ಬೆಂಗಳೂರು: ಕೃಷಿ ಇಲಾಖೆಯಲ್ಲಿನ ನೇಮಕಾತಿ ಪ್ರಕ್ರಿಯೆಗೆ ಒಳಮೀಸಲಾತಿ ಜಾರಿಗೊಳಿಸದೇ ಅಧಿಸೂಚನೆ ಹೊರಡಿಸಿರುವುದು ಗಂಭೀರ ಪ್ರಮಾಸಾಗಿದ್ದು, ತಕ್ಷಣವೇ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಯುವ ಸಮೂಹ ರಾಜ್ಯಾಧ್ಯಕ್ಷ ಎಸ್. ಸಂಗಮೇಶ್ ಆಗ್ರಹಿಸಿದರು.
ಈ ಸಂಬಂಧ ಮಂಗಳವಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಕೃಷಿ ಇಲಾಖೆ ಆಯುಕ್ತರಿಗ ಮನವಿ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಅನುಸೂಚಿತ ಜಾತಿಗಳ ಉಪ-ವರ್ಗೀಕರಣ ವಿಧೇಯಕ–2025 ರಾಜ್ಯಪಾಲರ ಅಂಕಿತ ಪಡೆದಿದ್ದು, ರಾಜ್ಯಪತ್ರ ಪ್ರಕಟಣೆ ಹಂತದಲ್ಲಿದೆ. ಒಳಮೀಸಲಾತಿ ಜಾರಿಗೆ ಕಾಯದೇ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿಗೆ ತುರಾತುರಿಯಲ್ಲಿ ಅನುಮತಿ ನೀಡಿರುವುದು ಸರಿಯಲ್ಲ ಎಂದು ತಿಳಿಸಿದರು.
ಕೃಷಿ ಇಲಾಖೆಯ ಕಾರ್ಯದರ್ಶಿಗಳ ನಿರ್ದೇಶನದಂತೆ, ಮುಂಬರುವ ಸಚಿವ ಸಂಪುಟದ ತೀರ್ಮಾನಗಳನ್ನು ಲೆಕ್ಕಿಸದೇ ತೆಗೆದುಕೊಳ್ಳಲಾದ ಈ ಕ್ರಮವು ಸಾಮಾಜಿಕ ನ್ಯಾಯದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಅಲ್ಲದೆ, ಇಲಾಖೆಯ ಆಯುಕ್ತರು ಪೂರ್ವಾಪರಗಳ ಪರಿಶೀಲನೆ ನಡೆಸದೆ ಅಧಿಸೂಚನೆ ಹೊರಡಿಸಿರುವುದು ಆಡಳಿತಾತ್ಮಕ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಒಳಮೀಸಲಾತಿ ಜಾರಿಗೆ ಸಂಬಂಧಿಸಿದ ಸಮೀಕ್ಷೆಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆ ದತ್ತಾಂಶವನ್ನು ಕಡೆಗಣಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಸುವುದು ಸಂಪೂರ್ಣ ಅನರ್ಥಕವಾಗುತ್ತದೆ. ಮುಖ್ಯವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಏಕವ್ಯಕ್ತಿ ಆಯೋಗದ ಶಿಫಾರಸ್ಸುಗಳನ್ನು ಈ ಕ್ರಮ ಗಾಳಿಗೆ ತೂರಿದತಾಗುತ್ತದೆ ಮತ್ತು ಸರ್ಕಾರದ ಸಾಮಾಜಿಕ ನ್ಯಾಯದ ಬದ್ಧತೆಯ ಮೇಲೆಯೇ ಪ್ರಶ್ನೆ ಮೂಡಿಸುತ್ತದೆ ಎಂದು ಹೇಳಿದರು.
ಪ್ರಸ್ತುತ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದರೆ ಒಳಮೀಸಲಾತಿ ಹಂಚಿಕೆಯ ಘೋಷಣೆ ಆಗುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಎಸ್. ಸಂಗಮೇಶ್ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಅಗ್ನಿ ಅಜಿತ್ ಜೊತೆಗಿದ್ದರು.















