ಬೆಂಗಳೂರು: ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಮಾದಿಗ ಯುವ ಸಮೂಹ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ. ಇದರ ಅಂಗವಾಗಿ, ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ನಿಟ್ಟಿನಲ್ಲಿ ಯುವ ಹೋರಾಟಗಾರರನ್ನು ಸಂಘಟಿಸಿ, ಚಲೋ ಬಾಗಲಕೋಟೆ– ಚಲೋ ದಾವಣಗೆರೆ ಚಳುವಳಿಗೆ ಕರೆ ನೀಡಲಾಗಿದೆ ಎಂದು ಮಾದಿಗ ಯುವ ಸಮೂಹದ ಸಂಚಾಲಕ ಎಸ್. ಸಂಗಮೇಶ್ ತಿಳಿಸಿದರು.
ಭಾನುವಾರ ಕರ್ನಾಟಕ ಮಾದಿಗ ಯುವ ಸಮೂಹದ 2ನೇ ತುರ್ತು ರಾಜ್ಯ ಮಟ್ಟದ ಸಭೆ ವಸಂತನಗರದ ಲಿಡ್ಕರ್ ಭವನದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಹನುಮೇಶ್ ಗುಂಡೂರ ಅವರು, ಒಳಮೀಸಲಾತಿ ವಿಷಯದಲ್ಲಿ ಮುಂದಿನ ಹೋರಾಟದ ಸ್ಪಷ್ಟ ದಿಕ್ಕು, ತೀರ್ಮಾನಗಳು ಹಾಗೂ ಕಾರ್ಯಯೋಜನೆಗಳು ಸ್ಪಷ್ಟವಾಗಿವೆ. ಈ ವಿಚಾರದಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದ ಎಲ್ಲಾ ಯುವ ಮುಖಂಡರು, ಯುವಕರು, ಯುವತಿಯರು ಹಾಗೂ ವಿದ್ಯಾರ್ಥಿಗಳು ಇನ್ನಷ್ಟು ಸಂಘಟಿತರಾಗಿ ಸಮುದಾಯದ ಹಿತಕ್ಕಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಸರ್ಕಾರ ಸಂಪೂರ್ಣ ಒಳಮೀಸಲಾತಿ ಜಾರಿಗೆ ತರುವವರೆಗೆ ಹೋರಾಟ ಎಂಬ ದೃಢ ಸಂದೇಶವನ್ನು ಯುವಶಕ್ತಿ ನೀಡಬೇಕಿದೆ. ನಮ್ಮ ಹಕ್ಕು— ನಮ್ಮ ಹೋರಾಟ— ಸಂಪೂರ್ಣ ಒಳಮೀಸಲಾತಿ ನಮ್ಮ ಗುರಿ ಎಂಬ ಘೋಷಣೆಯೊಂದಿಗೆ ಯಾತ್ರೆ ಮುಂದುವರೆದಿದ್ದು, ರಾಜ್ಯದಾದ್ಯಂತ ಗಮನ ಸೆಳೆಯುತ್ತಿದೆ. ಈ ಐತಿಹಾಸಿಕ ಹೋರಾಟದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಸಮಾಜದ ಬಂಧುಗಳು ಹಾಗೂ ಯುವಕರು ಮುಂದಾಗಬೇಕು ಎಂದು ಸಂಗಮೇಶ್ ಮನವಿ ಮಾಡಿದರು.
ಕರ್ನಾಟಕ ಮಾದಿಗ ಯುವ ಸಮೂಹದ ಮುಖಂಡರುಗಳಾದ ಹನುಮೇಶ್ ಗುಂಡೂರ, ಮಲ್ಲಿಕಾರ್ಜುನ ಬಾಂಬೇಕರ, ಡಾ. ನಾಗೇಶ್ ಕೆ.ಎನ್., ಮುರಳಿಧರ ಮೇಲಿನಮನಿ, ರವಿಕುಮಾರ್ ಮರಡಿಪುರ, ಪ್ರತಾಪ್ (ಬೆಂಗಳೂರು), ನಿಂಗರಾಜ ಗುಳೆ ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ 150 ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು.















