ಕಲಿಕೆಯನ್ನು ಒಟ್ಟುಗೂಡಿಸಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಜ್ಞಾನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ಭವಿಷ್ಯದ ಸಶಕ್ತ ನಾಗರಿಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ಶಿಕ್ಷಣದ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ವ್ಯಾಖ್ಯಾನಿಸಿದರು.
ಪ್ರಭಾಕರ್ ಕೋರೆಯವರು ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿದ್ದು, ಈ ಶಾಲೆಯ ನಾಮಕರಣ ಉದ್ಘಾಟನೆಗೆ ಪ್ರಧಾನಿ ಮೋದಿಯವರ ಬದಲಿಗೆ ನನ್ನನ್ನು ಆಹ್ವಾನಿಸಿದ್ದಾರೆ. ಇದು ಅತ್ಯಂತ ಸಂತೋಷ ತಂದಿದೆ. ಶಾಲೆಗೆ ಕೆ.ಎಫ್ .ಪಾಟೀಲರ ಹೆಸರು ನಾಮಕರಣ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದರು.
ವಿಧಾನ ಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಎಂ.ಲಮಾಣಿ, ಖ್ಯಾತ ಚಿತ್ರ ನಿರ್ಮಾಪಕಿ ಹಾಗೂ ಲೈಫ್ ಅರುಣಾರಾಜೆ ಪಾಟೀಲ, ಡಾ.ಪ್ರಭಾಕರ್ ಬಿ.ಕೋರೆ, ಬೆಳಗಾವಿಯ ಕೆಎಲ್ ಇ ಸೊಸೈಟಿಯ ಅಧ್ಯಕ್ಷ ಮಹಾಂತೇಶ್ ಎಸ್. ಕೌಜಲಗಿ, ಬೋರ್ಡ್ ಆಪ್ ಮ್ಯಾನೇಜ್ಮೆಂಟ್ ನ ಚೇರ್ಮನ್ ಅಮಿತ್ ಪಿ.ಕೋರೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.















