ಬೆಂಗಳೂರು: ಪಶುಗಳಿಗೆ ನೀಡುವ ಆಹಾರದಲ್ಲಿ ಕಳಪೆ ಆಹಾರ ಪೂರೈಕೆ ಮಾಡಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಹಿಂದಿನ ಕೆಎಂಎಫ್ ನಿರ್ದೇಶಕ ಬಿ.ಶಿವಸ್ವಾಮಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಹಸಿರು ಸೇನೆ ಮತ್ತು ರೈತ ಸಂಘ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.
ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಪೆ ಪಶು ಆಹಾರ ಪೂರೈಕೆ ಸರ್ಕಾರಕ್ಕೆ ಸುಮಾರು 100 ಕೋಟಿ ರೂಪಾಯಿ ನಷ್ಟ ಉಂಟಾಗಿದೆ, ಈಗಾಗಲೇ ಈ ಪ್ರಕರಣದಲ್ಲಿ ಪಶು ಆಹಾರ ನಿರ್ದೇಶಕರಾದ ಜಯಕುಮಾರ್, ಉಪ ನಿರ್ದೇಶಕರಾದ ಮಲ್ಲಿಕಾರ್ಜುನ, ನಾಗೇಶ್ ಅವರನ್ನು ಅಮಾನತು ಮಾಡಲಾಗಿದೆ. ಕೆಎಂಎಫ್ ಖರೀದಿ ವಿಭಾಗದ ಜಿತೇಂದ್ರ ಅವರು ತಪ್ಪಸೇಗಿದ್ದರೂ ಇದುವರೆಗೂ ಅಮಾನತು ಮಾಡಿಲ್ಲ ಇವರನ್ನು ಕೂಡ ಕೂಡಲೇ ಅಮಾನತು ಮಾಡಬೇಕೆಂದು ಹೇಳಿದರು.
ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನವಿಲೆ ಅವರು ಪ್ರಧಾನ ವ್ಯವಸ್ಥಾಪಕರೊಂದಿಗೆ ಈ ಆಹಾರವನ್ನು ಪಶುಗಳು ತಿನ್ನುತ್ತಿಲ್ಲ ಎಂಬ ಮನವಿ ಮೇರೆಗೆ ಖಾಸಗಿ ಪಶು ಆಹಾರವನ್ನು ಸಂಗ್ರಹಿಸಿ ಗುಣ ನಿಯಂತ್ರಣ ವಿಭಾಗದಲ್ಲಿ ಪರೀಕ್ಷಿಸಿದಾಗ ಕಳಪೆ ಎಂಬುದು ಸಾಬೀತಾಗಿದೆ. ಕಳಪೆ ಪಶು ಆಹಾರ ಸರಬರಾಜು ವಿಚಾರದಲ್ಲಿ ಪಶು ಮತ್ತು ತೋಟಗಾರಿಕಾ ಅಧಿಕಾರಿಗಳು ಕೋಟಿ, ಕೋಟಿ ಅವ್ಯವಹಾರ ನಡೆಸಿರುವ ಬಗ್ಗೆ ಪೆನ್ ಡ್ರೈವ್ ಪೋನ್ ಸಂಭಾಷಣೆಯಿದ್ದು, ಬಹಿರಂಗ ಪಡಿಸುವುದಾಗಿ ತಿಳಿಸಿದರು.
ಪಶು ಆಹಾರ ವಿಚಾರದಲ್ಲಿ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬರಬೇಕಾದ 35 ಕೋಟಿ ರೂಪಾಯಿ ಹಣವನ್ನು ಇದುವರೆಗೂ ನೀಡಿಲ್ಲ, ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇನ್ನು ತೋಟಗಾರಿಕಾ ಇಲಾಖೆ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಪಾಲಿಹೌಸ್ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದು, ಅದರ ಅನ್ವಯ ರೈತರಿಗೆ ನೀಡಬೇಕಾದ ಸಬ್ಸಿಡಿಯನ್ನು ಕೂಡಲೆ ಬಿಡುಗಡೆ ಮಾಡಬೇಕು ಎಂದು ಕೊಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಪ್ರಸನ್ನ, ರೈತ ಮುಖಂಡರುಗಳಾದ ವೀರಭದ್ರ ಸ್ವಾಮಿ, ಭೈರೇಗೌಡ, ಶ್ರೀಕಾಂತ್, ಮುದ್ದೇಗೌಡ, ರಾಮಚಂದ್ರ ಗೌಡ, ಮತ್ತು ನೊಂದ ರೈತರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.














