ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಜನತಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ, ಆದರೆ ಈ ಬಾರಿ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ನಿರ್ಧಾರವನ್ನು ಪ್ರಕಟಿಸಿದೆ. ಸದಾ ತುಳಿತಕ್ಕೆ, ಶೋಷಣೆಗೆ, ನಿರ್ಲಕ್ಷಕ್ಕೆ ಒಳಗಾಗಿರುವ ತೃತೀಯ ಲಿಂಗಿಗಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಅವರಿಗೆ ಕಾನೂನು ಪದವಿ ಪಡೆಯಲು ಸಕಲ ಸಹಕಾರ ನೀಡುವುದಾಗಿ ಪ್ರಕಟಿಸದೆ.
ಈ ನಿರ್ಧಾರವನ್ನು ಗುರುವಾರ ವಿವೇಕಾನಂದ ಕಾನೂನು ಕಾಲೇಜಿನ ಎಸ್. ಟಿ ನಾರಾಯಣಗೌಡ ಆಡಿಟೋರಿಯಂ ನಲ್ಲಿ ನಡೆದ ಅರಸನಹಳ್ಳಿ ಎಂ ಮುನಿಸ್ವಾಮಯ್ಯ ಸ್ಮರಣಾರ್ಥ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು. ಈ ಸಂದರ್ಭದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪುರಸ್ಕಾರ ನೀಡುವ ಕಾರ್ಯವನ್ನು ಕೂಡ ಕೈಗೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಶೇಷ ಉಪನ್ಯಾಸ ನೀಡಿ ಮಾದ್ಯಮಗಳ ಜೊತೆ ಮಾತನಾಡಿದ ತೃತೀಯ ಲಿಂಗಿಗಳ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ, ಸಮಾಜದಲ್ಲಿ ತೃತೀಯ ಲಿಂಗಿಗಳು ಎಂದರೆ ನಿಕೃಷ್ಟವಾಗಿ ನೋಡಲಾಗುತ್ತದೆ. ಆದರೆ ಈ ದೃಷ್ಟಿಕೋನ ಬದಲಾಗಬೇಕಾದರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ತೃತೀಯ ಲಿಂಗಿಗಳ ಸಕಾರಾತ್ಮಕ ತೊಡಗಿಸಿಕೊಳ್ಳುವಿಕೆ ಮುಖ್ಯವಾಗಿದೆ. ತೃತೀಯ ಲಿಂಗಿಗಳಿಗೆ ಪ್ರವೇಶಾತಿಯನ್ನು ನೀಡಿ ಸದಾ ಪ್ರೋತ್ಸಾಹಿಸುತ್ತಿರುವ ಜನತಾ ಶಿಕ್ಷಣ ಸಂಸ್ಥೆ ಇದೀಗ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಅಧಿಕೃತ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಭಾವುಕರಾದರು.
ಇನ್ನೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಈ ಮಾದರಿಯಲ್ಲಿ ನಡೆದು ಮಂಗಳಮುಖಿಯರಿಗೆ ಸರಿಯಾದ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡಬೇಕು. ಶೈಕ್ಷಣಿಕವಾಗಿ ಮುಂದುವರೆದರೆ ಶೋಷಣೆಗೆ ಒಳಪಡುವುದು ಅದರಿಂದ ಪ್ರಭಾವಕ್ಕೆ ಒಳಗಾಗಿ ಅಪರಾಧ ಕೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ತಪ್ಪುತ್ತದೆ. ಶೈಕ್ಷಣಿಕ ವಿದ್ಯಾರ್ಹತೆಯಿಂದ ಈ ಸಮಾಜ ಅವರನ್ನು ಸಮಾನರಾಗಿ ಕಾಣಲಿದೆ ಎಂಬ ನಂಬಿಕೆ ನನ್ನದು ಎಂದು ಅಭಿಪ್ರಾಯಪಟ್ಟರು.
ತೀರಾ ತುಳಿತಕ್ಕೆ ಒಳಗಾಗಿದ್ದ ಒಂದು ವರ್ಗಕ್ಕೆ ಫ್ರೀ ಸೀಟ್ ನೀಡುವುದಾಗಿ ಅಧಿಕೃತ ಘೋಷಣೆ ಮಾಡಿರುವ ಜನತಾ ಶಿಕ್ಷಣ ಸಂಸ್ಥೆಯ ನಿರ್ಧಾರ ಐತಿಹಾಸಿಕ. ಇತರ ಶಿಕ್ಷಣ ಸಂಸ್ಥೆಗಳು ಈ ಮಾದರಿಯಲ್ಲಿ ನಡೆದು ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ರವಾನಿಸಬಹುದಾಗಿದೆ. ತಮ್ಮ ಇಡೀ ಜೀವನವನ್ನು ಸಾಮಾಜಿಕ ಹೋರಾಟಕ್ಕೆ ಮುಡಿಪಾಗಿಟ್ಟಿರುವ ಅಕ್ಕೈ ಪದ್ಮಶಾಲಿ ಅವರಿಗೆ ಸಂದ ಜಯವಾಗಿದೆ ಎಂದು ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ ನಾರಾಯಣಸ್ವಾಮಿ ಮಾಧ್ಯಮಗಳ ಮುಂದೆ ತಮ್ಮ ಸಂತೋಷವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹೆಚ್.ಎಂ.ಎಂ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಎಂ ಸಿ ನರೇಂದ್ರ, ಜನತಾ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಅಪ್ಪಾ ರೆಡ್ಡಿ ಹರೀಶ್, ಖಜಾಂಚಿ ಹೆಚ್.ಜಿ ಬಾಲಗೋಪಾಲ್, ವಿವೇಕಾನಂದ ಕಾನೂನು ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷೆ ಸಪ್ನಾ. ಎನ್, ಪ್ರಾಂಶುಪಾಲರ ಕೆ.ಬಿ ಕೆಂಪೇಗೌಡ ಉಪಸ್ಥಿತರಿದ್ದರು.














