ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ದೇಶಕ್ಕೆ ಮಾದರಿ ಸಂವಿಧಾನ ನೀಡಿದ ಮಹಾನ್ ನಾಯಕ ಅವರ ಜಯಂತಿ ಎಲ್ಲೆಡೆ ಆಚರಿಸುವ ಮೂಲಕ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ತಿಳಿಸಿದರು.
ರಾಜ್ಯ ಕೃಷಿ ಇಲಾಖೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕೃಷಿ ಪದವೀಧರ ಅಧಿಕಾರಿಗಳ ಸಂಘದಿಂದ ಕೃಷಿ ಆಯುಕ್ತಾಲಯದ ಸಂಗಮ ಸಭಾಂಗಣದಲ್ಲಿ ಏರ್ಪಡಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಸೇರಿದಂತೆ ಮಹನೀಯರ ಕುರಿತು ಕೇವಲ ಮಾತಿನ ಅಭಿಮಾನ ಬೇಡ. ಬದಲಾಗಿ ಅವರ ಆದರ್ಶ ಹಾಗೂ ಚಿಂತನೆಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿ.ಆರ್.ಅಂಬೇಡ್ಕರ್ ಅವರು ಅತಿದೊಡ್ಡ ಶ್ರೇಷ್ಠ ಗ್ರಂಥ ಸಂವಿಧಾನ ರಚನೆ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅವರ ಭಾವಚಿತ್ರವಿಟ್ಟು ಪೂಜಿಸಿ ಕೇವಲ ಮಾತಿನ ಅಭಿಮಾನ ತೋರುವ ಬದಲು ಪ್ರತಿಯೊಬ್ಬರು ಅವರ ಆದರ್ಶ, ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ವ್ಯಕ್ತಿ ಪೂಜೆಯ ಬದಲಾಗಿ ಮಹನೀಯರ ಆದರ್ಶಗಳನ್ನು ಅನುಕರಣೆ ಮಾಡುವಂತಾಗಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.
ಎಸ್ಸಿ, ಎಸ್.ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿರುಮಲೇಶ್ ಮಾತನಾಡಿ, ಸಮುದಾಯಗಳ ನಡುವೆ ಒಗ್ಗಟ್ಟು, ಸಹೋದರತ್ವ ಹಾಗೂ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಅದರಂತೆ ನಮ್ಮ ಸಂಘವು ಸದಸ್ಯರ ಏಳಿಗೆಗೆ ಸೀಮಿತವಾಗದೆ ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಅಧಿಕಾರಿಗಳು ದಕ್ಷತೆ, ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಸೇವೆ ನೀಡುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಸಾಮಾಜಿಕ ಹೋರಾಟಗಾರ ಶಶಿರಾಜ್ ಅರ್ತಲೆ, ಜಬೀನಾ ಖಾನಂ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಮಹನೀಯರ ಕುರಿತು ಪ್ರಧಾನ ಭಾಷಣ ಮಾಡಿದರು. ಕೃಷಿ ಇಲಾಕೆ ನಿರ್ದೇಶಕ ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್, ಸರ್ಕಾರಿ ನೌಕರ ಸಂಘದ ಹಿರಿಯ ಉಪಾಧ್ಯಕ್ಷ ಶಂಭೂಗೌಡ, ಚಿಂತಕಿ ಮಲ್ಲಿಗೆ ಸಿರಿಮನೆ, ರಮೇಶ್, ಸೇರಿದಂತೆ ಮತ್ತಿತರರು ಇದ್ದರು.














