ಬೆಂಗಳೂರು/ಮೈಸೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿ ಆಗಿರುವ ಅಧಿಕಾರಿಗೆ ಲಂಚ ಪಡೆದು ಭಡ್ತಿ ನೀಡಲಾಗಿದೆ ಎಂಬ ಗಂಭೀರ ಆರೋಪಗಳು ರಾಜ್ಯ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಈ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ದೂರುದಾರರ ಆರೋಪದ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಲಂಚ ಸ್ವೀಕರಿಸಿದ್ದಾರೆ. ಮುಡಾ ಮಾಜಿ ಆಯುಕ್ತ ಹಾಗೂ ಹಾಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಬಿ. ನಟೇಶ್ ಅವರಿಗೆ ಭಡ್ತಿ ನೀಡುವ ಸಲುವಾಗಿ ಬರೋಬ್ಬರಿ ರೂ.1.60 ಕೋಟಿ ಲಂಚ ಪಡೆಯಲಾಗಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.
ಈ ಆರೋಪಕ್ಕೆ ಪುಷ್ಠಿ ನೀಡುವಂತೆ ಹಣವನ್ನು ಸಾಗಣೆ ಮಾಡಿದ ಕಾರಿನ ಫೋಟೋ ಹಾಗೂ ಹಣ ವರ್ಗಾವಣೆ ಸಂದರ್ಭದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳ ದೂರವಾಣಿ ಸಂಖ್ಯೆಗಳ ಸಮೇತ ದಾಖಲೆಯನ್ನು ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ಅವರು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ದೂರುದಾರರ ಹೇಳಿಕೆಯಂತೆ, 09.02.2026ರಂದು ಕೋಟ್ಯಾಂತರ ರೂಪಾಯಿ ಹಣವನ್ನು ಅಕ್ರಮವಾಗಿ ವಹಿವಾಟು ಮಾಡಲಾಗಿದೆ. KA41C6723 ಸಂಖ್ಯೆಯ ಇಟಿಯಾಸ್ ಕಾರಿನಲ್ಲಿ ಈ ಹಣ ಸಾಗಿಸಲಾಗಿದೆ . ಬೆಂಗಳೂರಿನಿಂದ ಸುಮಾರು ಐದು ಬ್ಯಾಗುಗಳಲ್ಲಿ 9 ಕೋಟಿ ರೂಪಾಯಿಗೂ ಅಧಿಕ ನಗದು ಹಣವನ್ನು ಮೈಸೂರಿಗೆ ತರಲಾಗಿದೆ. ಈ ಹಣ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಅದು ಡಿ.ಬಿ. ನಟೇಶ್ ಅವರಿಗೆ ಸೇರಿದ್ದಾಗಿರಬಹುದು ಎಂಬ ಶಂಕೆಯನ್ನು ದೂರುದಾರರು ವ್ಯಕ್ತಪಡಿಸಿ ಅದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.















