ವಿಶೇಷ ವರದಿ: ವಿಲಾಸ ಕವಠಣಕರ, ಖಾನಾಪುರ ; ಸತೀಶ ಎಸ್. ಕಾಳಗಿ, ಬೆಳಗಾವಿ
ಖಾನಾಪುರ, ಮೇ ೩೧- ಕಳೆದೊಂದು ವಾರದಿಂದ ಖಾನಾಪುರ ಹಾಗೂ ವಿಶೇಷವಾಗಿ ಜಾಂಬೋಟಿ ಭಾಗದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಇಲ್ಲಿನ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲ ತಿಂಗಳುಗಳಿಂದ ಒಣಗಿ ಹೋಗಿದ್ದ ನದಿ ತೊರೆಗಳು ಮೈದುಂಬಿ ಹರಿಯಲಾರಂಭಿಸಿದ್ದು, ಇಲ್ಲಿನ ಪ್ರಕೃತಿ ವೈಭವ ಮರುಕಳಿಸಿದೆ.
ಜಾಂಬೋಟಿ- ಚೋರ್ಲಾ – ಪಣಜಿ ಮಾರ್ಗ ಬಂದ್; ಈಗ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿ ಪ್ರವಾಹದ ಮಟ್ಟದಲ್ಲಿ ಹರಿಯುತ್ತಿದ್ದು, ಮಳೆ ಹೀಗೆಯೇ ಮುಂದುವರಿದಲ್ಲಿ ಬೆಳಗಾವಿಯಿಂದ ಪಣಜಿಗೆ ಸಂಪರ್ಕ ಕಲ್ಪಿಸುವ ಜಾಂಬೋಟಿ- ಚೋರ್ಲಾ – ಪಣಜಿ ಮಾರ್ಗ ಬಂದ್ ಆಗಿಯೇ ಮುಂದುವರಿಯುವ ಸಾಧ್ಯತೆಗಳಿವೆ.
ಕುಸಮಳಿ ಹತ್ತಿರ ಮಲಪ್ರಭಾ ನದಿಗೆ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಬ್ರಿಟಿಷರು ಕಟ್ಟಿದ್ದ ಹಳೆಯ ಸೇತುವೆಯನ್ನು ತೆಗೆದು ಈ ಜಾಗದಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಈ ಸೇತುವೆ ನಿರ್ಮಾಣ ಜಾಗದ ಪಕ್ಕದಲ್ಲಿಯೇ ಪೈಪ್ ಗಳನ್ನು ಜೋಡಿಸಿ ತಾತ್ಕಾಲಿಕ ಸೇತುವೆಯ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಆದರೆ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ನೀರು ಈ ಸೇತುವೆಗೆ ತಾಗಿಕೊಂಡು ಹರಿಯುತ್ತಿದೆ. ಇನ್ನು ನೀರಿನ ಮಟ್ಟ ಮತ್ತಷ್ಟು ಹೆಚ್ಚಾದಲ್ಲಿ ಈ ಸಣ್ಣ ಸೇತುವೆಯ ಮೂಲಕ ಸಂಚಾರ ಬಂದ್ ಆಗಲಿದೆ.
ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆಯ ಅರ್ಧದಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದೂವರೆ ತಿಂಗಳು ಬೇಕಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ಸೇತುವೆಯ ವೈಶಿಷ್ಟ್ಯಗಳು: ಹೊಸ ಸೇತುವೆಗೆ ಒಟ್ಟು ಏಳು ಗೇಟ್ ಅಳವಡಿಸಲಾಗುತ್ತಿದೆ. ಈ ಪೈಕಿ ಮೂರು ಗೇಟ್ ಗಳ ಸ್ಲ್ಯಾಬ್ ಕಾಮಗಾರಿ ಮುಗಿದಿದೆ. ಇನ್ನುಳಿದ ಗೇಟ್ ಗಳ ಸ್ಲ್ಯಾಬ್ ಕೆಲಸ ನಡೆಯುತ್ತಿದೆ. ಸ್ಲ್ಯಾಬ್ ಹಾಕಲು ಕನಿಷ್ಠ ೧೫ ದಿನ ಎಂದುಕೊಂಡರೂ ಒಟ್ಟಾರೆ ಇನ್ನೂ ಒಂದೂವರೆ ತಿಂಗಳು ಬೇಕಾಗಬಹುದು.
ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಥಳೀಯ ಶಾಸಕ ವಿಠ್ಠಲ ಹಲಗೇಕರ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರು ಇಲ್ಲಿಗೆ ಆಗಮಿಸಿ ಸೇತುವೆ ಕಾಮಗಾರಿಯ ಪ್ರಗತಿ ಪರಿಶೀಲನೆ ಮಾಡಿದ್ದಾರೆ.
ಸೇತುವೆ ಕಾಮಗಾರಿಯ ಬಗ್ಗೆ ಪ್ರಜಾ ನೆರಳು ಪತ್ರಿಕೆಯೊಂದಿಗೆ ಮಾತನಾಡಿದ ಬೈಲೂರ ಗ್ರಾಮ ಪಂಚಾಯತ್ ಅಧ್ಯಕ್ಷ ಆರೋಹಿ ಅನಂತ್ ಸಾವಂತ್, “ಕುಸಮಳಿ ಸೇತುವೆಯು ಬೆಳಗಾವಿ – ಚೋರ್ಲಾ ಮಾರ್ಗದ ಜಾಂಬೋಟಿ ಭಾಗದ ಜನರಿಗೆ ಮಹತ್ವದ ಸಂಪರ್ಕ ಕೊಂಡಿಯಾಗಿದೆ. ಹೀಗಾಗಿ ಸೇತುವೆ ಕಾಮಗಾರಿ ಶೀಘ್ರವೇ ಮುಗಿಯುವುದು ಅಗತ್ಯ. ಇದಕ್ಕಾಗಿ ನಾವೂ ಸಹ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ ” ಎಂದು ಹೇಳಿದರು.