ಬೆಳಗಾವಿ: ಪಾರವಾಡ ಗ್ರಾಪಂ ಪಿಡಿಒ ವೀರೇಶ ಸಜ್ಜನ ಅವರು ಲಂಚಕ್ಕೆ ಬೇಡಿಕೆ ಇಟ್ಟ ಆಡಿಯೊ ಬಹಿರಂಗವಾದ ಪ್ರಕರಣದಲ್ಲಿ ಅವರಿಗೆ ಬೆಳಗಾವಿ ಜಿಪಂ ಸಿಇಒ ನೋಟಿಸ್ ಜಾರಿ ಮಾಡಿ ಉತ್ತರಿಸುವಂತೆ ಸೂಚಿಸಿದ್ದಾರೆ.
ಪಾರವಾಡ ಗ್ರಾಪಂ ಪಿಡಿಒ ವೀರೇಶ ಸಜ್ಜನ ಅವರು ಲಂಚಕ್ಕೆ ಬೇಡಿಕೆ ಇಟ್ಟ ಆಡಿಯೊವನ್ನು ಬಹಿರಂಗ ಮಾಡಿದ್ದ ಪ್ರಜಾ ನೆರಳು ದಿನ ಪತ್ರಿಕೆ ಈ ಬಗ್ಗೆ ವಿಸ್ತೃತವಾದ ವರದಿಯನ್ನು ಪ್ರಕಟಿಸಿತ್ತು. ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಪಂ ಸಿಇಒ ಅವರು ಸಜ್ಜನ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ತನಿಖೆಗಾಗಿ ಮೂರು ಜನ ಅಧಿಕಾರಿಗಳ ಕಮಿಟಿಯನ್ನು ನೇಮಿಸಿದ್ದಾರೆ.
ವೀರೇಶ ಸಜ್ಜನ ಅವರು ಗುತ್ತಿಗೆದಾರರೊಬ್ಬರೊಂದಿಗೆ ದೂರವಾಣಿ ಕರೆಯಲ್ಲಿ ಮಾತನಾಡಿ, ದುಡ್ಡು ಕೊಟ್ಟರೆ ಮಾತ್ರ ಎನ್.ಎಂ.ಆರ್ ಹಾಕುತ್ತೇನೆ ಎಂದು ಹೇಳಿದ ಆಡಿಯೊ ಬಹಿರಂಗವಾಗಿತ್ತು. ಅಲ್ಲದೆ ಗುತ್ತಿಗೆದಾರನಿಂದ ತಮ್ಮ ಹೆಂಡತಿಯ ಅಕೌಂಟಿಗೆ ಫೋನ್ ಮಾಡಿಸಿಕೊಂಡ ದಾಖಲೆಗಳನ್ನು ಕೂಡ ಪ್ರಜಾನೆರಳು ದಿನಪತ್ರಿಕೆ ಜನರ ಮುಂದೆ ಇಟ್ಟಿತ್ತು. ಇದೀಗ ಈ ಪ್ರಕರಣದಲ್ಲಿ ಅಧಿಕೃತ ತನಿಖೆ ಆರಂಭವಾದಂತಾಗಿದೆ.
ಪಾರವಾಡ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಈ ಪ್ರಕರಣದ ತನಿಖೆಯ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಪಿಡಿಒ ಸಜ್ಜನ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಈಗ ಜನತೆಯ ಭರವಸೆ ಹುಸಿಯಾಗದಂತೆ ನಿಷ್ಪಕ್ಷಪಾತವಾದ ತನಿಖೆ ನಡೆಯುವಂತೆ ನೋಡಿಕೊಳ್ಳುವುದು ಜಿಪಂ ಸಿಇಒ ರಾಹುಲ್ ಶಿಂದೆ ಅವರ ಕರ್ತವ್ಯವಾಗಿದೆ. ಸಿಇಒ ಅವರ ನಡೆಯನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಭ್ರಷ್ಟ ಪಿಡಿಒ ವಿರುದ್ಧ ಕ್ರಮ ಆಗುವಂತೆ ಒತ್ತಾಯಿಸಿದ್ದಾರೆ.
ಒಟ್ಟಾರೆ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿರುವ ಜನತೆ, ಪಾರವಾಡ ಸುತ್ತಮುತ್ತಲಿನ ಗ್ರಾಪಂಗಳಿಗೆ ಸಿಇಒ ಸಾಹೇಬರು ಖುದ್ದಾಗಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸುವಂತೆ ಕೂಡ ಆಗ್ರಹಿಸಿದ್ದಾರೆ. ಪಿಡಿಒ ವೀರೇಶ ಸಜ್ಜನ ಅವರ ಲಂಚ ಬೇಡಿಕೆ ಆಡಿಯೊದ ವಿಚಾರ ರಾಜ್ಯ ಸರ್ಕಾರದ ಗಮನಕ್ಕೂ ಬಂದಿದ್ದು, ಸದರಿ ಪ್ರಕರಣದ ಬಗ್ಗೆ ವರದಿ ಸಲ್ಲಿಸುವಂತೆ ಬೆಳಗಾವಿಗೆ ಜಿಲ್ಲಾ ಪಂಚಾಯಿತಿಗೆ ಸರ್ಕಾರ ಸೂಚಿಸಿದೆ.















