ಇಂದಿನ ವೇಗದ ಯುಗದಲ್ಲಿ ನೈತಿಕತೆ, ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ: ಕೆ.ವಿ.ಪ್ರಭಾಕರ್

WhatsApp
Telegram
Facebook
Twitter
LinkedIn

ಬೆಂಗಳೂರು: ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಚೇರಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ತು ಮಾಹಿತಿ ಆಯುಕ್ತರಾದ ಪತ್ರಕರ್ತರಿಗೆ ಸನ್ಮಾನಿಸಿ ಅಭಿನಂದನಾ ನುಡಿಗಳನ್ನು ಆಡಿದರು. ಇಂದು ಇಲ್ಲಿ ಸನ್ಮಾನಿತರಾಗುತ್ತಿರುವ ಐದೂ ಮಂದಿ ಪತ್ರಕರ್ತರಿಗೆ ಮತ್ತು ಇವರನ್ನು ಸನ್ಮಾನಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮೊದಲಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ಇವರಲ್ಲಿ ಸಿದ್ದರಾಜು ಅವರು ಹಿರಿಯರಾಗಿ ನಮಗೆಲ್ಲಾ ಮಾದರಿ ಆಗಿದ್ದವರು. ಉಳಿದವರು ನನ್ನ ಸಮಕಾಲೀನರಾಗಿ ಮಾದರಿಗಳಾಗಿರುವವರು. ಹಿರಿಯ ಮತ್ತು ಮಾದರಿ ಪತ್ರಕರ್ತರನ್ನು ಸನ್ಮಾನಿಸುವುದು ಕೇವಲ ಒಂದು ಶಿಷ್ಟಾಚಾರವಲ್ಲ, ಅದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಜಾಗೃತ ಕಣ್ಣುಗಳಿಗೆ ಸಲ್ಲಿಸುವ ಗೌರವವಾಗಿದೆ. ಇಲ್ಲಿ ಸನ್ಮಾನಿತರಾಗುತ್ತಿರುವ ಪತ್ರಕರ್ತ ಸ್ನೇಹಿತರು ದಶಕಗಳ ಕಾಲ ಸಮಾಜದ ಏರಿಳಿತಗಳನ್ನು ಹತ್ತಿರದಿಂದ ಕಂಡಿದ್ದಾರೆ. ಗೂಗಲ್, ಜಿ-ಮೇಲ್, ವಾಟ್ಸಾಪ್ ನಂತಹ ತಂತ್ರಜ್ಞಾನವಿಲ್ಲದ ಕಾಲದಿಂದ ಹಿಡಿದು ಅಪಾರ ತಂತ್ರಜ್ಞಾನದ ಹಾವಳಿಯ ಕಾಲಘಟ್ಟದ ಎರಡೂ ಸಂದರ್ಭಗಳ ಪತ್ರಿಕೋದ್ಯಮಕ್ಕೂ ಸಾಕ್ಷಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಂತ್ರಜ್ಞಾನ ಇಲ್ಲದಿದ್ದಾಗ ಸತ್ಯವನ್ನು ಹುಡುಕಿ ಹೊರತಂದ ಇವರ ಕಾಳಜಿ, ಪರಿಶ್ರಮ, ವೃತ್ತಿಪರತೆಗೆ  ಸನ್ಮಾನವು ಒಂದು ರೀತಿಯ ಮಾನ್ಯತೆ ತಂದು ಕೊಟ್ಟಿದೆ. ತಂತ್ರಜ್ಞಾನ ಇಲ್ಲದಿದ್ದಾಗಲೂ ಸತ್ಯದ ತೇರು ಎಳೆದ ಪತ್ರಕರ್ತರು, ಈಗ ತಂತ್ರಜ್ಞಾನದ ಯುಗದಲ್ಲೂ ಸತ್ಯ ಕಾಣಲು ಸಾಧ್ಯವಾಗದ ಯುವ ಪೀಳಿಗೆಗೆ ಪ್ರೇರಣೆ ಆಗಿದ್ದಾರೆ‌. ಇಂದಿನ ವೇಗದ ಯುಗದಲ್ಲಿ ನೈತಿಕತೆ ಮತ್ತು ವೃತ್ತಿಧರ್ಮವನ್ನು ಎತ್ತಿಹಿಡಿಯುವುದು ಸವಾಲಿನ ಕೆಲಸವಾಗಿದೆ. ಹಿರಿಯರನ್ನು ಗೌರವಿಸುವುದರಿಂದ, ಉದಯೋನ್ಮುಖ ಪತ್ರಕರ್ತರಿಗೆ ಮೌಲ್ಯಾಧಾರಿತ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಮತ್ತು ಸ್ಫೂರ್ತಿ ಮೂಡುತ್ತದೆ. ಈ ಅರ್ಥಪೂರ್ಣ ಕೆಲಸವನ್ನು ಕಾರ್ಯನಿರತ ಪತ್ರಕರ್ತರ ಸಂಘ ಮಾಡುತ್ತಿದೆ ಎಂದರು.

