ಬೆಂಗಳೂರು: ಜಿಬಿಎ ಸ್ಥಾಪನೆಯಾದ ನಂತರ ಚೊಚ್ಚಲ ಬಜೆಟ್ ನಾಲ್ಕು ಪಾಲಿಕೆಗಳು ಮಂಡಿಸಿದ್ದು, ಶನಿವಾರ ಕಟ್ಟಕಡೆಯದಾಗಿ ದಕ್ಷಿಣ ನಗರ ಪಾಲಿಕೆಯಿಯಿಂದ 3,826 ಕೋಟಿ ರೂ ವೆಚ್ಚದ ಬಜೆಟ್ ಪ್ರಸ್ತುತ ಪಡಿಸಲಾಗಿದೆ.
ಶನಿವಾರ ಬನಶಂಕರಿ ದೇವಸ್ಥಾನದ ಬಳಿಯಿರುವ ಬೆಂಗಳೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2026-27 ನೇ ಸಾಲಿನ ಬಜೆಟ್ ಮಂಡಿಸಲಾಗಿದ್ದು, ಈ ವೇಳೆ ಪಾರದರ್ಶಕತೆ ತರಲು ಸಂಪೂರ್ಣ ಇ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಹೇಳಲಾಗಿದೆ. ಸಿಬ್ಬಂದಿಗಳಿಗೆ ಸೂಕ್ತ ವೃತ್ತಿಪರ ಮತ್ತು ತಾಂತ್ರಿಕ ತರಬೇತಿಯನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಶಿಕ್ಷಣ ಸಂಶೋಧನೆ ಮತ್ತು ಆಡಳಿತದ ಸಮನ್ವಯ ಸಾಧಿಸಲು ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಆಡಳಿತ ವ್ಯವಸ್ಥೆಯ ಸಮಗ್ರ ಸುಧಾರಣೆಗೆ ಮುಂದಾಗಿದೆ. 2109 ಪೌರ ಕಾರ್ಮಿಕರನ್ನು ನೇರ ನೇಮಕಾತಿಯಡಿ ತರಲು ಹಲವು ಕ್ರಮಗಳನ್ನು ಘೋಷಿಸಲಾಗಿದೆ.
ಇನ್ನು ಬಜೆಟ್ ಸ್ವೀಕೃತಿಯನ್ನು 3,826 ಕೋಟಿ ರೂ ನಿಗಧಿಪಡಿಸಲಾಗಿದ್ದು, ರಾಜಸ್ವ ಅನುದಾನವಾಗಿ 103.97 ಕೋಟಿ ರೂ ಗಳನ್ನು ಹಾಗೂ 16 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ 128.29 ಕೋಟಿ ರೂ. ಗಳನ್ನು ನಿರೀಕ್ಷಿಸಲಾಗುತ್ತಿದೆ. ಹೊಸ ಜಾಹೀರಾತು ನೀತಿಯ ಮೂಲಕ 126 ಕೋಟಿ ರೂ ಗಳ ಆದಾಯವನ್ನು ಸಹ ನಿಗಧಿಪಡಿಸಲಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಸ್ಕೈ ವಾಲ್ಕ್ ಗಳ ಮೇಲೆ ಜಾಹೀರಾತುಗಳನ್ನು ಅಳವಡಿಕೆಗೆ ಮುಂದಾಗಲಾಗಿದೆ. ಮುಖ್ಯವಾಗಿ ಆಸ್ತಿ ತೆರಿಗೆಯನ್ನು ಹೆಚ್ಚಿಸದೇ 1,101ಕೋಟಿ ರೂ. ಗಳ ಆದಾಯವನ್ನು ಮತ್ತು ಬಿ ಖಾತೆಯನ್ನು ಎ ಖಾತೆಗೆ ಬದಲಾಯಿಸಲು 225 ಕೋಟಿ ರೂ. ಗಳನ್ನು ನಿರೀಕ್ಷಿಸಲಾಗಿದೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದು 40 ಕೋಟಿ ರೂ ಗಳ ಆದಾಯವನ್ನು ಸಹ ನಿರೀಕ್ಷಿಸಲಾಗಿದೆ.
ಗ್ರೇಡ್ ಸಪರೇಟರ್ ಮತ್ತು ಜಂಕ್ಷನ್ ಗಳ ಅಭಿವೃದ್ಧಿಗೆ 50.45 ಕೋಟಿ ರೂ ಗಳನ್ನು ಮೀಸಲಿರಿಸಲಾಗಿದೆ. ಬನಶಂಕರಿ ದೇವಸ್ಥಾನದಿಂದ ಹೊರವರ್ತುಲ ರಸ್ತೆಯ ಅಭಿವೃದ್ಧಿಗೆ 20 ಕೋಟಿ ರೂ. ಮತ್ತು ಬೇಗೂರು ಮುಖ್ಯ ರಸ್ತೆಯ ಅಗಲೀಕರಣಕ್ಕೆ 40 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.















