ಬೆಳಗಾವಿ: ಅಖಿಲ ಕರ್ನಾಟಕ ಚರ್ಮಕಾರರ ಮಹಾ ಸಭಾ ವತಿಯಿಂದ ಸಮಗಾರ, ಮಚಿಗಾರ, ಡೋರಾ ಮತ್ತು ಮೂಲ ಚರ್ಮೋದ್ಯೋಗ ಸಂಬಂಧಿತ ಉಪ ಜಾತಿಗಳ ವಿವಿಧ ಬೇಡಿಕೆಗಳ ಹಕ್ಕೊತ್ತಾಯಕ್ಕಾಗಿ ಮಂಗಳವಾರ ಬೆಳಗ್ಗೆ 10 ರಿಂದ 4 ಗಂಟೆಯವರೆಗೆ ಸುವರ್ಣ ವಿಧಾನ ಸೌಧದ ಮುಂದೆ ಧರಣಿ ಹೋರಾಟಕ್ಕೆ ಕರೆ ನೀಡಲಾಗಿದೆ.
ಈ ಕುರಿತು ಮಾತನಾಡಿರುವ ಮಹಾ ಸಭಾದ ಅಧ್ಯಕ್ಷ ಭೀಮರಾವ ಪವಾರ, ಕಳೆದ 75 ವರ್ಷಗಳಿಂದ ಚರ್ಮಕಾರ ಜಾತಿಗಳಾದ ಸಮಗಾರ. ಮಚಗಾರ, ಡೋರಾ ಮತ್ತಿತರ 23 ಜಾತಿಗಳನ್ನು ಎಡಗೈ ವರ್ಗದಲ್ಲಿ ಸೇರಿಸಿದ್ದ ಕಾರಣ ಪರಿಶಿಷ್ಟ ಮೀಸಲಾತಿಯ ಬಹುಪಾಲು ಸೌಲಭ್ಯಗಳು ಮುಂಚೂಣಿಯಲ್ಲಿದ್ದ ಬಲಾಡ್ಯ ಜಾತಿಗಳಿಗೆ ತಲುಪಿ ಚರ್ಮಕಾರರಂತಹ ಹಲವಾರು ಸಣ್ಣ ಪುಟ್ಟ ಜಾತಿಗಳಿಗೆ ಪರಿಣಾಮಕಾರಿಯಾಗಿ ತಲುಪಿಲ್ಲ ಎಂದು ಅದಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಗಿದೆ ಎಂದು ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯ ಸಣ್ಣ ಪುಟ್ಟ ಜಾತಿಗಳಿಗೂ ಮೀಸಲಾತಿ ತಲುಪುವಂತ ಒಲವರ್ಗೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿ 2024 ರಲ್ಲಿಯೇ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿಯ ಎಲ್ಲ ಜಾತಿಗಳಿಗೂ ಮೀಸಲಾತಿಯ ಸೌಲಭ್ಯ ತಲುಪುವಂತೆ ಉಪವರ್ಗೀಕರಣ ಮಾಡುವ ಜವಾಬ್ದಾರಿಯನ್ನು ಸರ್ಕಾರ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ನಾಗಮೋಹನದಾಸ ಆಯೋಗಕ್ಕೆ ವಹಿಸಿಕೊಟ್ಟಿತ್ತು. ನಂತರ ತಮಗೆ ಪ್ರತ್ಯೇಕ ಮೀಸಲಾತಿ ನಿಗದಿಪಡಿಸಬೇಕೆಂದು ಚರ್ಮಕಾರರ ಮಹಾ ಸಭಾ ವತಿಯಿಂದ ಹಲವಾರು ಬರಿ ಮನವಿಯನ್ನು ಸಲ್ಲಿಸಿ ಹೋರಾಟ ಮಾಡಿದ್ದೇವೆ, ಆದರೆ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿಲ್ಲ ಎಂದು ದೂರಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 2011 ರ ಜನಗಣತಿಯ ಅನುಸಾರ 7,22,900 ರಷ್ಟಿದ್ದ ಚರ್ಮಕಾರರ ಜನಸಂಖ್ಯೆ 14 ವರ್ಷಗಳ ನಂತರ 2025 ರಲ್ಲಿ 9.5 ರಿಂದ 10 ಲಕ್ಷಕ್ಕೆ ಏರಿದೆ. ಆದರೆ 2025 ರಲ್ಲಿ ಒಳಮೀಸಲಾತಿಯ ವರ್ಗೀಕರಣ ಮಾಡಲು ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿಗಳ ಆಯೋಗವು 6,22,337 ಎಂದು 2011ರ ಜನಸಂಖ್ಯೆಗಿಂತಲೂ ತನ್ನ ವರದಿಯಲ್ಲಿ ಕಡಿಮೆ ತೋರಿಸಿದೆ. ಈ ಮೊದಲಿದ್ದ ಎಡಗೈ ವರ್ಗವನ್ನೇ ಗ್ರೂಪ್- ಎ ಎಂದು ಮರುನಾಮಕರಣ ಮಾಡಿ ಶೇಕಡ 6% ಮೀಸಲಾತಿ ನೀಡಿ ಮತ್ತದೇ ವರ್ಗದಲ್ಲಿ ಬಲಾಢ್ಯ ಎಡಗೈ ವರ್ಗದೊಂದಿಗೆ ಸೇರಿಸಿ ವರದಿ ಸಲ್ಲಿಸಿದೆ. ಈ ವರದಿಯ ಅನ್ವಯ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ 75 ವರ್ಷಗಳಿಂದ ವಂಚಿತವಾಗಿದ್ದ ಚರ್ಮಗಾರರಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಸಹ ಪ್ರತ್ಯೇಕ ಮೀಸಲಾತಿ ದೊರಕದೇ ವಂಚಿತ ವರ್ಗವಾಗಿ ಯಥಾಸ್ಥಿತಿಯಲ್ಲಿಯೇ ಉಳಿದು ಮತ್ತೆ ಬಲಾಢ್ಯ ಜಾತಿಯ ಪ್ರಭಾವದಿಂದ ಕಡೆಗಣಿಸಲ್ಪಪಟ್ಟಂತೆ ಆಗಿದೆ ಎಂದು ಭೀಮರಾವ ಪವಾರ ಬೇಸರ ವ್ಯಕ್ತಪಡಿಸಿದ್ದಾರೆ.














