ಬೆಳಗಾವಿ: ಖಾನಾಪುರ ತಾಲೂಕಿನ ಪಾರವಾಡ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿಷಯದಲ್ಲಿ ಹಿಂದಿನ ಪಿಡಿಒ ವೀರೇಶ ಸಜ್ಜನ ಅವರ ಕಾರ್ಯವೈಖರಿಯ ಬಗ್ಗೆ ತನಿಖೆ ಮಾಡುವುದಾಗಿ ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿ ರಂದೀಪ್ ಡಿ ತಿಳಿಸಿದರು.
ಸೋಮವಾರ ಪ್ರಜಾನೆರಳು ದಿನಪತ್ರಿಕೆಯ ಸಂಪಾದಕ ಸಾಗರ ಕೋಳೇಕರ ಅವರೊಂದಿಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ಪಾರವಾಡ ಗ್ರಾಮ ಪಂಚಾಯಿತಿಯ ಬಗ್ಗೆ ಈಗಾಗಲೇ ನಮಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದ ವೀರೇಶ ಸಜ್ಜನರ ಅವರು ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ಪ್ರಜಾನೆರಳು ದಿನಪತ್ರಿಕೆ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಸದ್ಯ ಈ ವರದಿಯ ಫಲಶೃತಿ ಕಂಡು ಬಂದಿದ್ದು, ಈ ವಿಚಾರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ಬಂದಿದೆ.
ಇದೇ ಮಾದರಿಯಲ್ಲಿ ಕಣಕುಂಬಿ, ಅಮಟೆ, ಗೊಲ್ಯಾಳಿ, ಬೈಲೂರ, ನೀಲಾವಡೆ ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಅಕ್ರಮಗಳು ನಡೆದಿರುವ ಆರೋಪಗಳಿದ್ದು, ಈ ಬಗ್ಗೆಯೂ ಹಿರಿಯ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಅಕ್ರಮಗಳ ಬಗ್ಗೆ ಪತ್ರಿಕೆಯು ಮುಂದಿನ ದಿನಗಳಲ್ಲಿ ವರದಿ ಮಾಡಲಿದೆ.














