ಬೆಂಗಳೂರು: ಪಶುವೈದ್ಯಾಧಿಕಾರಿಗಳ ನೇಮಕದಲ್ಲಿ ಸುಮಾರು 400 ಕೋಟಿಯ ಭ್ರಷ್ಟಾಚಾರ ನಡೆದಿದ್ದು, ಇದರ ಸಿಬಿಐ ತನಿಖೆ ಮಾಡಿಸಿ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ಕೆ.ಪಿ.ಎಸ್.ಸಿ ವಿದ್ಯಾರ್ಥಿಗಳ ಹೋರಾಟದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭ್ರಷ್ಟಾಚಾರ ಭ್ರಷ್ಟಾಚಾರವೇ; ಯಾರ ಅವಧಿಯಲ್ಲಿ ನೇಮಕಾತಿ ಆಗಿದೆ ಎಂಬುದು ಪರಿಗಣನೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸದನದಲ್ಲಿ ಸಮಗ್ರ ಚರ್ಚೆ:
ರಾಜ್ಯ ಸರಕಾರ ಸಿಬಿಐ ತನಿಖೆಗೆ ಕೊಡಲು ಯಾಕೆ ಮೀನಮೇಷ ಎಣಿಸುತ್ತಿದೆ? ಪಶುವೈದ್ಯಾಧಿಕಾರಿಗಳ ನೇಮಕದ 400 ಕೋಟಿ ರೂ ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಎಷ್ಟು ಪಾಲು ಬಂದಿದೆ? ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ ಆಡಬೇಡಿ; ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಕಲು ಕೆ.ಪಿ.ಎಸ್.ಸಿಯಲ್ಲಿ ಸುಧಾರಣೆ ತರಬೇಕಾಗುತ್ತದೆ. ಸದನದಲ್ಲಿ ಸಮಗ್ರ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.
ಯುವಜನರಿಂದ ಹೋರಾಟ:
ರಾಜ್ಯದ ಮೂಲೆಮೂಲೆಗಳಿಂದ ಯುವಜನರು ಹೋರಾಟ ಆರಂಭಿಸಿದ್ದಾರೆ. ಕೆ.ಪಿ.ಎಸ್.ಸಿಯಲ್ಲಿ ನಡೆದ ಹಗರಣ ಇದಾಗಿದೆ. 400 ಕೋಟಿಯ ಹಗರಣ ಇದಾಗಿದೆ. ಇಷ್ಟು ದೊಡ್ಡ ಹಗರಣದ ತನಿಖೆಯನ್ನು ಆಂತರಿಕ ಸಮಿತಿಗೆ ನೀಡಲು ಹೇಗೆ ಸಾಧ್ಯ? ಬೇಲಿಯೇ ಎದ್ದು ಹೊಲ ಮೇಯ್ದಾಗ ಆಂತರಿಕ ತನಿಖೆಯಿಂದ ನ್ಯಾಯ ಸಿಗಲಾರದು ಎಂದು ತಿಳಿಸಿದರು.
ಸಮಸ್ಯೆಯ ಕುರಿತು ಸದನದಲ್ಲಿ ಚರ್ಚೆ:
ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ನೀಡುವುದಾಗಿ ಹೇಳಿ ಯಾವುದೇ ನೇಮಕಾತಿ ಮಾಡದೇ ಯುವಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಇದಕ್ಕೆ ಸರಕಾರ, ಮುಖ್ಯಮಂತ್ರಿಗಳು ಉತ್ತರ ಕೊಡಬೇಕು. ಈ ಸಮಸ್ಯೆಯನ್ನು ಸದನದಲ್ಲೂ ಚರ್ಚಿಸಲಿದ್ದೇವೆ. ಇಡೀ ದೇಶದಲ್ಲಿ ಇಲ್ಲದ ಪರೀಕ್ಷಾ ಪದ್ಧತಿಯನ್ನು ಇಲ್ಲಿ ಜಾರಿಗೊಳಿಸುತ್ತಿರುವುದು ಯಾಕೆ? ಇವರು ಕಮಾಯಿ ದೃಷ್ಟಿಯಿಂದ ಭ್ರಷ್ಟಾಚಾರಕ್ಕಾಗಿ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ವಿಜಯೇಂದ್ರ ಆಕ್ಷೇಪಿಸಿದರು.