ಸಾಮಾಜಿಕ ಜವಾಬ್ದಾರಿಯನ್ನು ಗುರುತಿಸುವುದೂ ಜವಾಬ್ದಾರಿಯುತ ಕೆಲಸ. ಸಾಮಾಜಿಕ ಕಾಳಜಿಗಳನ್ನು ಕಾಪಾಡಿಕೊಂಡಿರುವವರನ್ನು ಗುರುತಿಸುವುದು ಮತ್ತು ಸನ್ಮಾನಿಸುವುದರಿಂದ ಸಮಾಜವು ಪ್ರಾಮಾಣಿಕ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ ಎಂಬ ಸಂದೇಶ ಕೊಟ್ಟಂತೆ ಆಗುತ್ತದೆ. ಇದು ಸಮಾಜದಲ್ಲಿ ಸತ್ಯವಂತರ, ಸಾಮಾಜಿಕ ಕಾಳಜಿ ಇಟ್ಟುಕೊಂಡವರ ಪರವಾಗಿ ನಿಲ್ಲುವ ಧೈರ್ಯವನ್ನು ತುಂಬುತ್ತದೆ. ಇತಿಹಾಸದ ಕೊಂಡಿಯಾದ ಹಿರಿಯ ಪತ್ರಕರ್ತರು ಒಂದು ಕಾಲಘಟ್ಟದ ಜೀವಂತ ಇತಿಹಾಸವಿದ್ದಂತೆ. ಅವರನ್ನು ಸನ್ಮಾನಿಸುವ ನೆಪದಲ್ಲಿ ಅವರ ಅನುಭವದ ನುಡಿಗಳನ್ನು ದಾಖಲಿಸುವ ಕೆಲಸವನ್ನೂ ಕಾರ್ಯನಿರತ ಪತ್ರಕರ್ತರ ಸಂಘ ಮಾಡಬೇಕು ಎಂದು ಕರೆ ನೀಡಿದರು.

ನಮ್ಮ ಹಿಂದಿನವರು ಮತ್ತು ಸಮಕಾಲೀನ ಮಾದರಿಗಳ ಮೂಲಕ ಇಂದಿನ ತಪ್ಪುಗಳನ್ನು ತಿದ್ದಿಕೊಳ್ಳಲು ಮತ್ತು ಭವಿಷ್ಯದ ದಾರಿಯನ್ನು ಕಂಡುಕೊಳ್ಳಲು ನಮಗೆ ಸಹಾಯ ಆಗುತ್ತದೆ. ನನಗಿರುವ ಸಾಧ್ಯತೆಗಳಲ್ಲೇ ಹೆಚ್ಚೆಚ್ವು ವೃತ್ತಿಬಾಂದವರಿಗೆ ಅವಕಾಶಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡಿದ್ದೇನೆ. ಈ ಜವಾಬ್ದಾರಿಯನ್ನು ನನಗೆ ಅವಕಾಶ ಇರುವವರೆಗೂ ನಾನು ಮಾಡುತ್ತಲೇ ಇರುತ್ತೇನೆ. ಇನ್ನೂ ಅನೇಕ ಹಿರಿಯರಿಗೆ ಮತ್ತು ಅನೇಕ ಸಮಕಾಲೀನ ಅರ್ಹರಿಗೆ ಅವಕಾಶಗಳು ದೊರೆತಿಲ್ಲ ಎನ್ನುವ ಅರಿವು ನನಗೂ ಇದೆ. ಮುಂದಿನ ದಿನಗಳಲ್ಲಿ ಉಳಿದ ಅರ್ಹರಿಗೂ ಅವಕಾಶ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು.

ವೃತ್ತಿಜೀವನದಿಂದ ನಿವೃತ್ತರಾದ ನಂತರ ಅಥವಾ ಇಳಿ ವಯಸ್ಸಿನಲ್ಲಿ ಅನೇಕ ಪತ್ರಕರ್ತರು ಆರ್ಥಿಕ ಅಥವಾ ಮಾನಸಿಕ ಏಕಾಂಗಿತನ ಅನುಭವಿಸುತ್ತಾರೆ ಎನ್ನುವುದ ಗೊತ್ತಿದೆ. ಇಂತಹ ಸಮಯದಲ್ಲಿ ಪತ್ರಕರ್ತರ ಸಂಘಗಳು, ಪ್ರೆಸ್ ಕ್ಲಬ್ ನಂತಹ ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸಿದರೆ, ಅವರಿಗೆ ಆತ್ಮವಿಶ್ವಾಸ ಮತ್ತು ಗೌರವಯುತ ಬದುಕು ನಡೆಸಲು ನೆರವಾಗುತ್ತದೆ. ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಈ ಸ್ತಂಭವನ್ನು ಭದ್ರವಾಗಿ ಕಟ್ಟಿದವರನ್ನು ಸನ್ಮಾನಿಸುವುದು ಎಂದರೆ ನಾವು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಿದಂತೆ ಎಂದು ಭಾವಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿದ್ದರಾಜು, ಬಿ.ಎಂ.ಹನೀಫ್, ಶಾಂತಕುಮಾರ್ ಹಾಗೂ ಮಾಹಿತಿ ಆಯುಕ್ತರಾದ ಮಹೇಶ್ ವಾಳ್ವೇಕರ್, ವೆಂಕಟ್ ಸಿಂಗ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷರ ಮದನ್ ಗೌಡ, ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಸೇರಿ ಸಂಘದ ಮುಖಂಡರು ಮತ್ತು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Praja Neralu   About Us
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon